ಉಪ್ಪಿನಂಗಡಿ- ಗುರುವಾಯನಕೆರೆ ಹೆದ್ದಾರಿ ಬದಿಯಲ್ಲೊಂದು ಅನಧಿಕೃತ ಪೆಟ್ರೋಲ್ ಪಂಪ್.!


ಬೆಳ್ತಂಗಡಿ : ಉದ್ಯಮಿಯೊಬ್ಬರು ಅವಧಿ ದಾಟಿದರೂ ತಮ್ಮ ಉದ್ಯಮ ಪರವಾನಿಗೆಯನ್ನು ನವೀಕರಿಸದೆ ಅನಧಿಕೃತವಾಗಿ ಪೆಟ್ರೋಲ್ ಪಂಪ್ ಮತ್ತು ಕಾನೂನು ಬಾಹಿರವಾಗಿ ಎಲ್.ಪಿ.ಜಿ ಗ್ಯಾಸ್ ವಿತರಿಸುತ್ತಿರುವ ಪ್ರಕರಣವೊಂದು ತಣ್ಣೀರುಪಂತ ಗ್ರಾಮಪಂಚಾಯತ್ ವ್ಯಾಪ್ತಿಯ ಕಲ್ಲೇರಿಯಲ್ಲಿ ಬೆಳಕಿಗೆ ಬಂದಿದೆ.
ಬೆಳ್ತಂಗಡಿ ತಾಲೂಕು ತಣ್ಣೀರುಪಂತ ಗ್ರಾಮಪಂಚಾಯತ್ ವ್ಯಾಪ್ತಿಯ ಕಲ್ಲೇರಿ ಬಸ್ ನಿಲ್ದಾಣದ ಬಳಿ ನಂದಿತಾ ಎಂಬವರು ಮೆ. ಹಿಂದೂಸ್ಥಾನ್ ಪೆಟ್ರೋಲಿಯಂ ಕಾರ್ಪೋರೇಷನ್ ಉದ್ಯಮವನ್ನು 10 ವರ್ಷಗಳ ಹಿಂದೆ ಆರಂಭಿಸಿದ್ದು ಪರವಾನಿಗೆಯ ಅವಧಿ ಮುಗಿದಿದ್ದರೂ 2023ನೇ ಸೆಪ್ಟಂಬರ್ 12ರಿಂದ ಪರವಾನಿಗೆಯನ್ನು ನವೀಕರಿಸಿರುವುದಿಲ್ಲ. ಇನ್ನೊಂದೆಡೆ ಇಲ್ಲಿನ ಪೆಟ್ರೋಲ್ ಪಂಪ್ ನಲ್ಲಿ ಪೆಟ್ರೋಲ್ ನ ಗುಣಮಟ್ಟದ ಬಗ್ಗೆ ಮತ್ತು ಪೆಟ್ರೋಲ್ ಪ್ರಮಾಣದ ಬಗ್ಗೆ ಗ್ರಾಹಕರಿಂದ ಆಗಾಗ ದೂರುಗಳು ಕೇಳಿ ಬರುತ್ತಲೇ ಇತ್ತು.
ಇದೀಗ ಅವಧಿ ದಾಟಿದ ಪರವಾನಿಗೆಯನ್ನು ಇದುವರೆಗೂ ನವೀಕರಿಸದೆ ಒಂದೆಡೆ ಎಂದಿನಂತೆ ಪೆಟ್ರೋಲ್ ಮಾರಾಟವನ್ನು ನಿಲ್ಲಿಸದೆ ಮುಂದುವರಿಸಿದ್ದು ಇನ್ನೊಂದೆಡೆ ಎಲ್ ಪಿ ಜಿ ಗ್ಯಾಸ್ ಕೂಡ ಮಾರಾಟ ಮಾಡಲಾಗುತ್ತಿದ್ದು ಈ ಬಗ್ಗೆ ಯಾವುದೇ ಹೊಸ ಪರವಾನಿಗೆ ಪಡೆದಿರುವುದಿಲ್ವ. ಆದರೆ ತಣ್ಣೀರುಪಂತ ಗ್ರಾಮಪಂಚಾಯತ್ ಆಡಳಿತ ಯಾವುದೇ ರೀತಿಯ ಕ್ರಮಕೈಗೊಳ್ಳದೆ ಅನಧಿಕೃತ ದಂಧೆಯ ಬಗ್ಗೆ ಮೌನವಹಿಸಿರುವುದು ನಾಗರಿಕರ ಸಂಶಯಕ್ಕೆ ಕಾರಣವಾಗಿದೆ.
ಕಲ್ಲೇರಿಯ ಮೆ ಹಿಂದೂಸ್ಥಾನ್ ಪೆಟ್ರೋಲ್ ಪಂಪ್
ನಿರ್ಮಾಣಗೊಂಡಿರುವ ಕರಾಯ ಗ್ರಾಮದ ಸ.ನಂ.15ರಲ್ಲಿ 30ಸೆಂಟ್ಸ್ ದಿ.ಬಿ.ನಿರಂಜನ್ ಕುಮಾರ್ ಎಂಬವರ ಹೆಸರಿನಲ್ಲಿ ಹಾಗೂ ಸ.ನಂ. 15/1ರಲ್ಲಿ 9.ಎಕ್ರೆ ಜಾಗವು ಬಸ್ತಿ ಆದೀಶ್ವರ ದೇವರ ಹೆಸರಿನದ್ದೂ ಆಗಿದೆ.
ಈ ಎರಡೂ ಜಾಗದಲ್ಲಿ ಪೆಟ್ರೋಲ್ ಪಂಪ್ ಗೆ ಜಾಲವನ್ನು ಲೀಸ್ ಗೆ ಕೊಡಲಾಗಿದೆ. ಬಸ್ತಿ ಆದೀಶ್ವರ ದೇವರ ಜಾಗವನ್ನೇ ನಿಯಮ ಬಾಹಿರವಾಗಿ ಪೆಟ್ರೋಲ್ ಪಂಪ್ ಉದ್ಯಮ ನಡೆಸಲು ಲೀಸ್ ಗೆ ಕೊಡಲಾಗಿದ್ದು ಬಸ್ತಿ ಆದೀಶ್ವರ ದೇವರ ಆಡಳಿತಕ್ಕೆ ಸಂಬಂಧಪಟ್ಟ ಪ್ರಮುಖರಾದ ಬಿ.ನಿರಂಜನ್ ಕುಮಾರ್ ನಿಧನರಾಗಿದ್ದಾರೆ.
ಇದೇ ಕಾರಣಕ್ಕಾಗಿ ಲೀಸ್ ಗೆ ಕೊಟ್ಟಿರುವ ಬಸ್ತಿ ಆದೀಶ್ವರ ದೇವರ ಜಾಗದಲ್ಲಿರುವ ಪೆಟ್ರೋಲ್ ಪಂಪ್ ನ ಉದ್ಯಮ ಪರವಾನಿಗೆ ನವೀಕರಿಸಲು ಕಾನೂನಾತ್ಮಕವಾಗಿ ಸಮಸ್ಯೆಯಿದೆ.
ತಣ್ಣೀರುಪಂತ ಗ್ರಾಮಪಂಚಾಯತ್ ಆಡಳಿತವು ಉದ್ಯಮ ಪರವಾನಿಗೆ ಅವಧಿ ಮೀರಿದ ಬಗ್ಗೆ ಪೆಟ್ರೋಲ್ ಪಂಪ್ ಮಾಲಕರಿಗೆ ನೋಟೀಸ್ ನೀಡಿದ್ದು ಮಾಲಕರು ನವೀಕರಣಕ್ಕೆ ಸಮಯವಕಾಶ ಕೇಳಿದ್ದರು. ಸಾಕಷ್ಟು ಸಮಯವಕಾಶ ಕೊಡಲಾಗಿತ್ತಾದರೂ ಪರವಾನಿಗೆ ನವೀಕರಿಸದೆ ಮತ್ತೆ ಕಾನೂನು ಬಾಹಿರವಾಗಿ ಅನಧಿಕೃತ ಪೆಟ್ರೋಲ್ ಪಂಪ್ ಮತ್ತು ಎಲ್ ಪಿ ಜಿ ಗ್ಯಾಸ್ ಕೇಂದ್ರ ನಡೆಸುತ್ತಿರುವ ಮಾಲಕರು ಮತ್ತೆ ಸಮಯವಕಾಶ ಕೇಳಿದ್ದು ಇದುವರೆಗೂ ಪರವಾನಿಗೆ ನವೀಕರಿಸಿಲ್ಲ. ಹಿಂದಿನಂತೆ ಮತ್ತೆ ಅನಧಿಕೃತ ಪೆಟ್ರೋಲ್ ಪಂಪ್ ಮುಂದುವರಿಸುತ್ತಿದ್ದಾರೆ.
ಮತ್ತೊಂದು ಆತಂಕದ ವಿಚಾರವೆಂದರೆ ಪೆಟ್ರೋಲ್ ಪಂಪ್ ನ ಆವರಣ ಗೋಡೆಯ ಬದಿಯಲ್ಲೇ ವೈನ್ ಶಾಪ್ ಇದೆ, ಪೆಟ್ರೋಲ್ ಪಂಪ್ ಮಾಲಕರು ನಿಯಮಾನುಸಾರ ಪ್ರಮುಖ ಸುರಕ್ಷತಾ ಕ್ರಮಗಳನ್ನು ಕೈಗೊಂಡಿಲ್ಲ ಎಂಬ ಆರೋಪಗಳಿವೆ.
ಈ ಮಧ್ಯೆ ಅನಧಿಕೃತ ಪೆಟ್ರೋಲ್ / ಎಲ್ .ಪಿ.ಜಿ. ಗ್ಯಾಸ್ ಪಂಪ್ ವಿರುದ್ಧ ಸೂಕ್ತ ಪರಿಶೀಲನೆ ನಡೆಸಿ ತಪ್ಪಿತಸ್ಥರ ಮೇಲೆ ಕಾನೂನು ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿ ಗ್ರಾ.ಪಂ. ಮಾಜಿ ಸದಸ್ಯ , ಸಾಮಾಜಿಕ ಕಾರ್ಯಕರ್ತರಾದ ಕೆ.ಎಸ್.ಅಬ್ದುಲ್ಲಾ, ಅಶ್ರಫ್ ಅಳಕೆ ತಣ್ಣೀರುಪಂತ ಗ್ರಾಮಪಂಚಾಯತ್ ಆಡಳಿತ, ತಾಲೂಕು ಪಂಚಾಯತ್ ಕಾರ್ಯನಿರ್ವಹಣಾಧಿಕಾರಿ ಹಾಗೂ ಪುತ್ತೂರು ಸಹಾಯಕ ಕಮೀಷನರ್ ಹಾಗೂ ದ.ಕ.ಜಿಲ್ಲಾಧಿಕಾರಿಗಳಿಗೆ ದಾಖಲೆಗಳೊಂದಿಗೆ ದೂರು ನೀಡಿದ್ದಾರೆ.
ಸೆಪ್ಟೆಂಬರ್ 12ರಿಂದ ಇದುವರೆಗೂ ನಡೆಯುತ್ತಿರುವ ಅನಧಿಕೃತ ಪೆಟ್ರೋಲ್ ಪಂಪ್ ಗೆ ಬೀಗ ಜಡಿಯದೆ ಅಥವಾ ಯಾವುದೇ ಕಾನೂನು ಕ್ರಮ ಕೈಗೊಳ್ಳದೆ ಕಣ್ಣು ಮುಚ್ಚಿ ಕುಳಿತಿರುವ ತಣ್ಣೀರುಪಂತ ಗ್ರಾಮಪಂಚಾಯತ್ ಅಧ್ಯಕ್ಷರು ಹಾಗೂ ಪಂ. ಅಭಿವೃದ್ಧಿ ಅಧಿಕಾರಿಗಳ ಜಾಣ ಕುರುಡುತನ ನಾಗರಿಕರ ಸಂಶಯಕ್ಕೆ ಕಾರಣವಾಗಿದ್ದು ಗ್ರಾ.ಪಂ.ಆಡಳಿತ ಯಾವ ಕ್ರಮ ಕೈಗೊಳ್ಳಲಿದೆ ಎಂಬುದನ್ನು ಕಾದು ನೋಡುವಂತಾಗಿದೆ.

Post Comment