ಬಂದಾರು; ಮೊಬೈಲ್ ಟವರ್ ಬುಡದಲ್ಲೇ ರೆಡ್ ಹ್ಯಾಂಡ್ ಸಿಕ್ಕಿ ಬಿದ್ದ ಡೀಸೆಲ್ ಕಳ್ಳರು !

ಬೆಳ್ತಂಗಡಿ : ಕೆಲವು ಸಮಯಗಳಿಂದ ವಿವಿಧೆಡೆಗಳಲ್ಲಿ ಸರಣಿಯಾಗಿ ನಿರಂತರವಾಗಿ ಇಂಡಸ್ ಎಂಬ ಖಾಸಗಿ ಮೊಬೈಲ್ ಟವರ್ ಗಳ ಡೀಸೆಲ್ ಕಳವು ಮಾಡುತ್ತಿದ್ದ ಮೂರು ಮಂದಿ ಖದೀಮರನ್ನು ಕಂಪೆನಿಯ ಫೀಲ್ಡ್ ಇಂಜಿನಿಯರ್ ಧೀಕ್ಷಿತ್ ಮತ್ತು ಸೆಕ್ಯುರಿಟಿ ಸೂಪರ್ ವೈಸರ್ ದಿನೇಶ್ ಕೆ ಅವರನ್ನೊಳಗೊಂಡ ಯುವಕರ ತಂಡ ರಾತ್ರಿ 10 ಗಂಟೆಯಿಂದ ಬೆಳಿಗ್ಗೆ 4ಗಂಟೆಯವರೆಗೆ ವಾರಗಟ್ಟಲೆ ನಿದ್ದೆಗೆಟ್ಟು ಕಾದು ಕುಳಿತು ರೆಡ್ ಹ್ಯಾಂಡಾಗಿ ಹಿಡಿದು ಪೊಲೀಸರಿಗೊಪ್ಪಿಸಿದ ಸ್ವಾರಸ್ಯಕರ ಘಟನೆ ಬಂದಾರು ಗ್ರಾಮದ ಮೈರೋಳ್ತಡ್ಕದಲ್ಲಿ ಭಾನುವಾರ ಮಧ್ಯರಾತ್ರಿ ನಡೆದಿದೆ.
ಬೆಳ್ತಂಗಡಿ ತಾಲೂಕು ಬಂದಾರು ಗ್ರಾಮದ ಮೈರೋಳ್ತಡ್ಕದಲ್ಲಿರುವ ಇಂಡಸ್ ಮೊಬೈಲ್ ಟವರ್ ಬಳಿ
ಮಧ್ಯರಾತ್ರಿ ಸುಮಾರು ಒಂದೂವರೆ ಗಂಟೆ ಹೊತ್ತಿಗೆ ಬಂದು ಡೀಸೆಲ್ ಕಳವು ಮಾಡುತ್ತಿದ್ದ ಇಬ್ಬರು ಮಂದಿ ಕಳ್ಳರು ಯುವಕರ ಕೈಗೆ ರೆಡ್ ಹ್ಯಾಂಡಾಗಿ ಸಿಕ್ಕಿಬಿದ್ದಿದ್ದಾರೆ.
ಡೀಸೆಲ್ ಕಳವಿಗೆ ಯತ್ನಿಸುತ್ತಿದ್ದ ವೇಳೆ ಪುತ್ತೂರು ತಾಲೂಕಿನ ಬೆಳ್ಳಿಪಾಡಿ ಗ್ರಾಮದ ನೂತನ್, ದೀಕ್ಷನ್, ವಿಖ್ಯಾತ್ ಎಂಬವರು ಯುವಕರ ಕೈಗೆ ಸಿಕ್ಕಿ ಬಿದ್ದಿದ್ದಾರೆ.

ಬೆಳ್ತಂಗಡಿ ಮತ್ತು ಪುತ್ತೂರು ತಾಲೂಕಿನ ಸುಮಾರು 30 ಟವರ್ ಗಳಿಂದ ಖದೀಮರ ತಂಡ ಸರಣಿಯಾಗಿ ನಿರಂತರವಾಗಿ ಡೀಸೆಲ್ ಕಳವು ಮಾಡುತ್ತಿತ್ತೆಂದು ಶಂಕಿಸಲಾಗಿದೆ.
ಬೆಳ್ತಂಗಡಿ ತಾಲೂಕಿನ ಬಂದಾರು ಬಂದಾರು ಗ್ರಾಮದ ಮೈರೋಳ್ತಡ್ಕದಲ್ಲಿರುವ ಮೊಬೈಲ್ ಟವರ್ ನಿಂದ ಈ ಹಿಂದೆಯೂ ಹಲವು ಭಾರಿ ಡೀಸೆಲ್ ಕಳವುಗೈದಿದ್ದು ಟವರ್ ಜನರೇಟರ್ ಗೆ ಪದೇ ಪದೇ ಡೀಸೆಲ್ ತುಂಬಿಸಿದರೂ ಮತ್ತೆ ಮತ್ತೆ ಡೀಸೆಲ್ ಖಾಲಿಯಾಗುತ್ತಿತ್ತು. ಮೈರೋಳ್ತಡ್ಕ ಟವರ್ ನಿಂದ ಒಂದು ತಿಂಗಳಲ್ಲಿ ಸುಮಾರು 320 ಲೀಟರ್ ಡೀಸೆಲ್ ಸರಣಿಯಾಗಿ ಕಳವಾಗಿತ್ತು.
ಈ ಬಗ್ಗೆ ಎಚ್ಚೆತ್ತುಕೊಂಡ ಟವರ್ ನ ಫೀಲ್ಡ್ ಇಂಜಿನಿಯರ್ ದೀಕ್ಷಿತ್ ನಾಯ್ಮಾರ್ , ಸೆಕ್ಯುರಿಟಿ ಸೂಪರ್ ವೈಸರ್ ದಿನೇಶ್ ಕೆ ಮತ್ತು ಮುಗೇರಡ್ಕ ಪರಿಸರದ ಸ್ನೇಹಿತರು ಸೇರಿಕೊಂಡು ಚರ್ಚಿಸಿ ಕೊನೆಗೆ ‘ಆದದ್ದಾಗಲಿ ಕಳ್ಳರನ್ನು
ಒಂದು ಕೈ ನೋಡೇ ಬಿಡೋಣ’ ಎಂದು ನಿರ್ಧರಿಸಿ
‘ಆಪರೇಷನ್’ ರೂಪಿಸಿ ಕಾರ್ಯಪ್ರವೃತ್ತರಾದರು. ಫೀಲ್ಡ್ ಇಂಜಿನಿಯರ್ ಧೀಕ್ಷಿತ್ ಮತ್ತು ಸೆಕ್ಯುರಿಟಿ ಸೂಪರ್ ವೈಸರ್ ದಿನೇಶ್ ಕೆ ನೇತೃತ್ವದಲ್ಲಿ ಯುವಕರ ತಂಡ ಮಾಡಿಕೊಂಡು
ಮುಹೂರ್ತವಿಟ್ಟೇ ಬಿಟ್ಟರು. ಡೀಸೆಲ್ ಕಳ್ಳರನ್ನು ಪತ್ತೆ ಹಚ್ಚಲೇ ಬೇಕೆಂದು ಪಣ ತೊಟ್ಟು ಒಂದು ವಾರದಿಂದ ನಿದ್ದೆಗೆಟ್ಟು ಟವರ್ ಬಳಿ ಕಾದು ಕುಳಿತಿದ್ದ ಯುವಕರ ಕೈಗೆ ನಿರೀಕ್ಷೆಯಂತೆ 7ನೇ ದಿನದಂದು ರಾತ್ರಿ ಸುಮಾರು 1 ಗಂಟೆ ಸಮಯಕ್ಕೆ ಡೀಸೆಲ್ ಕಳವು ಮಾಡಿ KA20 D 7442 ನಂಬ್ರದ ಕಾರಿನಲ್ಲಿ ತುಂಬಿಸುತ್ತಿದ್ದ ಇಬ್ಬರು ಯುವಕರು ಸಿಕ್ಕಿ ಬಿದ್ದಿದ್ದಾರೆ.

ಸಿಕ್ಕಿ ಬಿದ್ದ ಯುವಕರ ಜೊತೆ ವಿವಿಧೆಡೆ ಕೃತ್ಯಗಳಲ್ಲಿ ಭಾಗಿಯಾಗಿದ್ದ ಇನ್ನೊಬ್ಬ ಯುವಕನನ್ನು ಸಿಕ್ಕಿ ಬಿದ್ದ ಯುವಕರಿಂದಲೇ ಉಪಾಯದಿಂದ ಕರೆ ಮಾಡಿಸಿ, ಸ್ಥಳಕ್ಕೆ ಬರಮಾಡಿಕೊಂಡು ಪೊಲೀಸರಿಗೊಪ್ಪಿಸಲಾಯಿತು.
ಪುತ್ತೂರು ತಾಲೂಕಿನ ಬೆಳ್ಳಿಪಾಡಿ ಗ್ರಾಮದ ನೂತನ್, ಧೀಕ್ಷಣ್ ವಿಖ್ಯಾತ್ ಎಂಬ ಯುವ ಖದೀಮರ ತಂಡವು
ಕೆಲವು ಸಮಯಗಳಿಂದ ಡೀಸೆಲ್ ಕಳವು ಜಾಲದಲ್ಲಿ ಭಾಗಿಯಾಗಿರಬಹುದೆಂದು ಶಂಕಿಸಲಾಗಿದೆ.
ಇನ್ನೊಂದೆಡೆ ಕುವೆಟ್ಟು – ಶಕ್ತಿನಗರ, ಗೇರುಕಟ್ಟೆ, ಬಿಳಿಯೂರು, ಪೆರ್ನೆ, ನೆಕ್ಕಿಲಾಡಿ, ಮಠ, ಕಾಂಚನ ಬಜತ್ತೂರು, ಉಪ್ಪಿನಂಗಡಿ, ನೆಕ್ಕರೆ, ಕೋಡಿಂಬಾಡಿ, ಅಂಬೆಲ ಮುಂತಾದ ಮೊಬೈಲ್ ಟವರ್ ಗಳಿಂದ ಡೀಸೆಲ್ ಕಳವಾಗಿದ್ದು ಇದೀಗ ಬಲವಾದ ಸಂಶಯಕ್ಕೆ ಕಾರಣವಾಗುತ್ತಿದೆ.
ಪ್ರಕರಣದ ಬಗ್ಗೆ ಸೆಕ್ಯುರಿಟಿ ಸೂಪರ್ ವೈಸರ್ ದಿನೇಶ್ ಕೆ ಎಂಬವರ ದೂರಿನ ಮೇರೆಗೆ ಅ.ಕ್ರ.62/2026, ಕಲಂ 303(2) BNS-2023ರಂತೆ ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಕಳವಾದ ಡೀಸೆಲ್ ನ ಮೌಲ್ಯ ₹ 6,000 ಎಂದು ಅಂದಾಜಿಸಲಾಗಿದೆ.
ಘಟನಾ ಸ್ಥಳಕ್ಕೆ ಬಂದ ಧರ್ಮಸ್ಥಳ ಪೊಲೀಸರು ಕೃತ್ಯದಲ್ಲಿ ಸಿಕ್ಕಿಬಿದ್ದ ಯುವಕರನ್ನು ವಶಕ್ಕೆ ಪಡೆದುಕೊಂಡು ಸ್ಥಳ ಪರಿಶೀಲನೆ ನಡೆಸಿದ್ದು ಮುಂದಿನ ತನಿಖೆ ನಡೆಸುತ್ತಿದ್ದಾರೆ.














Post Comment