ಬೆಳಾಲು: ಬಾಣಂತಿಯ ಶವ ಕೆರೆಯಲ್ಲಿ ಪತ್ತೆ : ಸಾವಿನ ಸುತ್ತ ಸಂಶಯದ ಹುತ್ತ..!

ಬೆಳ್ತಂಗಡಿ : ಬಾಣಂತಿ ಯುವತಿಯೊಬ್ಬಳು ಕೆರೆಯಲ್ಲಿ ಸಂಶಯಾಸ್ಪದ ಶವವಾಗಿ ಪತ್ತೆಯಾಗಿರುವ ಘಟನೆ ಶುಕ್ರವಾರ ಬೆಳಾಲು ಗ್ರಾಮದಲ್ಲಿ ಬೆಳಕಿಗೆ ಬಂದಿದ್ದು ಪ್ರಕರಣದ ಸುತ್ತ ಹಲವು ಅನುಮಾನಗಳು ಹುಟ್ಟಿ ಕೊಳ್ಳುತ್ತಿದೆ.
ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಬೆಳಾಲು ಗ್ರಾಮದ ಕುಕ್ಕೊಟ್ಟು ನಿವಾಸಿ ನಾಗೇಶ್- ಭಾರತಿ ದಂಪತಿಗಳ ದ್ವಿತೀಯ ಪುತ್ರಿ ವೀಣಾ(19) ಎಂಬಾಕೆಯ ಶವ ಮನೆ ಸಮೀಪದ ತೋಟದ ಬಳಿಯ ಕೆರೆಯಲ್ಲಿ ಜುಲೈ 11 ರಂದು ಸಂಜೆ ಪತ್ತೆಯಾಗಿದೆ.
ಘಟನೆಯ ಬೆನ್ನಲ್ಲೇ ನಿಗೂಢ ಸಾವಿನ ಬಗ್ಗೆ ಸ್ಥಳೀಯವಾಗಿ ಹಲವು ರೀತಿಯ ಸಂಶಯ ವ್ಯಕ್ತವಾಗಿದೆ. ನಾಗೇಶ್ ಅವರು ಇಬ್ಬರು ಪತ್ನಿಯರಿದ್ದು ಮೊದಲ ಪತ್ನಿ ಭಾರತಿ.
ನಾಗೇಶ್ – ಭಾರತಿ ದಂಪತಿಗೆ ನಾಲ್ಕು ಜನ ಮಕ್ಕಳಲ್ಲಿ ವೀಣಾ ಎರಡನೇ ಪುತ್ರಿಯಾಗಿದ್ದು ಇದೀಗ ಈಕೆಯ ಶವ ಕೆರೆಯಲ್ಲಿ ಪತ್ತೆಯಾದ ಬಳಿಕ ಮನೆಯವರೇ ಹೇಳುವ ಪ್ರಕಾರ ಅವಳಿಗೆ ಮಾನಸಿಕ ಅಸ್ವಸ್ಥೆಯಾಗಿದ್ದು ಪುತ್ತೂರಿನ ಆಸ್ಪತ್ರೆಯ ವೈದ್ಯರಿಂದ ಚಿಕಿತ್ಸೆ ನೀಡಲಾಗುತ್ತಿದೆ.
ವೀಣಾಗೆ ಒಂದೂವರೆ ತಿಂಗಳ ಗಂಡು ಮಗು ಇದ್ದು ಅವಳ ಅನಾರೋಗ್ಯದ ಕಾರಣದಿಂದ ಮಗುವನ್ನು ಸುಬ್ರಹ್ಮಣ್ಯ ಸಂಬಂಧಿಗಳ ಮನೆಯಲ್ಲಿ ಬಿಟ್ಟಿದ್ದೇವೆ ಎಂದು ಹೇಳುತ್ತಿದ್ದು ಸಂಶಯಾಸ್ಪದವಾಗಿದೆ.
ಪುತ್ತೂರಿಗೆ ಮದ್ದಿಗಾಗಿ ಹೋಗಿದ್ದ ನಾಗೇಶ್ ಅವರಿಗೆ ಮನೆಯಲ್ಲಿದ್ದ ವೀಣಾ ಕಾಣೆಯಾಗಿರುವ ಬಗ್ಗೆ ಮನೆಯವರು ತಿಳಿಸಿದ್ದು ಹುಡುಕಾಟ ನಡೆಸಿದಾಗ ಮನೆ ಬಳಿಯ ಕೆರೆಯಲ್ಲಿ ಬಿದ್ದಿರುವುದು ತಿಳಿಯಿತು ಎಂದಿದ್ದಾರೆ.
ಈ ಹಿನ್ನೆಲೆಯಲ್ಲಿ ಧರ್ಮಸ್ಥಳ ಠಾಣೆಗೆ ಮಾಹಿತಿ ನೀಡಿದ್ದು ರಾತ್ರಿ ಅಗ್ನಿಶಾಮಕ ಮತ್ತು ಶೌರ್ಯ ವಿಪತ್ತು ತಂಡದವರು ಸೇರಿ ಮೃತದೇಹ ಹೊರತೆಗೆದಿರುವ ಬಗ್ಗೆ ಮಾಹಿತಿ ನೀಡಿದ್ದಾರೆ.
ಈ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದು ತನಿಖೆಯ ಬಳಿಕವಷ್ಟೇ ಸತ್ಯಾಸತ್ಯತೆ ಬೆಳಕಿಗೆ ಬರಲಿದೆ. ಘಟನಾ ಸ್ಥಳಕ್ಕೆ ಬೆಳ್ತಂಗಡಿ ತಹಶೀಲ್ದಾರ್ ಪೃಥ್ವಿ ಸಾನಿಕಂ, ಎಫ್ಎಸ್ಎಲ್ ವಿಭಾಗದ ಸೋಕೋ ಸಿಬ್ಬಂದಿ ಅರ್ಪಿತಾ , ಬೆಳ್ತಂಗಡಿ ಸರ್ಕಲ್ ಇನ್ಸ್ಪೆಕ್ಟರ್ ನಾಗೇಶ್ ಕದ್ರಿ, ಧರ್ಮಸ್ಥಳ ಪೊಲೀಸರು, ಅಗ್ನಿಶಾಮಕ ದಳದವರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ವೀಣಾ ಮೃತದೇಹವನ್ನು ಮಂಗಳೂರು ಕೆ.ಎಸ್.ಹೆಗ್ಡೆ ಆಸ್ಪತ್ರೆಗೆ ಶವಪರೀಕ್ಷೆಗಾಗಿ ಸಾಗಿಸಲಾಗಿದೆ.
Post Comment