ಧರ್ಮಸ್ಥಳ ಗ್ರಾಮದಲ್ಲಿ ಹೂತು ಹಾಕಿರುವ ಶವಗಳ ಅಧ್ಯಾಯ ಆರಂಭ:ಕೊನೆಗೂ ದ.ಕ. ಎಸ್.ಪಿ.ಗೆ ದೂರು ನೀಡಿದ ಆ ವ್ಯಕ್ತಿ !

ಮಂಗಳೂರು : ಇತ್ತೀಚೆಗಷ್ಟೇ ರಾಜ್ಯಾದ್ಯಂತ ಸಂಚಲನ ಮೂಡಿಸಿದ್ದ ಧರ್ಮಸ್ಥಳ ಗ್ರಾಮದಲ್ಲಿ ನಡೆದಿರುವಮುಚ್ಚಿ ಹಾಕಲ್ಪಟ್ಟಿರುವ ಅತ್ಯಾಚಾರ-ಕೊಲೆ ಮತ್ತಿತರ ಅಪರಾಧ ಪ್ರಕರಣಗಳಲ್ಲಿ ಭಾಗಿಯಾಗಿ ಕೊಲೆಯಾದವರ ಮೃತ ದೇಹಗಳನ್ನು ಹೂತು ಹಾಕಿದ ವ್ಯಕ್ತಿಯೊಬ್ಬರು ಗುರುವಾರ ದ.ಕ.ಎಸ್ಪಿಗೆ ಮಹತ್ವದ ದೂರನ್ನು ನೀಡಿದ್ದಾರೆ.
ಸುಪ್ರೀಮ್ ಕೋರ್ಟ್ ವಕೀಲರ ಮೂಲಕ ಬಿಡುಗಡೆ ಮಾಡಿದ್ದ ಪತ್ರಕ್ಕೆ ಸಂಬಂಧಿಸಿ ಬೆಂಗಳೂರಿನ ವಕೀಲರ ನಿಯೋಗ ಕೊನೆಗೂ ಗುರುವಾರ ದ.ಕ. ಎಸ್ಪಿ ಅವರನ್ನು ಭೇಟಿಯಾಗಿ ಸುದೀರ್ಘವಾಗಿ ಚರ್ಚಿಸಿದ್ದು
ಇನ್ನೊಂದೆಡೆ ಅನೇಕ ಶವಗಳನ್ನು ಹೂತು ಹಾಕಿದ್ದೇನೆ ಎಂಬ ಹೇಳಿಕೆ ನೀಡಿದ್ದ ವ್ಯಕ್ತಿ ಎಸ್.ಪಿ. ಅವರಿಗೆ ದೂರು ನೀಡಿ ಇಡೀ ಹತ್ಯಾಕಾಂಡದ ತನಿಖೆಗೆ ಒತ್ತಾಯಿಸಿದ್ದಾರೆ ಎಂದು ತಿಳಿದು ಬಂದಿದೆ.
ಇದೇ ವಿಚಾರಕ್ಕೆ ಸಂಬಂಧಿಸಿ ಜೂನ್ 30ರಂದು ಬೆಂಗಳೂರು ಪ್ರೆಸ್ ಕೌನ್ಸಿಲ್ ರಾಜ್ಯಾಧ್ಯಕ್ಷ ರಾಘವೇಂದ್ರಾಚಾರ್ ಅವರು ದ.ಕ.ಪೊಲೀಸ್ ಅಧೀಕ್ಷಕರಿಗೆ ಮಹತ್ವದ ಪತ್ರವೊಂದನ್ನು ಬರೆದಿದ್ದರು. ಪತ್ರದ ಬೆನ್ನಲ್ಲೇ ಎಸ್.ಪಿ. ಅವರು ರಾಘವೇಂದ್ರಾಚಾರ್ ಅವರಿಗೆ ಪ್ರತಿಕ್ರಿಯೆ ನೀಡಿದ್ದು ಇದೀಗ ಪತ್ರಕ್ಕೆ ಸ್ಪಂದಿಸಿದ ಪೊಲೀಸ್ ಅಧೀಕ್ಷರಿಗೆ ಆ ಮಾಹಿತಿದಾರ ದೂರು ನೀಡಿದ್ದಾರೆ.
ಪೊಲೀಸ್ ಅಧೀಕ್ಷರಿಗೆ ನೀಡಿರುವ ದೂರಿನಲ್ಲಿ ಆ ವ್ಯಕ್ತಿ ಹೂತು ಹಾಕಿರುವ ಶವಗಳ ಪೈಕಿ ಅತ್ಯಾಚಾರಕ್ಕೊಳಗಾದ ಅನೇಕ ಹೆಣ್ಣು ಮಕ್ಕಳ ಶವಗಳೂ ಸೇರಿದ್ದವು, ಹೆಣ್ಣು ಮಕ್ಕಳ, ಮಹಿಳೆಯರ ಶವಗಳಲ್ಲಿ ಒಳ ಉಡುಪುಗಳೇ ಇರುತ್ತಿರಲಿಲ್ಲ, ದೇಹಗಳಲ್ಲಿ ಅತ್ಯಾಚಾರ ನಡೆದಿರಬಹುದಾದ ಗುರುತುಗಳೂ ಕಂಡು ಬರುತ್ತಿದ್ದವು ಎಂದು ಉಲ್ಲೇಖಿಸಲಾಗಿದೆ.
ವಕೀಲರ ನಿಯೋಗ ಮಾಹಿತಿದಾರನ ಭದ್ರತೆ ಬಗ್ಗೆ ಹಾಗೂ ಇಡೀ ಪ್ರಕರಣಕ್ಕೆ ಸಂಬಂಧಿಸಿ ಚರ್ಚೆ ನಡೆಸಿದೆ.
ಬೆಳ್ತಂಗಡಿ ತಾಲೂಕಿನ ಧರ್ಮಸ್ಥಳದಲ್ಲಿ ನಡೆದಿರುವ ಅಪರಾಧ ಕೃತ್ಯಗಳಲ್ಲಿ ಕೊಲೆಯಾದ ಶವಗಳನ್ನು ಹೂತು ಹಾಕಿದ್ದೇನೆ ಎನ್ನಲಾದ ವ್ಯಕ್ತಿಯೊಬ್ಬರು ಸೂಕ್ತ ಕಾನೂನಾತ್ಮಕ ರಕ್ಷಣೆ ಒದಗಿಸಿದಲ್ಲಿ ಹೂತು ಹಾಕಲಾದ ಶವಗಳನ್ನು ಹೊರತೆಗೆಯಲು ಮತ್ತು ಪ್ರಕರಣಗಳ ಮಾಹಿತಿ ಬಹಿರಂಗಪಡಿಸಲು ಸಿದ್ಧನಿರುವುದಾಗಿ ಸ್ವಯಂಪ್ರೇರಿತವಾಗಿ ಘೋಷಿಸಿದ ಬಗ್ಗೆ ಸುಪ್ರೀಮ್ ಕೋರ್ಟ್ ವಕೀಲರಾದ ಓಜಸ್ವಿ ಗೌಡ ಮತ್ತು ಸಚಿನ್ ದೇಶಪಾಂಡೆ ಮತ್ತಿತರ ವಕೀಲರ ನಿಯೋಗ ಪತ್ರವೊಂದನ್ನು ಬಿಡುಗಡೆ ಮಾಡಿದ್ದರು.
ಆ ವ್ಯಕ್ತಿ ಕೊಟ್ಟ ಮಾಹಿತಿಯ ಆಧಾರದಲ್ಲಿ ಬೆಂಗಳೂರಿನ ವಕೀಲರಾದ ಓಜಸ್ವಿ ಗೌಡ ಮತ್ತು ಸಚಿನ್ ದೇಶಪಾಂಡೆ ಅವರು ಬಿಡುಗಡೆ ಮಾಡಿದ ಬಹಿರಂಗ ಪತ್ರಗಳು ಸಾಮಾಜಿಕ ಜಾಲತಾಣಗಳಲ್ಲಿ
ವೈರಲ್ ಆಗಿ ವ್ಯಾಪಕ ಚರ್ಚೆಗೆ ಕಾರಣವಾಗಿ ರಾಜ್ಯಾದ್ಯಂತ ಸಂಚಲನ ಮೂಡಿಸಿತ್ತು. ಜೊತೆಗೆ 12 ವರ್ಷಗಳಿಂದ ಹೋರಾಟಗಳ ಮೂಲಕ ಮುನ್ನೆಲೆಯಲ್ಲಿರುವ ರಾಷ್ಟ್ರಮಟ್ಟದಲ್ಲಿ ಸಂಚಲನ ಮೂಡಿಸಿರುವ ಪ್ರಕರಣಗಳಾದ 2012ರಲ್ಲಿ ನಡೆದ (ಧರ್ಮಸ್ಥಳದ ಮಾಜಿ ಆನೆ ಮಾವುತ ನಾರಾಯಣ ಮತ್ತು ಸಹೋದರಿ ಯಮುನಾ ಎಂಬವರ) ಜೋಡಿ ಕೊಲೆ ಹಾಗೂ ಸೌಜನ್ಯ ಅತ್ಯಾಚಾರ-ಕೊಲೆ ಪ್ರಕರಣಗಳಿಗೂ ಈ ವ್ಯಕ್ತಿ ಬಿಚ್ಚಿಡಲಿರುವ ಪ್ರಕರಣಗಳಿಗೂ ಸಂಬಂಧವಿರಬಹುದೇ? ಅಥವಾ ಪೊಲೀಸ್ ಇಲಾಖೆಯೇ ಮಾಹಿತಿ ಹಕ್ಕಿನಲ್ಲಿ ಕೊಟ್ಟಂತೆ
2001 ರಿಂದ 2012ರತನಕ 11 ವರ್ಷದಲ್ಲಿ ನಡೆದ 452 ‘ಆತ್ಮಹತ್ಯೆ’ ಗಳು ಮತ್ತು 16 ಕೊಲೆ ಪ್ರಕರಣಗಳು ಮರುಜೀವ ಪಡೆಯಲಿದೆಯೇ? ಎಂಬ ಹತ್ತು ಹಲವು ಕುತೂಹಲಗಳು ಇದೀಗ ಜಿಲ್ಲೆಯ ಜನರಲ್ಲಿ ಮೂಡಿದೆ.
ಇನ್ನೊಂದೆಡೆ ದೂರುದಾರ ದೂರಿನಲ್ಲಿ ಉಲ್ಲೇಖಿಸಿರುವ ಅಪರಾಧ ಪ್ರಕರಣಗಳ ಮಾಹಿತಿಯ ಆಧಾರದಲ್ಲಿ ದ.ಕ. ಎಸ್.ಪಿ. ಅವರು ಉನ್ನತ ಮಟ್ಟದ ತನಿಖೆ ಕೈಗೆತ್ತಿಕೊಂಡರೆ ಈ ಹತ್ಯಾಕಾಂಡ ದೇಶವನ್ನೇ ಬೆಚ್ಚಿ ಬೀಳಿಸುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.
Post Comment