ಕಜೆಕ್ಕಾರು; ಅಂಬೇಡ್ಕರ್ ಯುವ ಸಂಘಟನೆ ವತಿಯಿಂದ 135ನೇ ಅಂಬೇಡ್ಕರ್ ಜಯಂತಿ ಆಚರಣೆ
ಉಪ್ಪಿನಂಗಡಿ : ಅಂಬೇಡ್ಕರ್ ಯುವ ಸಂಘಟನೆ ಕಜೆಕ್ಕಾರು ಇದರ ವತಿಯಿಂದ ಸಂವಿಧಾನ ಶಿಲ್ಪಿ ಭಾರತರತ್ನ ಡಾ.ಬಿ.ಆರ್ ಅಂಬೇಡ್ಕರ್ ರವರ 135ನೇ ಜಯಂತಿಯನ್ನು ಕಜೆಕ್ಕಾರು ಅಂಬೇಡ್ಕರ್ ಭವನದಲ್ಲಿ ಆಚರಿಸಲಾಯಿತು.
ಅಂಬೇಡ್ಕರ್ ಯುವ ಸಂಘಟನೆ ಕಜೆಕ್ಕಾರು ಇದರ ಅಧ್ಯಕ್ಷ ರವಿ ಕೆ ಅವರು ಸಮಾರಂಭದ ಅಧ್ಯಕ್ಷತೆವಹಿಸಿ ಮಾತನಾಡಿ ಶುಭ ಹಾರೈಸಿದರು.
ಹಿರಿಯ ದಲಿತ ಮುಖಂಡ, ಜಿಲ್ಲಾ ಪಂಚಾಯತ್ ಮಾಜಿ ಅಧ್ಯಕ್ಷ ಸೋಮನಾಥ ಅವರು ಸಮಾರಂಭವನ್ನು ಉದ್ಘಾಟಿಸಿ ಮಾತನಾಡುತ್ತಾ ಸಂವಿಧಾನ ಶಿಲ್ಪಿ ಅಂಬೇಡ್ಕರ್ ಅವರು
ಬದುಕಿನುದ್ದಕ್ಕೂ ಶೋಷಿತ ಸಮುದಾಯಗಳ ವಿಮೋಚನೆಗಾಗಿ ಸಾಮಾಜಿಕ ನ್ಯಾಯಕ್ಕಾಗಿ ಹಕ್ಕಿಗಾಗಿ ಹೋರಾಡಿ ಸ್ವಾಭಿಮಾನವನ್ನು ತುಂಬಿದರು. ದಲಿತರು ತಮ್ಮ ಸಾಮಾಜಿಕ, ರಾಜಕೀಯ ಹಕ್ಕುಗಳನ್ನು ಪಡೆದುಕೊಳ್ಳಲು ಬಾಬಾ ಸಾಹೇಬರ ತೋರಿಸಿದ ದಾರಿಯಲ್ಲಿ ನಡೆಯುವ ಮೂಲಕ ಅವರು ಕಂಡ ಕನಸುಗಳನ್ನು ನನಸಾಗಿಸಬೇಕು ಎಂದರು.
ಮುಖ್ಯ ಅತಿಥಿಯಾಗಿ ಸಮಾರಂಭವನ್ನು ಉದ್ದೇಶಿಸಿ ಮಾತನಾಡಿದ
ಪತ್ರಕರ್ತ ಅಚುಶ್ರೀ ಬಾಂಗೇರು ಬಾಬಾ ಸಾಹೇಬ್ ಅಂಬೇಡ್ಕರ್ ರವರು ಜಗತ್ತೇ ಕೊಂಡಾಡುವ ಶ್ರೇಷ್ಠ ರಾಷ್ಟ್ರ ನಾಯಕ, ಅವರು ಕೊಟ್ಟ ನಮ್ಮ ದೇಶದ ಹೆಮ್ಮೆಯ ಸಂವಿಧಾನ ಎಷ್ಟು ಶ್ರೇಷ್ಠವಾದುದೆಂದರೆ
ಬರಾಕ್ ಒಬಾಮ ಅವರು ಭಾರತಕ್ಕೆ ಬಂದಾಗ ಈ ದೇಶದಿಂದ ಏನಾದರು ಒಯ್ಯುವುದಾದರೆ ಅಂಬೇಡ್ಕರ್ ರಚಿಸಿದ ಭಾರತದ ಸಂವಿಧಾನವನ್ನು ಒಯ್ಯುತ್ತೇನೆ ಎಂದು ಹೇಳಿದ್ದಾರೆ ಇದು ನಮ್ಮ ಸಂವಿಧಾನದ ತಾಕತ್ತು ಎಂದು ಪ್ರತಿಪಾದಿಸಿದರು.
ಅಂಬೇಡ್ಕರ್ ಚೌಡರ್ ಕರೆಯ ನೀರನ್ನು ಕುಡಿದು ತೋರಿಸುವ ಮೂಲಕ ಸಾರ್ವಜನಿಕ ಕರೆಯ ನೀರು ಕುಡಿಯಲು ನಮಗೂ ಹಕ್ಕಿದೆ ಎಂಬ ಸಂದೇಶವನ್ನು ಸಾರುವುದಕ್ಕಾಗಿ ಎಂದು ಅಂಬೇಡ್ಕರ್ ಹೋರಾಟಗಳ ಬಗ್ಗೆ ತಿಳಿಸಿದರು.
ಅಂಬೇಡ್ಕರ್ ಜಯಂತಿ ಪ್ರಯುಕ್ತ ಏರ್ಪಡಿಸಲಾಗಿದ್ದ ವಿವಿಧ ಸ್ಪರ್ಧಾ ವಿಜೇತರಿಗೆ ಬಹುಮಾನ ವಿತರಿಸಲಾಯಿತು.
ಬಳಿಕ ಸಾಂಸ್ಕೃತಿಕ ವೈವಿಧ್ಯಗಳು ನೆರವೇರಿದವು.
ಈ ಸಂದರ್ಭ ಅಂಬೇಡ್ಕರ್ ಯುವ ಸಂಘಟನೆಯ ಮಾಜಿ ಅಧ್ಯಕ್ಷರಾದ ಶೀನಪ್ಪ ಕಜೆಕ್ಕಾರು ಅವರನ್ನು ಸಂಘಟನೆಯ ವತಿಯಿಂದ ಸನ್ಮಾನಿಸಲಾಯಿತು. ವೇದಿಕೆಯಲ್ಲಿ ಅಂಬೇಡ್ಕರ್ ಯುವ ಸಂಘಟನೆಯ ಗೌರವಾಧ್ಯಕ್ಷ
ಬಿ. ಶೀನಾ ನೆಡ್ಚಿಲ್ , ಉಪಾಧ್ಯಕ್ಷ ಶೇಖರ್ ಮಠ, ರವಿ ರಾಮನಗರ ಉಪಸ್ಥಿತರಿದ್ದರು.
ಕೃಷ್ಣಪ್ಪ ಕಾರ್ಯಕ್ರಮ ನಿರೂಪಿಸಿದರು. ಕು.ಚೈತನ್ಯ ಕೆ ಸ್ವಾಗತಿಸಿ ಅಂಕಿತಾ, ಚೈತನ್ಯ, ಚೇತನಾ ಪ್ರಾರ್ಥಿಸಿದರು. ಕು.ಅಂಕಿತಾ ಕೆ. ವಂದಿಸಿದರು. ಸಂಘಟನೆ ಪದಾಧಿಕಾರಿಗಳು , ಸದಸ್ಯರು, ಕಜೆಕ್ಕಾರು ಸುತ್ತಮುತ್ತಲಿನ ನಿವಾಸಿಗಳು ಪಾಲ್ಗೊಂಡರು.













Post Comment