ಧರ್ಮಸ್ಥಳದಲ್ಲಿ ಯಾತ್ರಾರ್ಥಿಗಳ 40 ಪವನ್ ಚಿನ್ನಾಭರಣ, ನಗದು ಕಳವು : ಕಳವಾದ ನಗದು, ಚಿನ್ನಾಭರಣ ಸೇರಿಒಟ್ಟು ಮೊತ್ತ ಎಷ್ಟು ಗೊತ್ತಾ?
ಬೆಳ್ತಂಗಡಿ : ಧರ್ಮಸ್ಥಳಕ್ಕೆ ಯಾತ್ರಾರ್ಥಿಯಾಗಿ ಬಂದ ಕುಟುಂಬವೊಂದರ ಮಹಿಳೆಯ ಬ್ಯಾಗ್ನಲ್ಲಿದ್ದ ನಗದು ಸಹಿತ ಸುಮಾರು ರೂ. 12.90 ಲಕ್ಷ ಮೌಲ್ಯದ 40 ಪವನ್ ಚಿನ್ನಾಭರಣಗಳನ್ನು ಕಳ್ಳರು ಕಳವು ಗೈದ ಪ್ರಕರಣ ನ.24ರಂದು ಧರ್ಮಸ್ಥಳದಲ್ಲಿ ಬೆಳಕಿಗೆ ಬಂದಿದೆ.
ಉಡುಪಿ ಜಿಲ್ಲೆಯ ಕಾಪು ಕೋಟಿ ಗ್ರಾಮದ ಜೋಗಿ ಕಾಂಪೌಂಡ್ ನಿವಾಸಿ ಗಾಯತ್ರಿ ಆರ್.ಜೋಗಿ ಎಂಬವರಿಗೆ ಸೇರಿದ ಬ್ಯಾಗ್ನಲ್ಲಿದ್ದ ರೂ.10 ಸಾವಿರ ನಗದು ಹಾಗೂ ರೂ.12.80 ಲಕ್ಷ ಮೌಲ್ಯದ
40 ಪವನ್ ಚಿನ್ನಾಭರಣಗಳನ್ನು ಕಳ್ಳರು ಕಳವುಗೈದಿದ್ದಾರೆ.
ಗಾಯತ್ರಿ ಅವರು ತಮ್ಮ ಮಗಳು ರಜಿತ, ಆಕೆಯ 7 ತಿಂಗಳ ಮಗು ಹಾಗೂ ತಾಯಿ ತಾರಾ ಜೋಗಿರವರ ಜೊತೆ ನ.24 ರಂದು ಬೆಳಿಗ್ಗೆ 10 ಗಂಟೆಗೆ ತನ್ನ ಮನೆಯಿಂದ ಕಾರಿನಲ್ಲಿ ಧರ್ಮಸ್ಥಳಕ್ಕೆ ಬಂದಿದ್ದರು.
ಬರುವಾಗ ತಮ್ಮ ಬ್ಯಾಗ್ ನಲ್ಲಿ ತಮ್ಮ ಮಗಳ ಹಾಗೂ ಮಗುವಿನ ಹಾಗೂ ತನಗೆ ಸೇರಿದ 40 ಪವನ್ ಚಿನ್ನಾಭರಣಗಳನ್ನು ಎರಡು ಪರ್ಸ್ ನಲ್ಲಿ ಇಟ್ಟು ರೂ.10 ಸಾವಿರ ನಗದನ್ನು ವ್ಯಾನಿಟಿ ಬ್ಯಾಗ್ ನಲ್ಲಿ ಇಟ್ಟುಕೊಂಡು ಬಂದಿದ್ದರು. ಮಧ್ಯಾಹ್ನ ಸುಮಾರು 1.45 ಗಂಟೆಗೆ ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆ ಬಂದು ತಲುಪಿ ಕಾರನ್ನು ವಾಹನ ಪಾರ್ಕಿಂಗ್ ಸ್ಥಳದಲ್ಲಿ ನಿಲ್ಲಿಸಿ ಬಳಿಕ ದೇವರ ದರ್ಶನ ಮುಗಿಸಿ, ಮಧ್ಯಾಹ್ನ 2.30 ಗಂಟೆಯ ಸಮಯಕ್ಕೆ ಬಂದು ಬ್ಯಾಗನ್ನು ನೋಡಿದಾಗ ಜಿಪ್ ತೆರೆದು ಕೊಂಡಿರುವುದು ಕಂಡು ಬಂದಿತ್ತು. ನೋಡಿದಾಗ ಬ್ಯಾಗ್ನಲ್ಲಿ ಇಟ್ಟಿದ್ದ ಸುಮಾರು 40 ಪವನ್ ಚಿನ್ನಾಭರಣಗಳನ್ನು ಇರಿಸಿದ್ದ 2 ಪರ್ಸ್ ಗಳು ಹಾಗೂ ನಗದು ರೂ. 10 ಸಾವಿರ ನಾಪತ್ತೆಯಾಗಿದ್ದು ಕೂಡಲೇ ಅವರು ಕಾರು ಪಾರ್ಕ್ ಮಾಡಿದ್ದಲ್ಲಿ ಹೋಗಿ ಕಾರಿನಲ್ಲಿ ಹುಡುಕಾಡಿದಾಗ, ಅಲ್ಲಿಯೂ ಬೆಳ್ಳಿ ಹಾಗೂ ಚಿನ್ನಾಭರಣಗಳು ಇರುವ ಪರ್ಸ್ ಪತ್ತೆಯಾಗಲಿಲ್ಲ. ಜನಸಂದಣಿಯಲ್ಲಿ ಯಾರೋ ಕಳ್ಳರು ಅವರ ಬ್ಯಾಗಿನಲ್ಲಿ ಇಟ್ಟಿದ್ದ ಒಟ್ಟು ರೂ. 12,80,000 ಮೌಲ್ಯದ ಬೆಳ್ಳಿ ಮತ್ತು ಚಿನ್ನಾಭರಣ ಹಾಗೂ ರೂ. 10,000 ನಗದನ್ನು ಕಳವು ಮಾಡಿದ್ದು ಕಳವಾದ ನಗದು ಮತ್ತು ಆಭರಣಗಳ ಮೌಲ್ಯ ರೂ. 12,90,000 ಆಗಬಹುದು ಎಂದು ಅಂದಾಜಿಸಲಾಗಿದೆ.
ಈ ಬಗ್ಗೆ ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Post Comment