ತಾಲೂಕು ಆಸ್ಪತ್ರೆಯಲ್ಲಿ ‘ರೆಫರ್ ಹಾವಳಿ’ ಹೆರಿಗೆ ಪ್ರಮಾಣ ಇಳಿಮುಖ: ಸಚಿವ ದಿನೇಶ್ ಗುಂಡೂರಾವ್ ತರಾಟೆ
ಬೆಳ್ತಂಗಡಿ : ಸಿಸೇರಿಯನ್ ಗೆ ಮಾತ್ರವಲ್ಲ ; ನಾರ್ಮಲ್ ಹೆರಿಗೆಗಳಿಗೂ ತುಂಬು ಹೆರಿಗೆ ನೋವಿನಲ್ಲಿ ಬರುವ ಹೆಚ್ಚಿನ ಗರ್ಭಿಣಿಯರನ್ನು ಜಿಲ್ಲಾಸ್ಪತ್ರೆಗೆ ಅಥವಾ ಬೇರೆ ಖಾಸಗಿ ಆಸ್ಪತ್ರೆಗಳಿಗೆ ರೆಫರ್ ಮಾಡುವುದರಲ್ಲಿ ಕುಖ್ಯಾತಿ ಪಡೆದಿರುವ ಬೆಳ್ತಂಗಡಿ ತಾಲೂಕು
ಆಸ್ಪತ್ರೆಯಲ್ಲಿ ಹೆರಿಗೆ ತಿಂಗಳ ಪ್ರಮಾಣ ಇಳಿಮುಖವಾಗಿರುವ ಮಾಹಿತಿ ಕೇಳಿ ಗರಂ ಆದ ದಕ ಜಿಲ್ಲಾ ಉಸ್ತುವಾರಿ ಸಚಿವರು
ಹೆರಿಗೆ ವೈದ್ಯಾಧಿಕಾರಿಯನ್ನು ತರಾಟೆಗೆ ತೆಗೆದುಕೊಂಡು ಬೆವರಿಳಿಸಿದ ಘಟನೆ ಶನಿವಾರ ನಡೆದಿದೆ. ಇಲ್ಲಿನ ತಾಲೂಕು ಆಸ್ಪತ್ರೆಗೆ ಭೇಟಿ ನೀಡಿದ ಸಂದರ್ಭ ಆರೋಗ್ಯಾಧಿಕಾರಿ ಮತ್ತು ವೈದ್ಯಾಧಿಕಾರಿಗಳನ್ನು ವಿಚಾರಿಸಿದ ಜಿಲ್ಲಾ ಉಸ್ತುವಾರಿ ಮತ್ತು ಕುಟುಂಬ ಕಲ್ಯಾಣ ಸಚಿವ ದಿನೇಶ್ ಗುಂಡೂರಾವ್ ಮಾಸಿಕ ಹೆರಿಗೆ ಪ್ರಮಾಣ ಗಣನೀಯವಾಗಿ ಕಡಿಮೆ ದಾಖಲಾಗಿರುವ ಬಗ್ಗೆ ಕಾರಣ ಕೇಳಿ ನಿಮಗೆಲ್ಲಾ ಸಂಬಳ ಯಾಕೆ ಕೊಡಬೇಕು ಎಂದು ಸಂಬಂಧಪಟ್ಟ ವೈದ್ಯಾಧಿಕಾರಿನ್ನು ಪ್ರಶ್ನಿಸಿ ತರಾಟೆಗೆ ತೆಗೆದುಕೊಂಡ ಘಟನೆ ಶನಿವಾರ ನಡೆದಿದೆ.
ಜಿಲ್ಲಾ ಉಸ್ತುವಾರಿ ಮತ್ತು ಕುಟುಂಬ ಕಲ್ಯಾಣ ಸಚಿವ ದಿನೇಶ್ ಗುಂಡೂರಾವ್ ಶನಿವಾರ ಬೆಳ್ತಂಗಡಿ ತಾಲೂಕು ಆಸ್ಪತ್ರೆಗೆ ಭೇಟಿ ನೀಡಿ ಸೇವೆಗಳ ಬಗ್ಗೆ ವೈದ್ಯಾಧಿಕಾರಿಗಳು ಮತ್ತು ಸಿಬ್ಬಂದಿಗಳಿಂದ ಮಾಹಿತಿ ಪಡೆದುಕೊಂಡರು.
ಹೆರಿಗೆಗಾಗಿ ಬರುವ ಗರ್ಭಿಣಿಯರನ್ನು ಹೆರಿಗೆ ಮಾಡಿಸಿಕೊಳ್ಳದೆ
ಜಿಲ್ಲಾಸ್ಪತ್ರೆಗೆ ಅಥವಾ ಖಾಸಗಿ ಆಸ್ಪತ್ರೆ ಗಳಿಗೆ ಕಳಿಸುವ ಪ್ರಕರಣಗಳು
ಕಡಿಮೆಯಾಗಬೇಕು, ಹೆರಿಗೆ ಪ್ರಮಾಣವನ್ನು ಶೀಘ್ರವಾಗಿ ಹೆಚ್ಚಿಸಲು ಪ್ರಯತ್ನಿಸಬೇಕು ಎಂದು ಸಚಿವರು ಜಿಲ್ಲಾ ಆರೋಗ್ಯಾಧಿಕಾರಿಗಳ ಸಮ್ಮುಖದಲ್ಲಿ ತಾಲೂಕು ಆಸ್ಪತ್ರೆಯ ವೈದ್ಯಾಧಿಕಾರಿಗೆ ಸೂಚಿಸಿದರು.
ತಾಲೂಕು ಆಸ್ಪತ್ರೆಯಲ್ಲಿ ಹೆರಿಗೆ ಸಂಖ್ಯೆ ಕಡಿಮೆ ದಾಖಲಾಗಿರುವ ಬಗ್ಗೆ ಕುಂಟು ನೆಪಗಳನ್ನು ಮುಂದಿಟ್ಟ ವೈದ್ಯಾಧಿಕಾರಿಗೆ ಈ ಕಾರಣಗಳನ್ನು ಹೇಳಿ ತಪ್ಪಿಸಿಕೊಳ್ಳಕ್ಕಾಗಲ್ಲ, ಎಲ್ಲಾ ಸೌಲಭ್ಯಗಳಿದ್ದರೂ ಬಡವರಿಗೆ
ಹೆರಿಗೆ ಇಲ್ಲಿ ಆಗದಿದ್ರೆ ನಿಮಗೆ ಸರಕಾರ ಸಂಬಳ ಯಾಕೆ ಕೊಡಬೇಕು, ನಿಮ್ಮನ್ನು ನೇಮಿಸಿದ್ದು ಯಾಕೆ ? ನಿಮ್ಮನ್ನು ಕಳಿಸಬಹುದಲ್ವ,
ಎಲ್ಲಾ ಸೌಕರ್ಯಗಳಿದ್ದರೂ ಬಂದವರು ಬೇರೆ ಕಡೆ ಹೋಗಬೇಕಾದ್ರೆ ಏನೋ ಸಮಸ್ಯೆ ಇರಬೇಕಲ್ವ , ಇಷ್ಟು ಕಡಿಮೆ ಪ್ರಮಾಣದಲ್ಲಿ ಹೆರಿಗೆಯಾಗಲು ಏನು ಕಾರಣ ಎಂದು ಗರಂ ಆಗಿ ನಯವಾಗಿ ತರಾಟೆಗೆ ತೆಗೆದುಕೊಂಡರು. ತಾಲೂಕು ಆಸ್ಪತ್ರೆ ಯಲ್ಲಿ ಸುರಕ್ಷಿತವಾದ ಸೇವೆಗಳೊಂದಿಗೆ ಹೆರಿಗೆ ಪ್ರಮಾಣ ಹೆಚ್ಚು ದಾಖಲಾಗಲು ಪ್ರಯತ್ನಿಸಬೇಕು ಎಂದು ಸ್ಪಷ್ಟವಾಗಿ ತಾಲೂಕು ವೈದ್ಯಾಧಿಕಾರಿಗೆ ಸೂಚಿಸಿದರು.
ರೋಗಿಗಳಿಗೆ ಅವಶ್ಯಕವಿರುವ ಔಷಧಗಳನ್ನು ಪೂರ್ಣ
ಪ್ರಮಾಣದಲ್ಲಿ ದೊರೆಯುವಂತೆ ಕ್ರಮವಹಿಸಬೇಕು. ರೋಗಿಗಳನ್ನು ಉತ್ತಮ ರೀತಿಯಲ್ಲಿ ಆರೈಕೆ ಮಾಡಬೇಕೆಂದರು.
ಬೆಳ್ತಂಗಡಿ ತಾಲೂಕು ಆಸ್ಪತ್ರೆಯಲ್ಲಿ ಮೂಲಭೂತ ಸೌಕರ್ಯ ಹಾಗೂ ಉನ್ನತೀಕರಣ ಕಾಮಗಾರಿಗಳ ಶಿಲಾನ್ಯಾಸವನ್ನು ಶಾಸಕ ಹರೀಶ್ ಪೂಂಜ ನೆರವೇರಿಸಿದರು. ವಿಧಾನ ಪರಿಷತ್ ಮಾಜಿ ಸದಸ್ಯ ಕೆ.ಹರೀಶ್ ಕುಮಾರ್, ಪ ಪಂ ಅಧ್ಯಕ್ಷ ಜಯಾನಂದ ಗೌಡ, ಉಪಾಧ್ಯಕ್ಷೆ ಗೌರಿ, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ರಕ್ಷಿತ್ ಶಿವರಾಮ್, ಜಿಲ್ಲಾ ಗ್ಯಾರಂಟಿ ಅನುಷ್ಠಾನ ಸಮಿತಿ ಸದಸ್ಯ ಶೇಖರ್ ಕುಕ್ಕೇಡಿ
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸತೀಶ್ ಕಾಶಿಪಟ್ಲ, ನಾಗೇಶ್ ಗೌಡ, ಬೆಳ್ತಂಗಡಿ ನ್ಯಾಯಾಲಯದ ಅಪರ ಸರಕಾರಿ ಅಭಿಯೋಜಕ ಮನೋಹರ್ ಇಳಂತಿಲ ಮತ್ತಿತರರು ಉಪಸ್ಥಿತರಿದ್ದರು.
Post Comment