ನಿಗೂಢ ಕೃತ್ಯಗಳ ಶವಗಳ ರಹಸ್ಯ ವಿಲೇವಾರಿ ಬಗ್ಗೆ ಜೀವಭಯದಲ್ಲಿ ಸಂತ್ರಸ್ತನ ದೂರು: ನ್ಯಾಯಾಲಯದ ಅನುಮತಿಯಲ್ಲಿ ಚಾರಿತ್ರಿಕ ಪ್ರಕರಣ ದಾಖಲಿಸಿಕೊಂಡ ಧರ್ಮಸ್ಥಳ ಪೊಲೀಸರು

ಬೆಳ್ತಂಗಡಿ : ಧರ್ಮಸ್ಥಳ ಗ್ರಾಮದಲ್ಲಿ ಅತ್ಯಾಚಾರಕ್ಕೊಳಗಾಗಿ ಕೊಲೆಯಾದ ಹೆಣ್ಣು ಮಕ್ಕಳ ಶವಗಳೂ ಸೇರಿದಂತೆ ಹಲವಾರು ಮೃತದೇಹಗಳನ್ನು ಹೂತು ಹಾಕಿರುವುದನ್ನು ತೋರಿಸುವುದಾಗಿ ತನಗೆ ಪ್ರಾಣ ಬೆದರಿಕೆ ಇದೆ, ರಕ್ಷಣೆ ಒದಗಿಸಬೇಕು ಎಂದು ದ.ಕ. ಎಸ್.ಪಿ. ಅವರಿಗೆ ವಕೀಲರ ಮೂಲಕ ಲಿಖಿತ ಹೇಳಿಕೆ ನೀಡಿದ್ದ ವ್ಯಕ್ತಿ ನೀಡಿದ ದೂರಿನಂತೆ ಧರ್ಮಸ್ಥಳ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಧರ್ಮಸ್ಥಳ ಗ್ರಾಮದಲ್ಲಿ ಕೆಲವು ವರ್ಷಗಳ ಹಿಂದೆ ಸ್ವಚ್ಛತಾ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದ ಹಾಗೂ ನಿಗೂಢ ಸಾವುಗಳ ಅನೇಕ ಶವಗಳನ್ನು ಬಲವಂತ ಮತ್ತು ಬೆದರಿಕೆಯಿಂದ ಹೂತು ಹಾಕಿದ್ದ ಹಲ್ಲೆಗೊಳಗಾಗಿ
ದೌರ್ಜನ್ಯ ಬೆದರಿಕೆ ಸಹಿಸಿಕೊಳ್ಳಲಾಗದೆ ರಾತ್ರೋ ರಾತ್ರಿ ಕುಟುಂಬ ಸಮೇತ ಧರ್ಮಸ್ಥಳ ತೊರೆದಿದ್ದ ಮೂಲತಃ ಧರ್ಮಸ್ಥಳದ ನಿವಾಸಿಯಾಗಿರುವ ವ್ಯಕ್ತಿಯೊಬ್ಬರು ಜುಲೈ 3 ರಂದು ದ.ಕ. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯವರ ಕಚೇರಿಗೆ ಮತ್ತು ಧರ್ಮಸ್ಥಳ ಪೊಲೀಸ್ ಠಾಣೆಗೆ ಹೋಗಿ ತನಗೆ ತಿಳಿದಿರುವ ಆತಂಕಕಾರಿ ಮಾಹಿತಿಗಳನ್ನು ನಮೂದಿಸಿ ವಕೀಲರ ಮೂಲಕ ದೂರು ನೀಡಿದ್ದರು.
ಇದೀಗ ಈ ದೂರಿನ ಹಿನ್ನೆಲೆಯಲ್ಲಿ ಧರ್ಮಸ್ಥಳ ಪೊಲೀಸರು NC ಮಾಡಿ ಹಿಂಬರಹ ನೀಡಿದ್ದರು.
ದ.ಕ.ಎಸ್.ಪಿ. ಅವರ ಸೂಚನೆಯಂತೆ ಜುಲೈ 4 ರಂದು ಬೆಳ್ತಂಗಡಿ ನ್ಯಾಯಾಲಯದಿಂದ ದೂರಿನ ಬಗ್ಗೆ ಅನುಮತಿ ಪಡೆದು ಸಂಜೆ ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ BNS 2023(u/s-211(a)) ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ದ.ಕ. ಎಸ್ಪಿಗೆ ನೀಡಿರುವ ದೂರಿನ ಬಗ್ಗೆ ಬೆಂಗಳೂರಿನ ವಕೀಲರಾದ ಓಜಸ್ವಿ ಗೌಡ ಸಚಿನ್ ದೇಶಪಾಂಡೆ ಬಿಡುಗಡೆಗೊಳಿಸಿದ ಪತ್ರಿಕಾ ಹೇಳಿಕೆಯಲ್ಲಿ “ಸ್ವತಂತ್ರ ಭಾರತದ ಇತಿಹಾಸದಲ್ಲೇ ಇಂಥ ಪ್ರಕರಣ ಮತ್ತೊಂದು ಇರಲಾರದು” ಎಂದಿದ್ದಾರೆ.
ಈ ಹಿನ್ನೆಲೆಯಲ್ಲಿ ಇದೊಂದು ಚಾರಿತ್ರಿಕ ಪ್ರಕರಣವಾಗಿ ಸಂಚಲನ ಮೂಡಿಸುವ ಸಾಧ್ಯತೆ ಇದೆ. ಇದೀಗ ಈ ಗಂಭೀರ ದೂರಿನ ಬಗ್ಗೆ ಕುತೂಹಲ ಮೂಡಿದೆ.
Post Comment