ಭಾರತೀಯ ಮಜ್ದೂರು ಸಂಘದ ಹೋರಾಟದ ಫಲಶ್ರುತಿ: ಕಾರ್ಮಿಕ ಸಂಹಿತೆ ತಿದ್ದುಪಡಿ

ವಿವಿಧ ಬೇಡಿಕೆಗಳ ಈಡೇರಿಕೆಗೆ ಕೇಂದ್ರ ಸಚಿವರ ಭರವಸೆ
ಮಂಗಳೂರು: ಕಾರ್ಮಿಕರ ಹಕ್ಕುಗಳು ಹಾಗೂ ಸಾಮಾಜಿಕ ಭದ್ರತೆಗಾಗಿ ಭಾರತೀಯ ಮಜ್ದೂರು ಸಂಘ ಬಿ.ಎಂ.ಎಸ್. ವತಿಯಿಂದ ಆಗಸ್ಟ್ 17ರಂದು ದೇಶಾದ್ಯಂತ ನಡೆಸಿದ ರಾಷ್ಟ್ರವ್ಯಾಪಿ ಪ್ರತಿಭಟನೆಗೆ ಮಹತ್ವದ ಫಲಶ್ರುತಿ ದೊರೆತಿದೆ ಎಂದು ಬಿ.ಎಂ.ಎಸ್. ದ.ಕ ಜಿಲ್ಲಾಧ್ಯಕ್ಷ ಅನಿಲ್ ಕುಮಾರ್ ಯು. ತಿಳಿಸಿದ್ದಾರೆ.
ಆಗಸ್ಟ್ 17ರ ಪ್ರತಿಭಟನೆಯ ಸಂದರ್ಭದಲ್ಲಿ ಸಲ್ಲಿಸಲಾದ ಮನವಿಯ ಮುಂದುವರಿದ ಭಾಗವಾಗಿ, ಸೆ.1ರಂದು ಬಿ.ಎಂ.ಎಸ್. ಅಖಿಲ ಭಾರತ ನಾಯಕತ್ವದ ನಿಯೋಗವು ಕೇಂದ್ರ ಕಾರ್ಮಿಕ ಮತ್ತು ಉದ್ಯೋಗ ಸಚಿವ
ಡಾ. ಮನ್ಸುಖ್ ಮಾಂಡವೀಯ ಅವರನ್ನು ಭೇಟಿ ಮಾಡಿ ಕಾರ್ಮಿಕ ಸಂಹಿತೆಗಳ ತಿದ್ದುಪಡಿ ಹಾಗೂ ವಿವಿಧ ಪ್ರಮುಖ ಬೇಡಿಕೆಗಳ ಕುರಿತು ಸವಿಸ್ತಾರವಾಗಿ ಮಾತುಕತೆ ನಡೆಸಿತು.

ಬಿ.ಎಂ.ಎಸ್. ಅಖಿಲ ಭಾರತ ಅಧ್ಯಕ್ಷ ಎಸ್. ಮಲ್ಲೇಶಂ,
ಪ್ರಧಾನ ಕಾರ್ಯದರ್ಶಿ ಸುರೇಂದ್ರ ಕುಮಾರ್ ಪಾಂಡೆ, ಸಂಘಟನಾ ಕಾರ್ಯದರ್ಶಿ ಬಿ. ಸುರೇಂದ್ರನ್, ಮಾಜಿ ಅಖಿಲ ಭಾರತ ಅಧ್ಯಕ್ಷರಾದ ಹಿರಣ್ಯ ಪಾಂಡ್ಯ ಹಾಗೂ ಸಂಜಿ ನಾರಾಯಣ್ ನಿಯೋಗದಲ್ಲಿದ್ದರು.
ಸಭೆಯಲ್ಲಿ ಇಪಿಎಫ್ , ಇ.ಎಸ್ಐ. ಹಾಗೂ ಬೋನಸ್ ವೇತನ ಮಿತಿಗಳ ಹೆಚ್ಚಳ, 300 ಕಾರ್ಮಿಕರ ಮಿತಿಯನ್ನು 100ಕ್ಕೆ ಇಳಿಸುವುದು, ನಿಗದಿತ ಅವಧಿ ಉದ್ಯೋಗಕ್ಕೆ ನಿಯಂತ್ರಣ, ಉದ್ಯೋಗ ಭದ್ರತೆ, ಕಾರ್ಮಿಕ ಸಂಘಗಳ ಮಾನ್ಯತೆ ಮತ್ತು ನೋಂದಣಿಯಲ್ಲಿ ಸುಧಾರಣೆ, ‘Worker’ ವ್ಯಾಖ್ಯಾನದಲ್ಲಿ ತಿದ್ದುಪಡಿ ಹಾಗೂ ಮುಷ್ಕರದ ಹಕ್ಕಿಗೆ ಸಂಬಂಧಿಸಿದ ನಿಯಮಗಳಲ್ಲಿ ಸಡಿಲಿಕೆ ಸೇರಿದಂತೆ ಪ್ರಮುಖ ಬೇಡಿಕೆಗಳನ್ನು ಮಂಡಿಸಲಾಯಿತು.
ಕಾರ್ಮಿಕ ಸಂಹಿತೆಗಳ ತಿದ್ದುಪಡಿ ಸೇರಿದಂತೆ ಬಿ.ಎಂ.ಎಸ್. ಮುಂದಿಟ್ಟ ವಿವಿಧ ಬೇಡಿಕೆಗಳನ್ನು ಪರಿಶೀಲಿಸಿ, ಅಗತ್ಯ ಸುಧಾರಣೆಗಳು ಹಾಗೂ ಕಾನೂನು ತಿದ್ದುಪಡಿಗಳನ್ನು ಶೀಘ್ರದಲ್ಲೇ ಪರಿಗಣಿಸುವುದಾಗಿ ಕೇಂದ್ರ ಸಚಿವರು ಭರವಸೆ ನೀಡಿದ್ದಾರೆ ಎಂದು ಅನಿಲ್ ಕುಮಾರ್ ಯು. ತಿಳಿಸಿದ್ದಾರೆ.
ಮುಂದಿನ ಹಂತದಲ್ಲಿ Occupational Safety, Health and Working Conditions Code ಕುರಿತು ಬಿ.ಎಂ.ಎಸ್. ಕೇಂದ್ರ ನಾಯಕತ್ವ ಮತ್ತು ಕೇಂದ್ರ ಕಾರ್ಮಿಕ ಸಚಿವರ ನಡುವೆ ಮತ್ತೊಂದು ಉನ್ನತ ಮಟ್ಟದ ಸಭೆ ನಡೆಯಲಿದೆ.

“ಆಗಸ್ಟ್ 17ರ ರಾಷ್ಟ್ರವ್ಯಾಪಿ ಹೋರಾಟವು ಕಾರ್ಮಿಕರ ಧ್ವನಿಯನ್ನು ಕೇಂದ್ರ ಸರ್ಕಾರದ ಮಟ್ಟದಲ್ಲಿ ಪರಿಣಾಮಕಾರಿಯಾಗಿ ತಲುಪಿಸಿದೆ. ವಿವಿಧ ಬೇಡಿಕೆಗಳ ಈಡೇರಿಕೆಗೆ ದೊರೆತಿರುವ ಭರವಸೆ ನಮ್ಮ ಸಂಘಟಿತ ಹೋರಾಟದ ಫಲಶ್ರುತಿ. ಕಾರ್ಮಿಕರ ಹಿತಾಸಕ್ತಿಗಾಗಿ ಬಿ.ಎಂ.ಎಸ್. ಹೋರಾಟ ನಿರಂತರವಾಗಿ ಮುಂದುವರಿಯಲಿದೆ,” ಎಂದು ಅನಿಲ್ ಕುಮಾರ್ ಯು. ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.















Post Comment