ಪದ್ಮುಂಜ; ‘ಉತ್ತಮ ಶಾಸಕ ಪ್ರಶಸ್ತಿ’ ಪುರಸ್ಕೃತ ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾರಿಗೆ ಗೌರವಾಭಿನಂದನಾ ಕಾರ್ಯಕ್ರಮ

40ಕ್ಕೂ ಹೆಚ್ಚು ಸಂಘ-ಸಂಸ್ಥೆಗಳಿಂದ ಹಾರಾರ್ಪಣಾ ಸನ್ಮಾನ !

ಕಣಿಯೂರು : ಬಂದಾರು, ಮೊಗ್ರು, ಗ್ರಾಮಗಳ ಹರೀಶ್ ಪೂಂಜ ಅಭಿನಂದನಾ ಸಮಿತಿ ವತಿಯಿಂದ ಪ್ರತಿಷ್ಠಿತ ‘ಕರ್ನಾಟಕ ಟಿವಿ’ ಕೊಡಮಾಡುವ ಕರಾವಳಿ ಹಾಗೂ ಮಧ್ಯ ಕರ್ನಾಟಕ ವಿಭಾಗದಲ್ಲಿ “ಉತ್ತಮ ಶಾಸಕ ಪ್ರಶಸ್ತಿ ಪುರಸ್ಕೃತರಾದ ಶಾಸಕ ಹರೀಶ್ ಪೂಂಜಾ ಅವರಿಗೆ
ಸುತ್ತಮುತ್ತಲಿನ ಗ್ರಾಮಗಳ 40ಕ್ಕೂ ಹೆಚ್ಚು ಸಂಘ-ಸಂಸ್ಥೆಗಳಿಂದ ಗೌರವಾಭಿನಂದನೆ ಕಾರ್ಯಕ್ರಮವು ಕಣಿಯೂರು ಪದ್ಮುಂಜ ಕೃಷಿಪತ್ತಿನ ಸಹಕಾರಿ ಸಂಘದ
‘ರೈತ ಸಭಾಭವನ’ದಲ್ಲಿ ಆಗಸ್ಟ್ 23ನೇ ಭಾನುವಾರ ನಡೆಯಿತು.
ಈ ಸಂದರ್ಭ ಸನ್ಮಾನ ಸ್ವೀಕರಿಸಿ ಮಾತನಾಡಿದ ಶಾಸಕ ಹರೀಶ್ ಪೂಂಜಾ ಅವರು, ನನಗೆ ನೀವು ಮಾಡಿದ ಪ್ರೀತಿಯ ಸನ್ಮಾನವನ್ನು ಅತ್ಯಂತ ಪ್ರೀತಿ ಪೂರ್ವಕವಾಗಿ ಸ್ವೀಕರಿಸಿದ್ದೇನೆ. ಆದರೆ, ಈ ಸನ್ಮಾನ ನನಗಲ್ಲ, ಇದು ಬಂದಾರು, ಮೊಗ್ರು, ಕಣಿಯೂರು ಗ್ರಾಮಗಳ ಗ್ರಾಮಸ್ಥರಿಗೆ ಅರ್ಪಿತವಾಗಿದೆ.
ನಾನು ನಿಮ್ಮೆಲ್ಲರ ಆಶೀರ್ವಾದದಿಂದ ಶಾಸಕನಾದ ಬಳಿಕ ತಾಲೂಕಿನ ಸರ್ವತೋಮುಖ ಅಭಿವೃದ್ಧಿಗಾಗಿ ಶ್ರಮಿಸಿದ್ದೇನೆ. ನಾನು ಶಾಸಕನಾಗುವ ಸಂದರ್ಭ ತಾಲೂಕಿನಲ್ಲಿ 100 ವೆಂಟೆಡ್ ಡ್ಯಾಂಗಳನ್ನು ನಿರ್ಮಿಸುವ ಕನಸಿತ್ತು, ಇಂದು ಸುಮಾರು 84 ವೆಂಟೆಡ್ ಡ್ಯಾಂ’ಗಳ ನಿರ್ಮಾಣವಾಗಿದೆ ಎಲ್ಲೆಲ್ಲಿ ವೆಂಟೆಡ್ ಡ್ಯಾಮ್ ಗಳು ನಿರ್ಮಾಣ ಆಗಿದೆಯೋ ಆ ಭಾಗದಲ್ಲೆಲ್ಲಾ ಅಂತರ್ಜಲ ವೃದ್ಧಿಯಾಗುತ್ತಿದೆ ಎಂದರು.
ಸದ್ಯ, ರಾಜ್ಯ ಸರ್ಕಾರದಿಂದ ಸಾಕಷ್ಟು ಅನುದಾನಗಳು ಬರ್ತಾ ಇಲ್ಲ. ಆದರೂ, ನಾನು ನನ್ನ ತಾಲೂಕಿನ ಜನರಿಗಾಗಿ ಶ್ರಮಿಸುತ್ತಿದ್ದೇನೆ. ಮುಂದಿನ ದಿನಗಳಲ್ಲೂ ತಾಲೂಕಿನ ಅಭಿವೃದ್ಧಿಗಾಗಿ ಶ್ರಮಿಸುತ್ತೇನೆ ಎಂದು ಹೇಳಿದರು.
ಕಡಮ್ಮಾಜೆ ಫಾರ್ಮ್ ಮಾಲಕ, ಪ್ರಶಸ್ತಿ ವಿಜೇತ ಪ್ರಗತಿಪರ ಕೃಷಿಕ ದೇವಿಪ್ರಸಾದ್ ಕಡಮ್ಮಾಜೆ ಅವರು ಅಭಿನಂದನಾ ಭಾಷಣ ಮಾಡುತ್ತಾ, ನವ ಬೆಳ್ತಂಗಡಿ ನಿರ್ಮಾಣದ ಶಿಲ್ಪಿ ನಮ್ಮ ಶಾಸಕರಾದ ಹರೀಶ್ ಪೂಂಜರವರು, ಇಡೀ ದೇಶವೇ ಇಂದು ಬೆಳ್ತಂಗಡಿಯತ್ತ ತಿರುಗಿ ನೋಡುವಂತೆ ಮಾಡಿದ್ದು, ನಮ್ಮ ಹೆಮ್ಮೆಯ ಶಾಸಕ ಹರೀಶ್ ಪೂಂಜಾರವರು.
ಕಳೆದ 10-15 ವರ್ಷಗಳ ಹಿಂದೆ ಬೆಳ್ತಂಗಡಿ ತಾಲೂಕು ಹೇಗಿತ್ತು, ಹರೀಶ್ ಪೂಂಜರವರು ಶಾಸಕರಾದ ಮೇಲೆ ಹೇಗಿದೆ ಒಂದು ಕ್ಷಣ ಯೋಚಿಸಿ ಎನ್ನುತ್ತಾ ಮುಗೇರಡ್ಕ,
ಮೈಪಾಲಸೇತುವೆ ಅಣೆಕಟ್ಟು ಸೇರಿದಂತೆ ತಾಲೂಕಿನ ಪ್ರಮುಖ ರಸ್ತೆಗಳು, ಬೆಳ್ತಂಗಡಿ ಪ್ರವಾಸಿ ಮಂದಿರ, ನಿರ್ಮಾಣ ಹಂತದ ಬಸ್ ನಿಲ್ದಾಣ ಸೇರಿದಂತೆ ವಿವಿಧ ಅಭಿವೃದ್ಧಿ ಕಾರ್ಯಗಳನ್ನು ವಿವರಿಸಿದರು. ಶಾಸಕ ಹರೀಶ್ ಪೂಂಜ ಅವರ ನೇತೃತ್ವದಲ್ಲಿ ಯಶಸ್ವಿಯಾಗಿ ಜರಗಿದ ಬ್ರಹ್ಮಕಲಶೋತ್ಸವ, ಕೊರೊನಾ ಸಂದರ್ಭದ ಕಿಟ್ ವಿತರಣೆ, ಪ್ರವಾಹ ಸಂದರ್ಭದಲ್ಲಿ ಶಾಸಕರು ನೊಂದವರಿಗೆ ಕೈಗೊಂಡ ಸ್ಪಂದನಾ ಕಾರ್ಯ ಮುಂತಾದ
ಕಾರ್ಯಕ್ರಮಗಳೂ ಸೇರಿದಂತೆ ತಾಲೂಕಿನ
ಸರ್ವತೋಮುಖ ಅಭಿವೃದ್ಧಿ ಕಾರ್ಯಗಳನ್ನು ವಿವರಿಸಿದರು. ಗೌರವಾಭಿನಂದನೆ ಕಾರ್ಯಕ್ರಮದ ಅಧ್ಯಕ್ಷತೆಯನ್ನು ರೈತಬಂಧು ಆಹಾರೋದ್ಯಮ ಮಾರುತಿಪುರದ ಶಿವಶಂಕರ್ ನಾಯಕ್ ವಹಿಸಿದ್ದರು.


ಮುಖ್ಯ ಅತಿಥಿಗಳಾಗಿ ಮುಗೇರಡ್ಕ ದೈವಸ್ಥಾನದ ಆಡಳಿತ ಮೊಕ್ತೇಸರ ಮನೋಹರ ಗೌಡ, ಚಂದ್ರಹಾಸ ಗೌಡ ದೇವಸ್ಯಗುತ್ತು, ಮಾವಿನಕಟ್ಟೆ ಧರ್ಮಗುರುಗಳಾದ ಫಾ. ಕಾಶ್ಮೀರ್ ಡಿ ಸೋಜಾ, ಸುದರ್ಶನ ಹೆಗ್ಡೆ ಕಣಿಯೂರುಗುತ್ತು, ಪದ್ಮನಾಭ ಶಿಲ್ಪಿ ಪಿಲಿಗೂಡು, ಚಿದಾನಂದ ರಾವ್ ಕೊಲ್ಲಾಜೆ, ಬಾಬು ನಾಯ್ಕ ಮೈಪಾಜೆ, ಕೇಶವ ಸಾಲ್ಯಾನ್ ಅಡೆಂಜ, ಪತ್ರಕರ್ತ ಅಚುಶ್ರೀ ಬಾಂಗೇರು, ಜನಾರ್ದನ ಪೂಜಾರಿ ಕಡ್ತಿಲ, ಮುಂಡೂರು ಚಾಮುಂಡಿ ಕ್ಷೇತ್ರದ ಧರ್ಮದರ್ಶಿ ಆನಂದ ಗೌಡ, ಧರ್ಣಪ್ಪ ಗೌಡ ಬಾನಡ್ಕ, ಧರ್ಣಪ್ಪ ಗೌಡ ಕೋಡಿಯೇಲು, ಸಿ.ಎ.ಬ್ಯಾಂಕ್ ಮ್ಯಾನೇಜರ್ ತಿಮ್ಮಯ್ಯ ಗೌಡ ಮತ್ತಿತರರು ಉಪಸ್ಥಿತರಿದ್ದರು.

ಸಿ.ಎ.ಬ್ಯಾಂಕ್ ಅಧ್ಯಕ್ಷ ರಕ್ಷಿತ್ ಪಣೆಕ್ಕರ, ಹಾಗೂ ನಿರ್ದೇಶಕರುಗಳು, ಕು. ಪೂರ್ವಿಕ ವಂದೇಮಾತರಂ ಗೀತೆ ಹಾಡಿದರು. ತಾ.ಪಂ. ಮಾಜಿ ಸದಸ್ಯ ಮಹಾಬಲ ಗೌಡ ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರು.
ಮುಖ್ಯ ಶಿಕ್ಷಕ ಮಾಧವ ಗೌಡ ನಿರೂಪಣೆಗೈದು ಕೊನೆಯಲ್ಲಿ ವಂದಿಸಿದರು. ಕಾರ್ಯಕ್ರಮದಲ್ಲಿ ಕಣಿಯೂರು, ಬಂದಾರು ಮೊಗ್ರು ಸೇರಿದಂತೆ ಸಾರ್ವಜನಿಕರು ಉಪಸ್ಥಿತರಿದ್ದರು. ಪ್ರಶಸ್ತಿ ಪುರಸ್ಕೃತ ಶಾಸಕ ಹರೀಶ್ ಪೂಂಜ ಅವರನ್ನು 40ಕ್ಕೂ ಹೆಚ್ಚು ಸಂಘ ಸಂಸ್ಥೆಗಳ ಪ್ರತಿನಿಧಿಗಳು ಹಾರಾರ್ಪಣೆಗೈದು ಅಭಿನಂದಿಸಿದರು.
















Post Comment