ಲಾಠಿ ಬೀಸುವ ಕೈ, ಕವಿತೆಗೂ ಸೈ: ಗಸ್ತು ಹೊರಟಾಗ ಸಿಕ್ಕ ‘ಮೈಲಿಗಲ್ಲು’ ಮೇಲೊಂದು ಆಪ್ತ ಮಹಜರು..!
ಇದು ಯುವ ಕವಿಯೊಬ್ಬರ ‘ಮೈಲಿಗಲ್ಲು’ ಎಂಬ ಚೊಚ್ಚಲ ಕವನ ಸಂಕಲನದೊಳಗೆ ಒಂದು ಸುತ್ತು ಗಸ್ತು ಸುತ್ತಿ ಬಂದು ಪರಿಚಯಿಸುವ ಪ್ರಯತ್ನವಷ್ಟೆ; ವಿಮರ್ಶೆ ಅಲ್ಲ. ಮಲೆನಾಡಿನ ಮರೆಯಲ್ಲಿ ಮೂಡಿಗೆರೆಯ ಕಳಸ ತಾಲೂಕಿನ ಹಿರೇಬೈಲ್ ಮೋಹಿತ್ ಮೋನಪ್ಪ ಅವರ ಊರು. ಕುವೆಂಪು ವಿಶ್ವವಿದ್ಯಾಲಯದ (ರಾಜ್ಯಶಾಸ್ತ್ರ) ಎಂ.ಎ. ಪದವೀಧರರಾಗಿದ್ದಾರೆ. 2016ರಲ್ಲಿ ಪೊಲೀಸ್ ಇಲಾಖೆಗೆ ನೇಮಕಾತಿಗೊಂಡು ಇದೀಗ ಮಂಗಳೂರು ನಗರ ಪೊಲೀಸ್ ನಲ್ಲಿ ಸಶಸ್ತ್ರ ಪಡೆಯಲ್ಲಿ ಹೆಡ್ ಕಾನ್ಸ್ ಸ್ಟೇಬಲ್ ಆಗಿ ಕಾರ್ಯನಿರ್ವಹಿಸುತ್ತಿರುವ ಮೋಹಿತ್ ಮೋನಪ್ಪ ಅವರು ಊರ ಸೊಗಡಿನ ಸೊಗಸಿಗೆ ಬೆರಗಾಗಿ ಬರಹದ ಮೊರೆ ಹೋದದ್ದು ಆಶ್ಚರ್ಯವೇನಲ್ಲ, ವೃತ್ತಿ ಮತ್ತು ಪ್ರವೃತ್ತಿಯ ಹಿಂದೆ ಬೆಳೆದ ಪರಿಸರದ ಕೈವಾಡವೂ ಇರಬಹುದೆಂಬಂತೆ ವೃತ್ತಿಯಲ್ಲಿ ಆರಕ್ಷಕರಾಗಿ ಪ್ರವೃತ್ತಿಯಲ್ಲಿ ಬರಹಗಾರರಾಗಿದ್ದಾರೆ.
ಹಿರೇಬೈಲ್ ನಲಿ 68ನೇ ಕನ್ನಡ ರಾಜ್ಯೋತ್ಸವ ದಿನಾಚರಣೆ ಕಾರ್ಯಕ್ರಮದಲ್ಲಿ ಮೋನಪ್ಪ ಅವರ ‘ಮೈಲಿಗಲ್ಲು’ ಕವಿತೆಗಳ ಸಂಕಲನವು ಸಾಹಿತಿ ಪ್ರೇಮಸಾಗರ್ ಕಾರಕ್ಕಿ ಅವರಿಂದ ಬಿಡುಗಡೆಗೊಂಡು ಸಾಹಿತ್ಯ ಪ್ರಿಯರ ಮೆಚ್ಚುಗೆ ಪಡೆದಿದೆ. ‘ಮೈಲಿಗಲ್ಲು’ ಕವನ ಸಂಕಲನದಲ್ಲಿ, ‘ಕಾಡಿದೊಳಗೆ ಕಾಡುವ ಊರು’ ಎಂಬ ಮೊದಲ ಕವನದಲ್ಲಿ ಹೆತ್ತವರ, ಒಡ ಹುಟ್ಟಿದವರ ಮರೆಯಲಾಗದ ವಾತ್ಸಲ್ಯದ ಕ್ಷಣಗಳನ್ನು ಸ್ಮರಿಸುವ “ಅಪ್ಪನ ಹೆಗಲಲ್ಲಿ, ಅಮ್ಮನ ಎದೆಯಾಳದಲ್ಲಿ, ಅಜ್ಜ ಅಜ್ಜಿ ಪಾಡ್ದನದಲ್ಲಿ ಎತ್ತಿ ಆಡಿಸಿ, ಅಕ್ಕ ,ಅಣ್ಣ ಮುದ್ದಾಡಿಸಿ..” ಎಂಬ ಸಾಲುಗಳು ಸಂಬಂಧಗಳ ಮಮತೆ ನೆನಪಿಸಿದರೆ, ಇತ್ತ ‘ನನ್ನಮ್ಮ’ ಕವಿತೆಯಲ್ಲಿ: “ಹಣ ಕೂಡಿಟ್ಟಳು ನಾಳೆಯ ದಿನಗಳಿಗೆ, ದುಡಿಯುತ್ತ, ಬಡಿಸುತ್ತ ಪ್ರೀತಿಯ ಕಾಣಿಕೆ ಕೊಟ್ಟಳು.. ” ಎಂಬಿತ್ಯಾದಿ ಸಾಲುಗಳು ಸಹಜವಾಗಿ ಹೊತ್ತು ಹೆತ್ತವರು, ಒಡ ಹುಟ್ಟಿದವರು ತೋರಿದ ಪ್ರೀತಿ, ಕಾಳಜಿಗಳನ್ನು ಸಂಭ್ರಮಿಸಿದಂತಿದೆ.
‘ಅಪ್ಪ ನೀನೆಂದರೆ…’ ಕವಿತೆಯಲ್ಲಿ ನಿನ್ನ ಬೆವರು, ಉಸಿರು, ಕೈಹಿಡಿದು ನಡೆಸಿದ ಗುರುತುಗಳು, ನಾ ಇಡುವ ಹೆಜ್ಜೆಗಳು ಹಾಗೂ ‘ನನ್ನ ಮನೆ’ ಕವನದಲ್ಲಿ : “ತಿರುವುಗಳ ಲೆಕ್ಕ ಹಾಕಿ, ಕಾಲು ದಾರಿಯಲಿ ಇಣುಕಿ, ಮುಂದೆ ಸಾಗಿ ಸಿಗುವ ಮನೆ, ಗುಡು ಗುಡು ಗುಡುಗಿಗೆ ಕತ್ತಿ ಬಿಸಾಕಿದ ಮನೆ…” ಎಂಬ ನೆನಪುಗಳು ಮೂಡಿರುವುದು ಊರ ಸೊಗಡಿನ ಸೊಗಸಾಗಿದೆ. ಆಗಾಗ ಪೊಲೀಸ್- ನಕ್ಸಲ್ ಗುಂಡಿನ ಚಕಮಕಿಯ ಸದ್ದು, ಘಾಟುಗಳ ಸುದ್ದಿ, ವದಂತಿಗಳ ಮಲೆನಾಡಿನ ಮಧ್ಯೆಯೇ ಬೆಳೆದು ಬಂದ ಮೋಹಿತ್ ‘ಕನಸು ನನಸೇ?’ ಕವನದಲ್ಲಿ ನಕ್ಸಲರಿಗೆ ಬುದ್ಧಿವಾದ ಹೇಳಿ, ಮನವೊಲಿಸಲು ಮುಂದಾಗಿ “ಈ ನಿಮ್ಮ ಕನಸು ನನಸಾಯಿತೇ?” ಎಂದು ಆಪ್ತವಾಗಿ ಪ್ರಶ್ನಿಸುತ್ತಾರೆ. ‘ನಾವು ಪೊಲೀಸರು’ ಕವನದಲ್ಲಿ ದೇವರನ್ನೇ ಕಾಯುತಿರುವೆವು, ನಾವು ಪೊಲೀಸರು… ಎಂಬ ಸಾಲು ವಾಸ್ತವತೆಯ ಧ್ವನಿಯಾಗಿದೆ. ‘ಯುದ್ಧ, ಮೂಡುಗೆರೆಯೊಳಗೆ ನನ್ನ ತೇಜಸ್ವಿ, ನೀನು ನಾನು, ಅಮಲಿನ ಪಯಣ, ಸೆಲ್ಫಿ , ಪರಿಸರದ ಕಾಳಜಿ, ನಮ್ಮೂರು ಹಿರೇಬೈಲು ನನ್ನೂರ ನೆನಪು, ಜುಗಾರಿ ಕ್ರಾಸ್, ನನ್ನ ಕವಲು ದಾರಿ ಪಯಣ, ಹುಚ್ಚು ಪ್ರೀತಿ, ನನ್ನ ಕನಸಿವರು, ಒಂದು ಪ್ರೇಮಕಥೆ ಮುಂತಾದ ಕವನಗಳು ಸಂಕಲನದಲ್ಲಿ ಗಮನ ಸೆಳೆಯುವ ಪ್ರಮುಖ ಕವನಗಳಾಗಿವೆ. ಕೆಲವು ಕವನಗಳ ಶಿರ್ಷಿಕೆ ಗಂಭೀರವಾಗಿದ್ದರೂ ಶೀರ್ಷಿಕೆಗೆ ತಕ್ಕ ನ್ಯಾಯ ಒದಗಿಸಲು, ಸಾಲುಗಳು ವಿಫಲವಾದಂತೆ ಕಾಣುತ್ತವೆ. ಕೆಲವು ಕವನಗಳ ಶಿರ್ಷಿಕೆಗಳು ಮಾತ್ರ ಬೇರೆ ಬೇರೆಯಾಗಿ ಕಂಡರೂ ಕವನಗಳಲ್ಲಿ ಕೆಲವೆಡೆ ವಸ್ತು ಅಥವಾ ಸಾಲುಗಳು, ಪದಗಳು ಮರುಕಳಿಸಿದ್ದು ಇನ್ನೂ ಬಹುತೇಕ ಭಾವನಾತ್ಮಕ ಕವನಗಳು ಓದುಗರ ಮನ ಗೆಲ್ಲುವಂತಿದ್ದರೂ ಕೆಲವೊಂದು ಕವನಗಳು ಶಿರ್ಷಿಕೆಯ ಪ್ರಬುದ್ಧತೆಗೆ ತಕ್ಕಂತೆ ಗಾಢವಾಗಲು ಅಥವಾ ದೀರ್ಘವಾಗಲು ವಿಫಲ ಯತ್ನ ನಡೆಸಿ, ಸೊರಗಿ ಹನಿಗವನಗಳಾಗಿ ಕೊನೆಗೊಂಡಿರುವುದು ಕವನದ ಸೋಲೋ, ಅಭಿವ್ಯಕ್ತಿಯ ವಿಫಲತೆಯೋ ಎಂಬುದನ್ನು ಮತ್ತೊಮ್ಮೆ ಅವಲೋಕಿಸಿದರೆ ಕವಿಯೇ ತೀರ್ಮಾನಿಸಬಹುದು. ಇಲ್ಲಿ ಕವಿ ತನ್ನ ಕವನಗಳ ಮೂಲಕ ಸಮಾಜದಲ್ಲಿ ಎದುರಾಗುವ ಆಗು ಹೋಗುಗಳ ಸುತ್ತ ಮುತ್ತ ಬಿಡುವಿದ್ದಾಗ ಗಸ್ತು ಹೊರಟಂತಿದೆ. ಇನ್ನೊಂದೆಡೆ ನೊಂದವರ ಹಿತಕ್ಕಾಗಿ ಪಹರೆ ನಿಂತವನಂತೆ, ಸುತ್ತಮುತ್ತಲಿನ ಘಟನೆಗಳ ಮಹಜರು ನಡೆಸುವವನಂತೆ ಹಾಗೂ ಸಾಮಾಜಿಕ ಶಾಂತಿ ಕದಡಿಸುವ ದುಷ್ಟ ಮನಸ್ಸುಗಳ ಚಲನವಲನ ಗಮನಿಸಿ ಕವನದ ಮೂಲಕ ತಪಾಸಣೆ, ವಿಚಾರಣೆ ನಡೆಸುತ್ತಾ ಸಮಾಜದ ದುರಂತ ಸನ್ನಿವೇಶಗಳ ಮೇಲೆ ‘ಕಾರ್ಯಾಚರಣೆ’ ನಡೆಸುತ್ತಾ ಮನವೊಲಿಸಲು ಪ್ರಯತ್ನಿಸುವ ಏಕಾಂಗಿ ಆಶಾವಾದಿಯಂತೆ ಕಾಣುತ್ತಾರೆ. ಕಾರ್ಮಿಕರು, ರೈತರು, ಶ್ರಮಿಕ ವರ್ಗ, ಬುದ್ಧ, ಬಾಹುಬಲಿ, ಬಸವ, ಕನಕ, ಅಂಬೇಡ್ಕರ್-ಸಂವಿಧಾನ, ನಾರಾಯಣ ಗುರು, ಜೆಗುವರಾ, ಹಕ್ಕುಪತ್ರ, ಸೂರಿಲ್ಲದ ಜನ, ನನ್ನವರು ಅವಸಾನದಲ್ಲಿ… ಪ್ರಜಾಪ್ರಭುತ್ವವೆಂದರೆ, ನನ್ನ ದೇಶ.. ‘ಮುಂತಾದ ಕವಿತೆಗಳು ‘ದೈಹಿಕ’ವಾಗಿ ಸಡಿಲವಾಗಿ ಕಂಡರೂ ಓದಿಸಿಕೊಳ್ಳುತ್ತವೆ.
ಇವರ ಕವನಗಳ ಸಾಲುಗಳಲ್ಲಿ ಕವಿ ಡಾ. ಸಿದ್ಧಲಿಂಗಯ್ಯನವರ ‘ಹೊಲೆಮಾದಿಗರ ಹಾಡು’ಗಳಲ್ಲಿ ಬರುವ ಕವಿತೆಗಳ ರೊಚ್ಚಿನ ಕಿಡಿಗಳನ್ನು ಗುರುತಿಸಬಹುದು. ಉಳಿದಂತೆ ಬಹುತೇಕ ಕವನಗಳಲ್ಲಿ ನಮ್ಮ ಸುತ್ತಮುತ್ತ ಸಹಜವಾಗಿ ಕಾಡುವ ಘಟನೆಗಳು, ಸನ್ನಿವೇಶಗಳು, ಸಂಧಿಗ್ಧತೆ, ವ್ಯವಸ್ಥೆಯ ಬಗೆಗಿನ ಪ್ರಶ್ನೆಗಳು ಕವನಗಳಾಗಿ ಸಿಡಿದೆದ್ದು ನಿಂತು ಸಹಜ ಸಿಟ್ಟಿನಲ್ಲಿ ಕಾರಣೀಭೂತರ ಕಾಲರ್ ಹಿಡಿದಂತೆ ಭಾಸವಾಗುತ್ತದೆ. ಬದುಕಿನ ಪಯಣದ ದಾರಿಯುದ್ದಕ್ಕೂ ಪ್ರಯಣಕ್ಕೆ ಸಾಕ್ಷಿಯಾಗಿ ಒಂದೊಂದು ಮೈಲಿಗಲ್ಲುಗಳ ಬುಡದಲ್ಲಿ ಕಾಡುವ ಎಷ್ಟೊಂದು ನೆನಪಿನ ಬೀಜಗಳನ್ನು ಬಿತ್ತಿ ಬರುತ್ತೇವಲ್ಲ.! ಇದೇ ಸೆಳೆತದ ಪ್ರಭಾವದಿಂದಲೇ ಇರಬೇಕು ಇಲ್ಲಿ ಯುವ ಕವಿ ಮೋಹಿತ್ ಮೋನಪ್ಪರವರು ತನ್ನ ಚೊಚ್ಚಲ ಕವನ ಸಂಕಲನಕ್ಕೆ ‘ಮೈಲಿಗಲ್ಲು’ ಎಂದು ಹೆಸರಿಟ್ಟುಕೊಂಡಿರುವುದು. ಕವಿಯ ಬಾಲ್ಯದ ಗೆಳೆಯ ರವಿ ಬಿ. ಮಧುಗುಂಡಿ ಅವರು ತಮ್ಮ ಸಂಕ್ಷಿಪ್ತ ಮುನ್ನುಡಿಯಲ್ಲಿ ಸಂಕಲನದಲ್ಲಿ ಮೂಡಿಬಂದ ಕವಿತೆಗಳ ಸಾಮರ್ಥ್ಯದ ಮೇಲೆ ಕ್ಷ-ಕಿರಣ ಬೀರಿರುವುದು ಕೃತಿಗೊಂದು ಮೆರುಗು ತಂದಿದೆ. ಚುಮುಚುಮು ಚಳಿಯ ಮಲೆನಾಡಿನ ‘ಮೈಲಿಗಲ್ಲು’ ಈ ಯುವ ಬರಹಗಾರನ ಸಾಹಿತ್ಯಿಕ ಪಯಣಕ್ಕೆ ಮಹತ್ವದ ಮೈಲಿಗಲ್ಲಾಗಲಿ ಎಂಬುದೊಂದು ಆಶಯ.
- ಮೋಹಿತ್ ಮೋನಪ್ಪ
Post Comment