“ಇಲ್ಲಿ ನಾಯಿ ಮರಿಗಳನ್ನು ತಂದು ಬಿಡುವವರು, ನಿಮ್ಮ ಹೆಂಡತಿ ಮಕ್ಕಳನ್ನು ಇಲ್ಲಿಯೇ ತಂದು ಬಿಡಿ…”

ಬೆಳ್ತಂಗಡಿ : ‘ಎಚ್ಚರಿಕೆ’, “ಇಲ್ಲಿ ನಾಯಿ ಮರಿಗಳನ್ನು ತಂದು ಬಿಡುವವರು ನಿಮ್ಮ ಹೆಂಡತಿ ಮಕ್ಕಳನ್ನು ಇಲ್ಲಿಯೇ ತಂದು ಬಿಡಿ, ಅವರನ್ನು ಕೂಡ ನಾವು ಚೆನ್ನಾಗಿ ನೋಡಿ ಕೊಳ್ಳುತ್ತೇವೆ. (ನಾಯಿಗಳನ್ನು ಸಾಕಲು ಯೋಗ್ಯತೆ ಇಲ್ಲದವರು ದಯವಿಟ್ಟು ನಾಯಿಗಳನ್ನು ಸಾಕಬೇಡಿ.), ನಾಯಿಗೆ ಹಳಸಿದ ಅನ್ನ ಮಣ್ಣಿನಲ್ಲಿ ಹಾಕಿದರೂ ಕೂಡ ತಿಂದು ನಿಯತ್ತಿನಲ್ಲಿರುತ್ತದೆ.”
ಇದು ‘ಎಚ್ಚರಿಕೆ’ ಎಂಬ ತಲೆಬರಹದೊಂದಿಗೆ ರಸ್ತೆ ಬದಿಯಲ್ಲಿ ಹಾಕಲಾಗಿರುವ ಕೆಂಪು ಫ್ಲೆಕ್ಸ್ ನಲ್ಲಿರುವ ಆಕ್ರೋಶದ ವಾಕ್ಯಗಳು.
ಬೆಳ್ತಂಗಡಿ ತಾಲೂಕು ಕೊಯ್ಯೂರು ಗ್ರಾಮದ ಪಿಜಕ್ಕಳ ಬಸ್ ನಿಲ್ದಾಣದ ಬಳಿ ದೊಂಬದಪಲ್ಕೆ ರಸ್ತೆ ಬದಿಯಲ್ಲಿ ಈ ಫ್ಲೆಕ್ಸ್ ಹಾಕಲಾಗಿದೆ. ಸುಡು ಬಿಸಿಲಿನ ಬೇಗೆಯಲ್ಲಿ ಬಾಯಾರಿ ಬೀದಿಯಲ್ಲಿ ಒಂದು ಗುಟುಕು ನೀರಿಗಾಗಿ, ತುತ್ತು ಅನ್ನಕ್ಕಾಗಿ ಅಲೆದಾಡಿ ನರಳುತ್ತಿರುವ ಅನಾಥ ನಾಯಿ ಮರಿಗಳನ್ನು ಕಂಡು ಮರುಗಿದವರು,
ಮನ ನೊಂದವರು ಯಾರೋ ಮುದ್ರಿಸಿ ಈ ಫ್ಲೆಕ್ಸ್ ಹಾಕಿರಬಹುದು. ಆದರೆ ಇದರ ಹಿಂದಿನ ಕಾಳಜಿ ಎಂಥವರಿಗೂ ಅರ್ಥವಾಗಬಹುದು.
ಇದೊಂದು ಆಕ್ರೋಶದ ಬರಹವಾದರೂ ಮನೆಯಲ್ಲಿ ಸಾಕಿದ ಹೆಣ್ಣು ನಾಯಿ ಹಾಕಿದ ಹೆಣ್ಣು ಮರಿಗಳನ್ನು ಬೀದಿಯಲ್ಲಿ ತಂದು ಬಿಟ್ಟು ಅನಾಥ ಮಾಡಿ.. ಕೈತೊಳೆದುಕೊಳ್ಳುವ ಜಾಯಮಾನದ
ಅಮಾನವೀಯ ಜನರಿಗೆ ಮನಪರಿವರ್ತನೆಗೆ ಇದೊಂದು ಪಾಠದಂತಿದೆ.
ಇಲ್ಲಿ ಹಾಕಿರುವುದು ವಿಳಾಸವೇ ಇಲ್ಲದ ಅನಾಮಿಕ, ಅಪರಿಚಿತ ಫ್ಲೆಕ್ಸ್ ಆದರೂ ಇದರಲ್ಲಿರುವ ಬರಹದಿಂದ ಬೀದಿಯಲ್ಲಿ ಬಿಟ್ಟು ಹೋಗುವ ನಾಯಿ ಮರಿಗಳ ಜೀವದ ಮೇಲಿನ ಕಾಳಜಿ ವ್ಯಕ್ತವಾಗುತ್ತದೆ.
ಇಂಥ ಫ್ಲೆಕ್ಸ್ ಬರಹವನ್ನು 100 ಜನ ಕುತೂಹಲದಿಂದ ಓದಿಕೊಂಡು ಹೋದರೂ ಕನಿಷ್ಠ 10 ಜನರದ್ದಾದರೂ ಪಶ್ಚಾತಾಪದಿಂದ ಮನಪರಿವರ್ತನೆಯಾಗಬಹುದಲ್ಲವೇ?

ಈ ಫ್ಲೆಕ್ಸ್ ನಲ್ಲಿ ಮನಸ್ಸಿಗೆ ನಾಟುವ ವಾಕ್ಯಗಳಿವೆ, ಇದು ಕೆಲವರ ಅಮಾನವೀಯತೆಯನ್ನು ಶುಚಿಗೊಳಿಸಲು ಪ್ರೇರಣೆಯಾದರೆ ಈ ಅನಾಮಿಕ ಫ್ಲೆಕ್ಸ್ ಹಾಕಿದವರ ಉದ್ದೇಶ ಈಡೇರಬಹುದು!
ಒಟ್ಟಿನಲ್ಲಿ ರಸ್ತೆ ಬದಿಯಲ್ಲಿ ಹಾಕಲಾಗಿರುವ ಈ ಫ್ಲೆಕ್ಸ್ ಒಂದು ಕ್ಷಣ ನಿಂತು ಓದಿಸುವಷ್ಟು ಎಲ್ಲರ ಗಮನ ಸೆಳೆಯುತ್ತಿರುವುದು ಮಾತ್ರ ಸುಳ್ಳಲ್ಲ..!
Post Comment