ಧರ್ಮಸ್ಥಳ ಸಮೂಹ ಸಮಾಧಿ ಪ್ರಕರಣ: ನ್ಯಾಯಾಲಯಕ್ಕೆ ಹಾಜರಾಗುವ ಪೂರ್ವದಲ್ಲಿ ಸ್ವಾಮೀಜಿ ಮುಂದೆ ಪ್ರಮಾಣ ಮಾಡಿದ್ದ ಚಿನ್ನಯ್ಯ

ಬೆಳ್ತಂಗಡಿ : ದೇಶದಲ್ಲೇ ಸಂಚಲನ ಮೂಡಿಸಿದ್ದ ಧರ್ಮಸ್ಥಳ ನೂರಾರು ಶವಗಳ ಕಾನೂನು ಬಾಹಿರ ದಫನ ಪ್ರಕರಣದ ಸಾಕ್ಷಿ ದೂರುದಾರನಾದ ಚಿನ್ನಯ್ಯ ನ್ಯಾಯಾಲಯದಲ್ಲಿ 164 ಹೇಳಿಕೆ ದಾಖಲಿಸುವ ಪೂರ್ವದಲ್ಲಿ 2 ವರ್ಷಗಳ ಹಿಂದೆ ಒಕ್ಕಲಿಗ
ಮಹಾ ಸಂಸ್ಥಾನದ ಶ್ರೀ ನಿರ್ಮಲಾನಂದ ಸ್ವಾಮೀಜಿಗಳ ಮುಂದೆ ನಿಂತು ತಾನು ಧರ್ಮಸ್ಥಳ ಸುತ್ತಮುತ್ತ ಅಕ್ರಮವಾಗಿ ನೂರಾರು ಶವಗಳನ್ನು ಹೂತು ಹಾಕಿರುವುದೂ ಸೇರಿದಂತೆ ಸೌಜನ್ಯ ಅತ್ಯಾಚಾರ -ಕೊಲೆ ಪ್ರಕರಣಗಳಿಗೆ ಸಂಬಂಧಿಸಿದ ಆತಂಕಕಾರಿ ಸಂಗತಿಗಳನ್ನು ಹಂಚಿಕೊಂಡಿರುವ ಸ್ಫೋಟಕ ಮಾಹಿತಿಯೊಂದು ಇದೀಗ ಬಯಲಾಗಿದೆ.
ದಕ್ಷಿಣ ಕನ್ನಡ ಜಿಲ್ಲೆಯ ಧರ್ಮಸ್ಥಳದಲ್ಲಿ ನನ್ನ ಮೂಲಕ ಏನೇನು ಕೃತ್ಯಗಳನ್ನು ಮಾಡಿಸಿದರು, ತಾನು ಶವಗಳನ್ನು ಹೂತು ಹಾಕಿರುವ ಬಗ್ಗೆ ಹಾಗೂ ಸೌಜನ್ಯಳನ್ನು ಹಾಳು ಮಾಡಿ ಕೊಲೆ ಮಾಡಿರುವ ಬಗ್ಗೆ ವಿವರಿಸುತ್ತಾ “ಆಕೆಯ ಶವವನ್ನು ನಾನೇ ಹಳ್ಳದ ಪಕ್ಕ ಎಸೆದದ್ದು.. ” ಎಂಬಿತ್ಯಾದಿ ಸ್ಫೋಟಕ ಸಂಗತಿಗಳನ್ನು ಸ್ವಾಮೀಜಿ ಎದುರಲ್ಲಿ ಹೋರಾಟಗಾರರಾದ ಮಹೇಶ್ ಶೆಟ್ಟಿ ತಿಮರೋಡಿ , ಗಿರೀಶ್ ಮಟ್ಟಣ್ಣನವರ್ ಮತ್ತಿತರರ ಸಮ್ಮುಖದಲ್ಲಿ 2023ರ ಸೆಪ್ಟೆಂಬರ್ 17ರಂದು ಪ್ರಮಾಣ ಮಾಡಿದ್ದನೆಂಬ ವಿಚಾರ ಇದೀಗ ಬಹಿರಂಗೊಂಡಿದೆ.
ಸೌಜನ್ಯ ಅತ್ಯಾಚಾರ-ಕೊಲೆ ಪ್ರಕರಣವೂ ಸೇರಿದಂತೆ ನೂರಾರು ಶವಗಳನ್ನು ಹೂತು ಹಾಕಿರುವ ರಹಸ್ಯಗಳ ಬಗ್ಗೆ ಇಂಥ ಪುಣ್ಯ ಕ್ಷೇತ್ರದಲ್ಲಿ ನಿರಾತಂಕವಾಗಿ ಪ್ರಮಾಣವಾಗಿ ಬಿಚ್ಚಿಟ್ಟಿದ್ದ ಚಿನ್ನಯ್ಯ 2025ರ ಜುಲೈ ತಿಂಗಳಲ್ಲಿ ಇನ್ನೂ ಮುಂದುವರಿದು ವಿಚಾರವನ್ನು ವಕೀಲರ ಮೂಲಕ ದ.ಕ. ಎಸ್ಪಿಯನ್ನು ಭೇಟಿಯಾಗಿ ಧರ್ಮಸ್ಥಳ ಸುತ್ತಮುತ್ತ ನೂರಾರು ಶವಗಳನ್ನು ಕಾನೂನುಬಾಹಿರವಾಗಿ ಹೂತಿಟ್ಟಿರುವ ಬಗ್ಗೆ ಮೌಖಿಕ ಹೇಳಿಕೆ ಮತ್ತು ಲಿಖಿತ ದೂರು ನೀಡಿದ್ದರು.
ಇದರ ಬೆನ್ನಲ್ಲೇ ಬೆಳ್ತಂಗಡಿ ನ್ಯಾಯಾಲಯದಲ್ಲಿ ನ್ಯಾಯಾಧೀಶರ ಮುಂದೆಯೂ ಚಿನ್ನಯ್ಯ 164 ಹೇಳಿಕೆ ದಾಖಲಿಸಿದ್ದು ರಾಜ್ಯ ಸರಕಾರ
ಎಸ್ ಐ ಟಿ ರಚಿಸಿತ್ತು. ತನಿಖೆ ಆರಂಭಿಸಿದ ಎಸ್ ಐ ಟಿ ಪುತ್ತೂರು ಎ.ಸಿ. ಸ್ಟೆಲ್ಲಾ ವರ್ಗೀಸ್ ಅವರು ಮತ್ತು ಎಸ್ ಐ ಟಿ ಮುಖ್ಯಸ್ಥ ಡಾ. ಪ್ರಣವ್ ಕುಮಾರ್ ಮೊಹಾಂತಿ ನೇತೃತ್ವದಲ್ಲಿ ಮೊದಲ ಹಂತದಲ್ಲಿ ಚಿನ್ನಯ್ಯ ಸೂಚಿಸಿದ (13+4 ) ಸ್ಥಳಗಳಲ್ಲಿ ಮಹಜರು ನಡೆಸಿ ಬಳಿಕ ಹಂತ ಹಂತವಾಗಿ ಅಸ್ಥಿಪಂಜರ ಶೋಧ ಕಾರ್ಯಾಚರಣೆ ಮುಂದುವರಿಸಿದ್ದರು.
ಬೆಳ್ತಂಗಡಿ ನ್ಯಾಯಾಲಯದಲ್ಲಿ 164 ಹೇಳಿಕೆ ದಾಖಲಿಸುವುದಕ್ಕೂ ಮೊದಲು 2023ರ ಸೆಪ್ಟೆಂಬರ್ ತಿಂಗಳಲ್ಲಿ ಚಿನ್ನಯ್ಯ ವಿವರಿಸಿದ
ಧರ್ಮಸ್ಥಳ ಸೌಜನ್ಯ ಪ್ರಕರಣ ಹಾಗೂ ನೂರಾರು ಶವಗಳನ್ನು ಅಕ್ರಮವಾಗಿ ಹೂತು ಹಾಕಿರುವ ಭಯಾನಕ ಅಧ್ಯಾಯಗಳನ್ನು
ಆಲಿಸಿದ ಪೂಜ್ಯ ಒಕ್ಕಲಿಗ ಸ್ವಾಮೀಜಿ ಶ್ರೀ ನಿರ್ಮಲಾನಂದ ಶ್ರೀಗಳು ” ಸೌಜನ್ಯಾಳಿಗೆ ನ್ಯಾಯ ಸಿಗಲೇಬೇಕು, ನಿಮ್ಮ ಜೊತೆಗೆ ಮಠ ನಿಲ್ಲುತ್ತದೆ. ನಾನು ಮುಖ್ಯ ಮಂತ್ರಿ ಅವರಿಗೆ ಮಾತನಾಡುತ್ತೇನೆ, ಒಕ್ಕಲಿಗ ಸಮುದಾಯ ಹೆಣ್ಣು ಮಗಳಿಗೆ ಅನ್ಯಾಯವಾದರೆ ನಾವು ಸಹಿಸುವುದಿಲ್ಲ, ನೀವು ಧೈರ್ಯವಾಗಿರಿ ನಮ್ಮ ಆಶೀರ್ವಾದ ಸದಾ ನಿಮ್ಮ ಹೋರಾಟಕ್ಕೆ ಇದೆ ” ಎಂದು ಧೈರ್ಯ ಹೇಳಿದ್ದರು.
ಚಿನ್ನಯ್ಯ ನ್ಯಾಯಾಲಯಕ್ಕೆ ಹಾಜರಾಗುವುದಕ್ಕೂ ಮೊದಲು ಒಕ್ಕಲಿಗ ಮಹಾ ಸಂಸ್ಥಾನದ ಸ್ವಾಮೀಜಿಗಳನ್ನು ಭೇಟಿಯಾಗಿ ನ್ಯಾಯಾಧೀಶರ ಮುಂದೆ ಧರ್ಮಸ್ಥಳ ಪ್ರಕರಣದ ಬಗ್ಗೆ ಮಹತ್ವದ ಹೇಳಿಕೆಗಳನ್ನು ನೀಡಿರುವ ವಿಚಾರ ಎಸ್ ಐ ಟಿ ತನಿಖೆ ಪ್ರಮುಖ ಘಟ್ಟದಲ್ಲಿರುವ
ಸಂದರ್ಭದಲ್ಲಿ ಪ್ರಾಮುಖ್ಯತೆ ಪಡೆದುಕೊಳ್ಳುತ್ತಿದ್ದು ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ನಾನಾ ಚರ್ಚೆಗಳಿಗೆ ಕಾರಣವಾಗುತ್ತಿದೆ.

















Post Comment