ಬೆಳ್ತಂಗಡಿ ಅಕ್ರಮ ಮರಳು ದಂಧೆ ಹಿಂದೆ-ಮುಂದೆ!

News ಕೌಂಟರ್
ಬೆಳ್ತಂಗಡಿ : ಇಲ್ಲಿನ ಪಟ್ಟಣ ಪಂಚಾಯತ್ ವ್ಯಾಪ್ತಿಯ ಸುದೆಮುಗೇರು ಬಿಷಪ್ ಹೌಸ್ ಸಮೀಪ ಸೋಮಾವತಿ ನದಿಯಲ್ಲಿ ಡ್ರೆಜ್ಜಿಂಗ್ ಯಂತ್ರ ಮತ್ತು ಹಿಟಾಚಿಗಳನ್ನು ಬಳಸಿ ಅಕ್ರಭವಾಗಿ ಮರಳು ಸಂಗ್ರಹಿಸಿ , ಪಿಕಪ್, ಲಾರಿ ಮತ್ತಿತರ ವಾಹನಗಳಲ್ಲಿ ಹಗಲು ರಾತ್ರಿ ನಿರ್ಭೀತವಾಗಿ ನಡೆಯುತ್ತಿದ್ದ ಮರಳು ಅಡ್ಡೆಯ ಪಾಲುದಾರರ ಮಧ್ಯೆ ವ್ಯಾವಹಾರಿಕ ಜಗಳ ಉಂಟಾಗಿ ಹೊಡೆದಾಡಿಕೊಂಡ ಘಟನೆ ಮೊನ್ನೆಯಷ್ಟೇ ನಡೆದು ಮುಚ್ಚಿ ಹೋಗಿದೆ.
ಇದಕ್ಕೂ ಮೊದಲು ಎರಡು ವಾರಗಳ ಹಿಂದೆ ರಾತ್ರೋ ರಾತ್ರಿ
‘ಕರ್ನಾಟಕ ಸರಕಾರ’ ಬೊಲೇರೋ ವಾಹನ ತಹಶೀಲ್ದಾರ್, ಕಂದಾಯ ನಿರೀಕ್ಷಕರು ಮತ್ತಿತರ ಅಧಿಕಾರಿಗಳ ಸಮೇತರಾಗಿ
ಮರಳು ಅಡ್ಡೆಗೆ ಹೋಗಿ ನಿಂತಿತ್ತು. ಜೆಸಿಬಿ, ಡ್ರೆಜ್ಜಿಂಗ್, ಪಿಕಪ್, ಲಾರಿ, ದ್ವಿಚಕ್ರ ವಾಹನಗಳ ಕೇಜಿಗಟ್ಟಲೆ ತೂಗುವ ಕೀ ಗೊಂಚಲುಗಳನ್ನು ಕಂದಾಯ ಇಲಾಖಾಧಿಕಾರಿಗಳು ವಶಕ್ಕೆ ಪಡೆದು ಬಂದಿದ್ದರು.
ರಾತ್ರೋ ರಾತ್ರಿ ತಹಶೀಲ್ದಾರ್, ಕಂದಾಯ ನಿರೀಕ್ಷಕರು ಮರಳು ಅಡ್ಡೆಗೆ ದಾಳಿ ರೂಪದ ‘ಸೌಹಾರ್ದ ಭೇಟಿ’ ನೀಡಿದಾಗ ವಶಪಡಿಸಿಕೊಂಡ ಯಂತ್ರ, ವಾಹನಗಳ ಕೀಗೊಂಚಲು ರಾತ್ರಿ ಬೆಳಗಾಗುವುದರೊಳಗೆ
ಮತ್ತೆ ಮರಳು ದಂಧೆಕೋರರ ಮಡಿಲು ಸೇರಿ ಪವಾಡವೇ ನಡೆದಿತ್ತು.
ಸುದೆಮುಗೇರು ಬಳಿ ಸೋಮಾವತಿಯ ಎದೆ ಬಗೆದು ಬಗೆದು ಮರಳು ನುಂಗಿ ನೀರು ಕುಡಿದ ಅಕ್ರಮ ಮರಳು ದಂಧೆಕೋರರ ವಿರುದ್ಧ ತಹಶೀಲ್ದಾರ್ ಅಥವಾ ಕಂದಾಯ ಇಲಾಖಾಧಿಕಾರಿಗಳು ಯಾವ ಕ್ರಮ ಕೈಗೊಂಡರೋ ಎನ್ನುವುದು ನಿಗೂಢ ಎಂಬ ಮಾತುಗಳು ಸ್ಥಳೀಯರಿಂದ ಕೇಳಿ ಬರುತ್ತಿದೆ.
ಗ್ರಾಮಪಂಚಾಯತ್ ಅಧ್ಯಕ್ಷರನ್ನೋ ಪಿಡಿಒ ಅಥವಾ ಸದಸ್ಯರಿಗೆ ಮಾಮೂಲು ಕಪ್ಪ ಕಾಣಿಕೆ ಒಪ್ಪಿಸಿ ನಡೆಯುವ ಗ್ರಾಮೀಣ ಪ್ರದೇಶದ
ಸಣ್ಣ ಪುಟ್ಟ ಮರಳು ಅಡ್ಡೆಗೆ ಕಪಟ ದಾಳಿ ನಡೆಸುವ ಪೊಲೀಸರು, ಕಂದಾಯ ಇಲಾಧಿಕಾರಿಗಳಿಗೆ ಬೆಳ್ತಂಗಡಿ ತಾಲೂಕು ಕಚೇರಿ, ಪೊಲೀಸ್ ಠಾಣೆ, ಪಟ್ಟಣ ಪಂಚಾಯತ್ ಕಾರ್ಯಾಲಯದಿಂದ ಒಂದು ಕಿ.ಮೀ ದೂರದಲ್ಲಿ ನಿರಾತಂಕವಾಗಿ ಇಡೀ ವರ್ಷ ನಡೆಯುತ್ತಿದ್ದ ಮರಳು ಅಡ್ಡೆಗೆ ಟನ್ ಗಟ್ಟಲೆ ಮರಳು ರಾಶಿ ಹಾಕಿದ್ದಾಗ ದಾಳಿ ನಡೆಸಲು ಆಸಕ್ತಿಯೂ ಇರಲಿಲ್ಲ, ಪಾಪ ಮಾಹಿತಿಯೂ ಇರಲಿಲ್ಲ !!
ಆದರೆ ರಾಶಿ ರಾಶಿ ಮರಳು ಖಾಲಿಯಾದಾಗ ಮಳೆ ಬಂದು ಮರಳು ದಂಧೆ ನಿಲ್ಲಿಸುವ ಹಂತಕ್ಕೆ ಬರುವಾಗ ‘ಟ್ರಯಲ್ (ನಾಟ್ ರಿಯಲ್.. ) ರೈಡ್ ಮಾಡುತ್ತಾರೆ, ಅದೂ ರಾತ್ರೋ ರಾತ್ರಿ ; ಇಂಥ ವಿಪರೀತ ದಕ್ಷ ಅಧಿಕಾರಿಗಳನ್ನು ಮೆಚ್ಚಲೇ ಬೇಕು !
ಆದರೆ ಕಂದಾಯ ಇಲಾಖಾಧಿಕಾರಿಗಳ ನಾಟಕೀಯ ದಾಳಿಯ ಬೆನ್ನಲ್ಲೇ ಮರಳು ದಂಧೆಯ ಪಾಲುದಾರರ ಮಧ್ಯೆ ನಡೆದ ಹೊಡೆದಾಟದ ಮರ್ಮವೇನು ಎಂಬ ಪ್ರಶ್ನೆ ನಾಗರಿಕರನ್ನು ಸ್ಥಳೀಯರನ್ನು ಕಾಡಲಾರಂಭಿಸಿದೆ.
Post Comment