ಬೆಳ್ತಂಗಡಿಯಲ್ಲಿ ಆತಂಕ ಹುಟ್ಟಿಸಿದ ಅಂಬ್ಯುಲೆನ್ಸ್ ಗಸ್ತು : ನಾಗರೀಕರು ಸುಸ್ತು..

ಸಾಲು ಸಾಲು ಅಂಬ್ಯುಲೆನ್ಸ್ ಗಳ ಎಮರ್ಜೆನ್ಸಿ ಸೈರನ್ ಘರ್ಜನೆಗೆ
ನಾಗರೀಕರ ಎದೆ ಡವ ಡವ…!!
ಬೆಳ್ತಂಗಡಿ : ರಾಷ್ಟ್ರೀಯ ಹೆದ್ದಾರಿಯ ಬೆಳ್ತಂಗಡಿ- ಉಜಿರೆ ಮುಖ್ಯ ರಸ್ತೆಯಲ್ಲಿ ಸಾಲು ಸಾಲು ಅಂಬ್ಯುಲೆನ್ಸ್ ಗಳು ಭಯಾನಕ ಸೈರನ್ ಶಬ್ದ
ಹಾಕಿಕೊಂಡು ಗಂಭೀರ ಸ್ಥಿತಿಯಲ್ಲಿರುವ ರೋಗಿಗಳನ್ನು ಎಮರ್ಜೆನ್ಸಿ ವಿಭಾಗಕ್ಕೆ ಸಾಗಿಸುವಂತೆ ಅತೀ ವೇಗವಾಗಿ ಸಂಚರಿಸಿ ಆತಂಕ ಹುಟ್ಟಿಸಿದ ಪ್ರಸಂಗ ಬುಧವಾರ ನಡೆಯಿತು.

ಉಜಿರೆ , ಬೆಳ್ತಂಗಡಿ, ಗುರುವಾಯನಕೆರೆ ಪೇಟೆ, ಮಾರುಕಟ್ಟೆಗಳಲ್ಲಿ ವ್ಯಾಪಾರಿಗಳು, ನಾಗರಿಕರು ದೀಪಾವಳಿ ಹಬ್ಬದ ಸಂಭ್ರಮದಲ್ಲಿರುವಾಗ ನಗರದ ಮುಖ್ಯ ರಸ್ತೆಯಲ್ಲಿ ಒಮ್ಮೆಲೇ ದೊಡ್ಡ ದುರಂತ ಸಂಭವಿಸಿದ ಸ್ಥಳದಿಂದ ಜೀವನ್ಮರಣ ಹೋರಾಟದಲ್ಲಿರುವ ರೋಗಿಗಳನ್ನು ಆಸ್ಪತ್ರೆಗೆ ಸಾಗಿಸುವಂತೆ ಅಥವಾ ಹೆಣ ಸಾಗಿಸುವಂತೆ ಸಾಲು ಸಾಲಾಗಿ ಅಂಬ್ಯುಲೆನ್ಸ್ ಗಳನ್ನು ಅವುಗಳ ಚಾಲಕ/ಮಾಲಕರು ವೇಗವಾಗಿ ಚಲಾಯಿಸಿ ಬೆಳ್ತಂಗಡಿಯಲ್ಲಿ ಏನೋ ದೊಡ್ಡ ಅನಾಹುತ ಆಗಿದೆ ಎಂಬಂತೆ ನಾಗರಿಕರ ಗಮನ ಸೆಳೆದು ಆತಂಕ ಹುಟ್ಟಿಸಿರುವುದು ಚರ್ಚೆಗೆ ಕಾರಣವಾಯಿತು.
ದೀಪಾವಳಿ ವಾಹನ ಪೂಜಾ ಪ್ರಯುಕ್ತ ಉಜಿರೆಯಲ್ಲಿ ಆಯೋಜಿಸಲಾಗಿದ್ದ ಕಾರ್ಯಕ್ರಮ ಮುಗಿಸಿ ಬುಧವಾರ ಸುಮಾರು 11 ಗಂಟೆ ಹೊತ್ತಿಗೆ ಹೊರಟ ಪುಷ್ಪಾಲಂಕೃತ ಅಂಬ್ಯುಲೆನ್ಸ್ ಗಳ ಸೈರನ್ ಸಹಿತ ಸಂಚಾರವು ಸಂಭ್ರಮಕ್ಕಿಂತ ಆತಂಕ ಹುಟ್ಟಿಸಿದಂತಾಗಿದೆ ಎಂಬ ಅಭಿಪ್ರಾಯಗಳು ನಾಗರಿಕರಿಂದ ಕೇಳಿ ಬಂದಿದೆ. ಆದರೆ ಕಾರ್ಯಕ್ರಮದ ಮಾಹಿತಿ ತಿಳಿಯದೆ ಸೈರನ್ ಗದ್ದಲ ನಾಗರಿಕರಲ್ಲಿ ಗೊಂದಲ ಮೂಡಲು ಕಾರಣವಾಯಿತು.

ದಿನ ನಿತ್ಯ ನೂರಾರು ಗಾಯಾಳುಗಳನ್ನು , ರೋಗಿಗಳನ್ನು , ಗರ್ಭಿಣಿಯರನ್ನು ತಮ್ಮ ಜೀವದ ಹಂಗು ತೊರೆದು ಸಕಾಲದಲ್ಲಿ ಆಸ್ಪತ್ರೆಗಳಿಗೆ ಸಾಗಿಸಿ ಜೀವ ಉಳಿಸುವ ಪುಣ್ಯ ಕಾರ್ಯಗಳನ್ನು ಮಾಡಿ ಜೀವ ರಕ್ಷಕರಾಗಿರುವ, ಆಪತ್ಬಾಂಧವರಾಗಿರುವ ಅಂಬ್ಯುಲೆನ್ಸ್ ಚಾಲಕರು, ಮಾಲಕರು ಇಂದು ಆಸ್ಪತ್ರೆಗೆ ತುರ್ತಾಗಿ ಸಾಗಿಸಬೇಕಾದ ಯಾವ ರೋಗಿಗಳೂ ಇಲ್ಲದೆ ಇಷ್ಟೊಂದು ಸಾಲು ಸಾಲಾಗಿ ಎಮರ್ಜೆನ್ಸಿ ಸೈರನ್ ಹಾಕಿಕೊಂಡು ರೌಂಡ್ಸ್ ಹೊರಟಿದ್ದು ಈ ಅಂಬ್ಯುಲೆನ್ಸ್ ಗಸ್ತು ಒಂದು ಕ್ಷಣ ನಾಗರೀಕರಲ್ಲಿ ಗದ್ದಲ, ಗಾಬರಿ ಸೃಷ್ಟಿಸಿರುವುದು ಚರ್ಚೆಗೆ ಕಾರಣವಾಯಿತು.
























Post Comment