ಬೆಳ್ತಂಗಡಿ ಶ್ರೀರಾಮ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿಯಲ್ಲಿ ತಿಮಿಂಗಿಲಗಳ ಹಗಲು ದರೋಡೆ : 40 ಕೋಟಿ ಹಗರಣದ ಹೆಗ್ಗಣಗಳ ವಿರುದ್ಧ ಬಿತ್ತು ಭರ್ತಿ ಕೇಸು!

ಬೆಳ್ತಂಗಡಿ : ಠೇವಣಿದಾರರ, ಗ್ರಾಹಕರ ಮತ್ತು ನಾಗರಿಕರ ಕುತೂಹಲಕ್ಕೂ ಆತಂಕಕ್ಕೂ ಕಾರಣವಾಗಿದ್ದ ಬೆಳ್ತಂಗಡಿಯ ಶ್ರೀ ರಾಮ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿ(ರಿ) ಯಲ್ಲಿ ಗ್ರಾಹಕರ ಸುಮಾರು 40 ಕೋಟಿ ರೂಪಾಯಿ ಠೇವಣಿ ಹಣವನ್ನು ವಾಪಸ್ ನೀಡದೆ ವಂಚನೆ ಮಾಡಿರುವ ಬೃಹತ್ ಹಗರಣವೊಂದು ಇದೀಗ ಬೆಳಕಿಗೆ ಬಂದಿದೆ.
ಪ್ರಕರಣಕ್ಕೆ ಸಂಬಂಧಿಸಿ 2021 ರಿಂದ 2024 ರವರೆಗೆ ಸೊಸೈಟಿಯ ಆಡಳಿತ ಮಂಡಳಿ ಮತ್ತು ಸಿಬ್ಬಂದಿಗಳನ್ನೊಳಗೊಂಡ 14 ಜನರ ಮೇಲೆ ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಎಫ್.ಐ.ಆರ್ ದಾಖಲಾಗಿದೆ.
ಬೆಳ್ತಂಗಡಿ ನಗರದ ಜ್ಯೂನಿಯರ್ ಕಾಲೇಜ್ ರಸ್ತೆಯಲ್ಲಿರುವ ರಾಮನಗರದ ವಿ.ಆರ್.ನಾಯಕ್ ಕಾಂಪೌಂಡ್ ನಲ್ಲಿ ಸುಮಾರು 25 ವರ್ಷಗಳಿಂದ ಏಕೈಕ ಬ್ರಾಂಚ್ ಆಗಿ ಕಾರ್ಯಾಚರಿಸುತ್ತಿರುವ
ಶ್ರೀ ರಾಮ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿ(ರಿ)ಯಲ್ಲಿ
ಆಡಳಿತ ಮಂಡಳಿಯವರು ಗ್ರಾಹಕರಿಗೆ ಸೇರಿದ ಠೇವಣಿ ಇಟ್ಟಿದ್ದ ಸುಮಾರು 40 ಕೋಟಿ ರೂಪಾಯಿ ಹಣ ವಾಪಸ್ ಗ್ರಾಹಕರಿಗೆ ನೀಡದೆ ವಂಚನೆ ಮಾಡಿದ್ದಾರೆ.
ಈ ಬಗ್ಗೆ ಕಳೆದ ವರ್ಷ ಗ್ರಾಹಕರು ಒಟ್ಟಾಗಿ ಸೇರಿ ದಾಖಲೆಗಳನ್ನು ತೆಗೆದು ಡಿಸಿ, ಎಸ್ಪಿ, ಸಹಕಾರ ಸಂಘ, ಗ್ರಾಹಕರ ವೇದಿಕೆ ಸೇರಿದಂತೆ ಎಲ್ಲಾ ಕಡೆ ದೂರು ನೀಡಿದ್ದರು. ಈ ಬಗ್ಗೆ ಡಿಸಿ ಕಚೇರಿಯಿಂದ ಎಸ್ಪಿಗೆ ದೂರು ನೀಡಲಾಗಿತ್ತು. ಈ ಬಗ್ಗೆ ಸ್ಥಳೀಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲು ಸೂಚಿಸಿದ್ದರು. ಅದರಂತೆ ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ವಂಚನೆಗೊಳಗಾದ ಬೆಳ್ತಂಗಡಿ ನಿವಾಸಿ ದಯಾನಂದ ನಾಯಕ್ ಸೇರಿ ಒಟ್ಟು 13 ಜನ ನೊಂದವರು ಮೇ.22 ರಂದು ಸೊಸೈಟಿಯ 14 ಜನರ ವಿರುದ್ಧ ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿರುವ ಹಿನ್ನೆಲೆಯಲ್ಲಿ ಮೇ.23 ರಂದು KARNATAKA PROTECTION OF INTEREST DEPOSITIONS EXORBITANT ACT 2004 (u/s -9) ಅಡಿಯಲ್ಲಿ ಪ್ರಕರಣ ದಾಖಲಾಗಿದೆ. ಮುಂದಿನ ತನಿಖೆಯನ್ನು ಕಾದು ನೋಡಬೇಕಾಗಿದೆ. =========================================



Post Comment