ಹೆದ್ದಾರಿ ಬದಿಯಲ್ಲೊಂದು ಅಕ್ರಮ HP ಪೆಟ್ರೋಲ್ ಪಂಪ್ !
ಸೇಂದಿ ಅಂಗಡಿಗೂ ಲೈಸನ್ಸ್ ಬೇಕು; ಇದಕ್ಕೆ ಬೇಡವೇ..?

ಬೆಳ್ತಂಗಡಿ : ಉಪ್ಪಿನಂಗಡಿ – ಗುರುವಾಯನಕೆರೆ ರಾಜ್ಯ ಹೆದ್ದಾರಿಯ ಬದಿಯಲ್ಲೇ ಗ್ರಾಮಪಂಚಾಯತ್ ಆಡಳಿತದ ಪರವಾನಿಗೆ ಪಡೆಯದೆ ಕೆಲವು ಸಮಯಗಳಿಂದ ನಂದಿತಾ ಪ್ರಭು ಎಂಬವರು ಅಕ್ರಮವಾಗಿ ಹೆಚ್.ಪಿ. ಪೆಟ್ರೋಲ್ ಪಂಪ್ ನಡೆಸುತ್ತಿರುವ ಪ್ರಕರಣವೊಂದು ಬೆಳಕಿಗೆ ಬಂದಿದ್ದು ಈ ಬಗ್ಗೆ ದ.ಕ. ಜಿಲ್ಲಾ ಪೊಲೀಸ್ ಅಧೀಕ್ಷಕರಿಗೂ ಉಪ್ಪಿನಂಗಡಿ ಪೊಲೀಸ್ ಠಾಣೆಗೂ ಸಾಮಾಜಿಕ ಕಾರ್ಯಕರ್ತ, ಗ್ರಾಮಪಂಚಾಯತ್ ಮಾಜಿ ಸದಸ್ಯ ಕೆ.ಎಸ್. ಅಬ್ದುಲ್ಲಾ ಎಂಬವರು ದೂರು ನೀಡಿದ್ದಾರೆ.
ಬೆಳ್ತಂಗಡಿ ತಾಲೂಕು ತಣ್ಣೀರುಪಂತ ಗ್ರಾಮಪಂಚಾಯತ್ ವ್ಯಾಪ್ತಿಯ ಕರಾಯ ಗ್ರಾಮದ ಕಲ್ಲೇರಿ ಎಂಬಲ್ಲಿ ಪರವಾನಿಗೆ ನವೀಕರಿಸದೆ ಅಥವಾ ಗ್ರಾಮಪಂಚಾಯತ್ ಆಡಳಿತದ ಪರವಾನಿಗೆ ಪಡೆಯದೆ ಅಕ್ರಮವಾಗಿ ಪೆಟ್ರೋಲ್ ಹಾಗೂ ಗ್ಯಾಸ್ ಮಾರಾಟ ಮಾಡುತ್ತಿರುವ ಬಗ್ಗೆ 25/01/2026ಕ್ಕೆ ಗ್ರಾ.ಪಂ. ಆಡಳಿತದ ಗಮನಕ್ಕೆ ತಂದಿದ್ದರೂ
ಈ ಬಗ್ಗೆ ಯಾವುದೇ ಕಾನೂನು ಕ್ರಮ ಕೈಗೊಳ್ಳದೆ ಅಧಿಕಾರಿಗಳು ನಿರ್ಲಕ್ಷ್ಯವಹಿಸಿದ್ದಾರೆ.
ಜನವರಿ 15 – 2026ಕ್ಕೆ ಪೆಟ್ರೋಲ್ ಪಂಪಿನ ಪೆಟ್ರೋಲ್ ಮಾರಾಟದ ಪರವಾನಿಗೆ ಅವಧಿ ಮುಗಿದಿದ್ದರೂ ನಿರಾತಂಕವಾಗಿ ಪೆಟ್ರೋಲ್ ಪಂಪ್ ನಲ್ಲಿ ಪೆಟ್ರೋಲ್ ಮಾರಾಟ ನಡೆಯುತ್ತಿದೆ.
30.07.2025ರ ಗ್ರಾಮಸಭೆಯಲ್ಲಿ ತಾಲೂಕು ಮಟ್ಟದ ಅಧಿಕಾರಿಗಳ ಉಪಸ್ಥಿತಿಯಲ್ಲಿ ಪೆಟ್ರೋಲ್ ಪಂಪ್ ನ ಅಸಮರ್ಪಕ ದಾಖಲೆ ಮತ್ತು ಕಾನೂನುಬಾಹಿರ ವ್ಯಾಪಾರವನ್ನು ಪ್ರಸ್ತಾಪಿಸಲಾಗಿದ್ದು ಈ ಬಗ್ಗೆ ಗಂಭೀರವಾಗಿ ಚರ್ಚೆ ನಡೆದಿತ್ತು. ಪಂಪ್ ಮಾಲಕರು ಸೂಕ್ತ ದಾಖಲೆಗಳನ್ನು ಸಲ್ಲಿಸದಿದ್ದಲ್ಲಿ ಅವರಿಗೆ ಪರವಾನಿಗೆ ನೀಡದಂತೆ ಗ್ರಾಮಸಭೆಯ ನೋಡೆಲ್ ಅಧಿಕಾರಿ, ತಾ.ಪಂ. ಕಾರ್ಯನಿರ್ವಹಣಾಧಿಕಾರಿ ಭವಾನಿ ಶಂಕರ್ ಸೂಚಿಸಿದ್ದು ನಿರ್ಣಯ ಕೈಗೊಂಡಿರುತ್ತಾರೆ ಎಂದು ದೂರಿನಲ್ಲಿ ವಿವರಿಸಲಾಗಿದೆ.

ಜನವರಿ 15 – 2026ಕ್ಕೆ ಪೆಟ್ರೋಲ್ ಪಂಪಿನ ಪೆಟ್ರೋಲ್ ಮಾರಾಟದ ಪರವಾನಿಗೆ ಮುಗಿದಿದ್ದರೂ, ಸದ್ರಿ ಮಾಲಿಕರಾದ ನಂದಿತಾ ಪ್ರಭು ರವರು ಅಕ್ರಮವಾಗಿ ಪೆಟ್ರೋಲ್ ಮಾರಾಟ ಮಾಡುತ್ತಿದ್ದಾರೆ. ಬೆಂಗಳೂರು ಲೋಕಾಯುಕ್ತ ಕಛೇರಿಯಲ್ಲಿ A.R.E 12.M.Y.S/comit/Lok/15005/2025/2 2.2.4 ಮಾರಾಟದ ಪರವಾನಿಗೆ ಕೊಟ್ಟಿರುವ ಬಗ್ಗೆ ಲಿಖಿತ ದೂರನ್ನು ನೀಡಿರುವುದಾಗಿಯೂ ದೂರಿನಲ್ಲಿ ತಿಳಿಸಲಾಗಿದೆ.
ಕಲ್ಲೇರಿ ಹೆಚ್.ಪಿ. ಪೆಟ್ರೋಲ್ ಪಂಪ್ ನಲ್ಲಿ ಪೆಟ್ರೋಲ್ ಹಾಗೂ ಗ್ಯಾಸ್ ಮಾರಾಟವು ಅನಧಿಕೃತವಾಗಿ ಅಕ್ರಮವಾಗಿ ಕಾನೂನು ವಿರುದ್ಧವಾಗಿ ನಡೆಯುತ್ತಿರುವುದರಿಂದ ಸಂಭಾವ್ಯ ಅನಾಹುತಗಳನ್ನು ತಪ್ಪಿಸುವ ನಿಟ್ಟಿನಲ್ಲಿ ಕೂಡಲೇ ತನಿಖೆ ನಡೆಸಿ ಅನಧಿಕೃತವಾಗಿ ಪೆಟ್ರೋಲ್ ಮಾರಾಟ ಮಾಡುತ್ತಿರುವ ಹೆಚ್ ಪಿ ಪೆಟ್ರೋಲ್ ಪಂಪ್ ಹಾಗೂ ಗ್ಯಾಸ್ ವಿತರಕರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕಾಗಿ ದೂರುದಾರ ಕೆ.ಎಸ್. ಅಬ್ದುಲ್ಲಾ ಒತ್ತಾಯಿಸಿದ್ದಾರೆ.














Post Comment