ಗುರುವಾಯನಕೆರೆ ಮಾನಸಿಕ ಅಸ್ವಸ್ಥೆ ಸಾಮೂಹಿಕ ಅತ್ಯಾಚಾರ:
ಬೆಳ್ತಂಗಡಿ : ಹೆತ್ತ ತಾಯಿಯನ್ನು ಕಳೆದುಕೊಂಡು ತಬ್ಬಲಿಯಾಗಿರುವ ಮಾನಸಿಕ ಅಸ್ವಸ್ಥ ಯುವತಿಯ ಮೇಲೆ ವಿಕೃತ ಕಾಮುಕರ ಗುಂಪೊಂದು ಸಾಮೂಹಿಕ ಅತ್ಯಾಚಾರವೆಸಗಿರುವ ಹೇಯ ಕೃತ್ಯವೊಂದು ಗುರುವಾಯನಕೆರೆಯ ಕುವೆಟ್ಟು ಗ್ರಾಮದ ಪಿಲಿಚಂಡಿಕಲ್ಲು ಬಳಿ ನಡೆದಿದೆ.
ಗುರುವಾಯನಕೆರೆಯ ಕುವೆಟ್ಟು ಗ್ರಾಮದ ಪಿಲಿಚಂಡಿಕಲ್ಲು ಬಳಿ ವಿಕೃತ ಕಾಮುಕರಿಂದ ನಿರಂತರ ಸಾಮೂಹಿಕ ಅತ್ಯಾಚಾರಕ್ಕೊಳಗಾಗುತ್ತಿದ್ದ ಮಾನಸಿಕ ಅಸ್ವಸ್ಥೆ ಇದೀಗ ಆರು ತಿಂಗಳ ಗರ್ಭಿಣಿ ಎನ್ನಲಾಗುತ್ತಿದೆ.ಆದರೆ ಈಕೆಯ ಮಾನಸಿಕ ದೌರ್ಬಲ್ಯವನ್ನು ದುರ್ಬಳಕೆ ಮಾಡಿಕೊಂಡ ಮೂಡುಬಿದಿರೆ ಸಮೀಪದ ನಾಲ್ಕೈದು ಮಂದಿ ಕಿರಾತಕರು ಈಕೆಯ ಮೇಲೆ ನಿರಂತರ ಅತ್ಯಾಚಾರವೆಸಗುತ್ತಿದ್ದರು ಎನ್ನಲಾಗಿದೆ.
ತಾಯಿಯನ್ನು ಕಳೆದುಕೊಂಡ ಮಾನಸಿಕ ಅಸ್ವಸ್ಥೆ ತನ್ನ ಮಾನಸಿಕ ಅಸ್ವಸ್ಥ ಸಹೋದರನೊಂದಿಗೆ ಮನೆಯಲ್ಲಿ ವಾಸ್ತವ್ಯವಿದ್ದು; ಸಂಸಾರದ ಬಂಡಿ ಸಾಗಿಸಲು ಹೊರಗೆ ಹೋಗುವಾಕೆ. ಆದರೆ ದಿನಬೆಳಗಾದರೆ ದುಡಿಯಲು ಮನೆಯಿಂದ ಹೊರಡುತ್ತಿದ್ದ ಈಕೆಯ ತಂದೆಗೆ ಹೋದ ಮೇಲೆ ರಾತ್ರಿಯವರೆಗೂ ಮನೆಯ ಕಡೆ ಗಮನವೇ ಇರುತ್ತಿರಲಿಲ್ಲ ಎನ್ನಲಾಗಿದೆ. ಇಡೀ ದಿನ ದುಡಿದು ಮಾನಸಿಕ ಅಸ್ವಸ್ಥ ಮಕ್ಕಳನ್ನು ಸಾಕಿ ಸಲಹಲು ಪರದಾಟವಾಗಿತ್ತು. ಇದೇ ಅವಕಾಶವನ್ನು ದುರ್ಬಳಕೆ ಮಾಡಿಕೊಂಡ ಮೂಡುಬಿದಿರೆ ಕಡೆಯ ದುಷ್ಟರ ತಂಡ ನಿರಾತಂಕವಾಗಿ ಸಂದರ್ಭ ಕಾದು ಅಮಾಯಕರ ಮನೆಗೆ ನುಗ್ಗಿ ಮಾನಸಿಕ ಅಸ್ವಸ್ಥ ಯುವತಿಯ ಮೇಲೆ ನಿರಂತರ ಅತ್ಯಾಚಾರ ನಡೆಸಿದ್ದರು ಎಂಬುದೀಗ ಸ್ಥಳೀಯವಾಗಿ ಚರ್ಚೆಗೆ ಕಾರಣವಾಗಿದೆ. ಇದೀಗ ಗ್ಯಾಂಗ್ ರೇಪ್ ಪ್ರಕರಣ ಬೆಳ್ತಂಗಡಿ ಪೊಲೀಸ್ ಠಾಣೆಯ ಮೆಟ್ಟಿಲೇರಿದ್ದು; ಕೆಲವು ಆರೋಪಿಗಳ ಹೆಡೆಮುರಿ ಕಟ್ಟಿರುವ ಪೊಲೀಸರು ಉಳಿದ ಆರೋಪಿಗಳಿಗೆ ಬಲೆ ಬೀಸಿದ್ದಾರೆ ಎಂದು ತಿಳಿದು ಬಂದಿದೆ. ಈ ಬಗ್ಗೆ ಇನ್ನು ಪ್ರಕರಣ ದಾಖಲಾಗಬೇಕಾಗಿದೆ.
Post Comment