ಕಣಿಯೂರು ಗ್ರಾ.ಪಂ.ಆಡಳಿತಕ್ಕೆ ‘ವಾಸ್ತುದೋಷ’!
ಬೆಳ್ತಂಗಡಿ : ಕಳೆದ ವರ್ಷ ಗ್ರಾಮಪಂಚಾಯತ್ ಗೆ ಆಗಮಿಸಿದ ರಾಜ್ಯ ಸರಕಾರದ ಸಂವಿಧಾನ ಜಾಥಾ ಬರುವ ಕಾರ್ಯಕ್ರಮದಲ್ಲಿ 20 ಸದಸ್ಯರ ಪೈಕಿ 19 ಸದಸ್ಯರು ಗೈರುಹಾಜರಾಗುವ ಮೂಲಕ
ಅಸಹಕಾರ ತೋರಿ ಚರ್ಚೆಗೆ ಕಾರಣವಾಗಿದ್ದ ಕಣಿಯೂರು ಗ್ರಾಮಪಂಚಾಯತ್ ಆಡಳಿತದಲ್ಲಿ ನೂತನ ಅಧ್ಯಕ್ಷರು ಅಧ್ಯಕ್ಷ ಪಟ್ಟದಲ್ಲಿ ಕುಳಿತ ಬೆನ್ನಲ್ಲೇ ತಮ್ಮ ದಿವ್ಯ ದೃಷ್ಟಿಯಿಂದ ಅಚ್ಚರಿಯ ವಾಸ್ತುದೋಷ’ವೊಂದನ್ನು ಕಂಡು ಹುಡುಕಿ ಮಹಾನ್ ‘ಸಾಧನೆ’ ಮರೆದಿದ್ದಾರೆ ಎಂಬ ಲೇವಡಿಗೆ ಗುರಿಯಾಗಿದ್ದಾರೆ.
ಬೆಳ್ತಂಗಡಿ ತಾಲೂಕು ಕಣಿಯೂರು ಗ್ರಾ.ಪಂ. ಮಾಜಿ ಅಧ್ಯಕ್ಷ ಯಶವಂತ ಅವರ ರಾಜಿನಾಮೆಯಿಂದ ತೆರವಾಗಿದ್ದ ಅಧ್ಯಕ್ಷ ಸ್ಥಾನಕ್ಕೆ ಸೀತಾರಾಮ ಮಡಿವಾಳ ಅವರು ನೂತನ ಅಧ್ಯಕ್ಷರಾಗಿ ಆಯ್ಕೆಯಾದ ಬೆನ್ನಲ್ಲೇ ವಾಸ್ತುದೋಷ ಹೆಸರಲ್ಲಿ ಬಹುತೇಕ ಸದಸ್ಯರ ಬಾಯಿ ಮುಚ್ಚಿಸಿ ಗ್ರಾ.ಪಂ. ಕಾರ್ಯಾಲಯ ಕಟ್ಟಡವನ್ನು ಕೆಡವಿ ಹಾಕಿ ವಿಸ್ತರಣೆಗೆ ಕೈಹಾಕುವ ಮೂಲಕ ಕಣಿಯೂರು ಗ್ರಾ.ಪಂ. ಆಡಳಿತವು ಮತ್ತೊಂದು ವಿವಾದದಲ್ಲಿ ಸಿಲುಕಿಕೊಂಡು ಚರ್ಚೆಗೆ ಕಾರಣವಾಗಿದೆ.
ಕಣಿಯೂರು ಗ್ರಾಮಪಂಚಾಯತ್ ನ ಅನಧಿಕೃತ ಕಾಮಗಾರಿ ವಿರುದ್ಧ ಸದಸ್ಯೆಯೊಬ್ಬರು ಆಕ್ಷೇಪಿಸಿ ಏಕಾಂಗಿಯಾಗಿ ಧ್ವನಿ ಎತ್ತಿದ್ದು ಸಂಬಂಧಪಟ್ಟ ಅಧಿಕಾರಿಗಳ ಗಮನಕ್ಕೆ ತಂದಿದ್ದಾರೆ.
ಆಂತರಿಕವಾಗಿ ಅಧ್ಯಕ್ಷರು ಮತ್ತು ಕೆಲವು ಸದಸ್ಯರು ತಲೆಯಲ್ಲಿ ವಾಸ್ತದೋಷದ ಚಿಂತೆ ಕಾಡುತ್ತಿದ್ದು ಇದೇ ಕಾರಣಕ್ಕಾಗಿ ಕಟ್ಟಡದ ಮೂಲ ವಿನ್ಯಾಸವನ್ನು ಅಗೆದು ಕೆಡವಿ ತಿರುಚಲು ಮುಂದಾಗಿದ್ದು “ಕಟ್ಟಡ ಮಳೆಗಾಲದಲ್ಲಿ ಸೋರುತ್ತಿದೆ, ಕೊಠಡಿ ಕೊರತೆ ಇದೆ, ಕೊಠಡಿ ಜಾಗ ಕಡಿಮೆ ಇದೆ..” ಎಂಬಿತ್ಯಾದಿ ಕುಂಟು ನೆಪಗಳನ್ನು ಮುಂದಿಟ್ಟಿದೆ.
ಇಷ್ಟಕ್ಕೂ ಗ್ರಾ.ಪಂ.ಕಟ್ಟಡವನ್ನು ಕೆಡವಿ ಕಟ್ಟಡದ ಮೂಲ ಸ್ವರೂಪವನ್ನು ಬದಲಿಸುವ ಕಾಮಗಾರಿಗೆ ಕೈಹಾಕುವ ಮುನ್ನ ಗ್ರಾ.ಪಂ. ಅಧ್ಯಕ್ಷರಾಗಲಿ,
ಪಂ. ಅಭಿವೃದ್ಧಿ ಅಧಿಕಾರಿಯವರಾಗಲಿ ಎಲ್ಲಾ ಸದಸ್ಯರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದೆ ಸಾಮಾನ್ಯ ಸಭೆಯಲ್ಲಿ ನಿರ್ಣಯ ಕೈಗೊಳ್ಳುವ ಮೊದಲೇ ಸರ್ವಾಧಿಕಾರಿ ಧೋರಣೆಯಲ್ಲಿ ತರಾತುರಿಯಲ್ಲಿ ದಿಢೀರ್ ಅಗಿ ಸಂಶಯಾಸ್ಪದವಾಗಿ ಕಾಮಗಾರಿ ಆರಂಭಿಸಿದ್ದೇ ಅನಗತ್ಯ ವಿವಾದ ಸೃಷ್ಟಿಯಾಗಲು ಕಾರಣವಾಯಿತು.
ಮೊದಲಿಗೆ ಕಟ್ಟಡದ ವಾಸ್ತು ಸರಿ ಇಲ್ಲ, ಅಧ್ಯಕ್ಷರಿಗೆ ಸರಿಯಾಗಿ ಛೇಂಬರ್ ಇಲ್ಲ , ಕೊಠಡಿ ಇಲ್ಲ ಎಂಬ ಕಾರಣವನ್ನು ಚಾಲ್ತಿಗೆ ಬಿಡಲಾಗಿತ್ತು. ಅಸಲಿಗೆ ವಾಸ್ತುದೋಷದ್ದೇ ಚಿಂತೆ, ಹೊರಜಗತ್ತಿಗೆ ಮಾತ್ರ ಕೊಠಡಿ ಕೊರತೆ, ಅಧ್ಯಕ್ಷರಿಗೆ ಕೂರಲು ಛೇಂಬರ್ ಇಲ್ಲ , ಕಂಪ್ಯೂಟರ್ ಕೊಠಡಿ ಸೋರುತ್ತಿದೆ ಎಂಬಿತ್ಯಾದಿ ಕಾರಣಗಳನ್ನು ಕೊಡಲಾಯಿತು.
ಏಕಮುಖ ನಿರ್ಧಾರದ ಅನಧಿಕೃತ ಕಾಮಗಾರಿಯನ್ನು ಗ್ರಾ.ಪಂ.ಸದಸ್ಯೆ ಸುಮತಿ ಶೆಟ್ಟಿ ಎಂಬವರು ಪ್ರಶ್ನಿಸಿದಾಗ ಹಳೆಯ ಕಟ್ಟಡವನ್ನು ಅಗೆದು ಕೆಡವಿ ಹಾಕಲು ಹೊರ ಜಗತ್ತಿಗೆ “ಗ್ರಾಮಪಂಚಾಯತ್ ಕಟ್ಟಡ ನಾದುರಸ್ತಿಯಲ್ಲಿದೆ, ಮಳೆ ನೀರು ಸೋರಿಕೆಯಾಗುತ್ತಿದೆ,
ತುರ್ತು ಸಂದರ್ಭದಲ್ಲಿ ದುರಸ್ತಿಗೊಳಿಸುವುದು ಅನಿವಾರ್ಯವಾಗಿರುತ್ತದೆ”
ಎಂಬ ಅಸಮಂಜಸ ಉತ್ತರ ಕೊಡಲಾಯಿತು. ಕೊಡುತ್ತಿರುವ ಕಾರಣಗಳು ಸಮರ್ಥನೆಗಳು ಒಂದು ವೇಳೆ ನಿಜವೇ ಆಗಿದ್ದಲ್ಲಿ ಕಾಮಗಾರಿ ಪೂರ್ವದಲ್ಲಿ ಈ ವಿಚಾರವನ್ನು ಸಾಮಾನ್ಯ ಸಭೆಯಲ್ಲಿ ಚರ್ಚಿಸದೆ ಗೋಪ್ಯವಾಗಿಟ್ಟು ಕಾಮಗಾರಿಗೆ ಯಾವುದೇ ಅನುದಾನ ಕಾದಿರಿಸದೆ, ಸದಸ್ಯರನ್ನು, ಸಿಬ್ಬಂದಿಗಳನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದೆ, ಕಾಮಗಾರಿ ಪೂರ್ವದಲ್ಲಿ ಅಧ್ಯಕ್ಷರು ಬೆರಳಚ್ಚು ನೀಡದೆ ಗ ಕಾಮಗಾರಿ ಆರಂಭಿಸುವಷ್ಟು ತುರ್ತಾಗಲಿ ಆಸಕ್ತಿಯಾಗಲಿ ಏನಿತ್ತು?
ಎಂಬ ಪ್ರಶ್ನೆಗಳು ಸುಮತಿ ಶೆಟ್ಟಿ ಮತ್ತಿತರ ಸದಸ್ಯರಿಂದ ಮಾತ್ರವಲ್ಲ ನಾಗರಿಕರಿಂದಲೂ ಕೇಳಿ ಬರುತ್ತಿದೆ.
ಇಷ್ಟೆಲ್ಲ ಪ್ರಶ್ನೆಗಳು ಕೇಳಿ ಬಂದ ಬೆನ್ನಲ್ಲೆ ತಾ.ಪಂ. ಕಾರ್ಯನಿರ್ವಾಹಣಾಧಿಕಾರಿಗಳಿಗೆ ದೂರು ಕೊಟ್ಟ ಬಳಿಕ ಈ ಅನಧಿಕೃತ ಕಾಮಗಾರಿ ಬಗ್ಗೆ ಸಾಮಾನ್ಯ ಸಭೆಯಲ್ಲಿ ತೇಪೆ ನಿರ್ಣಯಗಳನ್ನು ಕೈಗೊಳ್ಳಲಾಗಿದೆ ಎಂಬ ಆರೋಪಗಳಿವೆ.
ಇಷ್ಟೇ ಆದರೆ ವಿವಾದ ಬೀದಿಗೆ ಬರುತ್ತಿರಲಿಲ್ಲ ಮೊದಲಿಗೆ ಅಧ್ಯಕ್ಷರ ಕೊಠಡಿ ಮತ್ತು ಕಂಪ್ಯೂಟರ್ ಕೊಠಡಿ ವಿಸ್ತರಣೆ ನೆಪದಲ್ಲಿ ಅನಧಿಕೃತ ಕಾಮಗಾರಿ ಆರಂಭಿಸಿದ್ದು ಈ ಬಗ್ಗೆ ಸದಸ್ಯರಿಂದ ಆಕ್ಷೇಪ ವ್ಯಕ್ತವಾದ ಬಳಿಕವೂ ಇದೀಗ ಇಡೀ ಕಟ್ಟಡದ ಮುಂದಿನ ಭಾಗದ ಕೊಠಡಿಗಳನ್ನು ಕೆಡವಿ ಹಾಕಿ ಮೂಲ ವಿನ್ಯಾಸ, ಸ್ವರೂಪವನ್ನೇ ವಿರೂಪಗೊಳಿಸುತ್ತಿರುವುದು ನೀವು ಆಕ್ಷೇಪಿಸುತ್ತಲೇ ಇರಿ,
ಮಾಡುವುದನ್ನು ಮಾಡಿಯೇ ತೀರುತ್ತೇವೆ…” ಎಂದು ಸವಾಲೊಡ್ಡಿದಂತಿದೆ.
ಒಟ್ಟಿನಲ್ಲಿ ಗ್ರಾಮಪಂಚಾಯತ್ ಕಟ್ಟಡದ ಮೂಲ ಸ್ವರೂಪವನ್ನು ವಿರೂಪಗೊಳಿಸಿರುವುದು ಇದೀಗ ವ್ಯಾಪಕ ಚರ್ಚೆಗೆ ಕಾರಣವಾಗಿದೆ.
ಮುಂದಿನ ದಿನಗಳಲ್ಲಿ ಈ ವಿವಾದಿತ ಕಾಮಗಾರಿ ಸಂಭಾವ್ಯ ಕ್ರಮಗಳ ಮೂಲಕ ಕಣಿಯೂರು ಗ್ರಾಮಪಂಚಾಯತ್ ಆಡಳಿತಕ್ಕೆ ದೊಡ್ಡ ತಲೆ ನೋವಾಗಿ ಪರಿಣಮಿಸಿದರೂ ಅಚ್ಚರಿ ಇಲ್ಲ, ಎಂಬ ಮಾತುಗಳು ನಾಗರಿಕರಿಂದ ಕೇಳಿ ಬರುತ್ತಿದೆ.
Post Comment