ನಡ : ಮಲೆಯಡ್ಕ ಪರಿಸರ ಮಾಲಿನ್ಯ ವಿರುದ್ಧ ಸಾರ್ವಜನಿಕ ಹಿತಾಸಕ್ತಿ ಅರ್ಜಿ

ನಡ : ಮಲೆಯಡ್ಕ ಪರಿಸರ ಮಾಲಿನ್ಯ ವಿರುದ್ಧ ಸಾರ್ವಜನಿಕ ಹಿತಾಸಕ್ತಿ ಅರ್ಜಿ

Share

ಮುಗ್ರೋಡಿ ಕನ್ಸ್ಟ್ರಕ್ಷನ್ ಗೆ ಹೈಕೋರ್ಟ್ ನೋಟಿಸ್ ಆದೇಶ:

ಮಲೆಯಡ್ಕ ಕುಟುಂಬಗಳ ಕೂಗು

ಬೆಂಗಳೂರು : ಬೆಳ್ತಂಗಡಿ ತಾಲೂಕಿನ ನಡ ಗಾಮ, ಮಲೆಯಡ್ಕ ಸಮೀಪದಲ್ಲಿ ಪರಿಶಿಷ್ಟ ಜಾತಿ ಮತ್ತು ಪಂಗಡದ ಜನರ ಜನವಸತಿ ಬಳಿ ನಿಯಮಗಳನ್ನು ಗಾಳಿಗೆ ತೂರಿ ಕಾರ್ಯನಿರ್ವಹಿಸುತ್ತಿದೆ ಎನ್ನಲಾದ ಮುಗ್ರೋಡಿ ಕನ್ ಸ್ಟ್ರಕ್ಷನ್ ಹಾಟ್ ಮಿಕ್ಸ್ ಘಟಕಕ್ಕೆ ಕರ್ನಾಟಕ ರಾಜ್ಯ ಮಾನ್ಯ ಉಚ್ಚ ನ್ಯಾಯಾಲಯ ನೋಟೀಸ್ ಜಾರಿ ಮಾಡಿದೆ.

ಮಂಗಳೂರಿನ ಪ್ರತಿಷ್ಠಿತ ಮುಗ್ರೋಡಿ ಕನ್ ಸ್ಟ್ರಕ್ಷನ್ ಸಂಸ್ಥೆ 2008ರಿಂದ ನಾಡ್ಜೆ ಅರಣ್ಯ ವ್ಯಾಪ್ತಿಗೆ ಸಮೀಪವಿರುವಲ್ಲಿ ಉಜಿರೆ- ಪಡ್ವೆಟ್ಟು-ಸುರ್ಯ ರಸ್ತೆಯಲ್ಲಿ ಮಿಕ್ಸಿಂಗ್ ಘಟಕ ಕಾರ್ಯನಿರ್ವಹಿಸುತ್ತಿದ್ದು ಘಟಕದ ಕಲುಷಿತ ನೀರು, ಹೊಗೆ, ತ್ಯಾಜ್ಯದ ಅಸಮರ್ಪಕ ನಿರ್ವಹಣೆ , ಗ್ರಾಮೀಣ ರಸ್ತೆಯಲ್ಲಿ ಎಗ್ಗಿಲ್ಲದೆ ಸಾಗುವ ಭಾರೀ ಟ್ರಕ್ ಸ್ಥಳೀಯ ನಿವಾಸಿಗಳು, ಜನಸಾಮಾನ್ಯರು, ನಿತ್ಯಪ್ರಯಾಣಿಕರ ಆರೋಗ್ಯದ ಮೇಲೆ ಹಾನಿಕಾರಕ ಪರಿಣಾಮ ಬೀರುತ್ತಿದೆ ಎಂದು ಮಲೆಯಡ್ಕ, ಇಚ್ಚಾವು, ಕೋಡಿಜಾಲು ಸುಮಾರು 300ಕ್ಕಿಂತಲೂ ಅಧಿಕ ಕುಟುಂಬಗಳ ಹಿತದೃಷ್ಟಿಯಿಂದ ಸ್ಥಳೀಯರು ಮಾನ್ಯ ಹೈಕೋರ್ಟ್ ಗೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದು ಅರ್ಜಿಯಲ್ಲಿ ಸಂಜೆಯಿಂದ ಹಬ್ಬುವ ಕಮಟು ವಾಸನೆಯಿಂದ ಜನ ಉಸಿರಾಟದಂತಹ ಗಂಭೀರ ಸಮಸ್ಯೆಗೆ ಒಳಗಾಗಿ ಮಕ್ಕಳು ವೃದ್ದರಲ್ಲಿ ಅಸ್ತಮಾ, ಹೃದೋಗ ಸಮಸ್ಯೆಗಳು ತಲೆದೋರಿವೆ ಎಂದು ಆರೋಪಿಸಲಾಗಿತ್ತು. ಸ್ಥಳೀಯರು ವೈದ್ಯಕೀಯ ವರದಿಗಳು , ನೀರಿನ ಸ್ಯಾಂಪಲ್ , ಮತ್ತಿತರ ಪ್ರಮುಖ ದಾಖಲೆಗಳ ಮೂಲಕ ಇದೀಗ ಹೈಕೋರ್ಟ್ ಕದ ತಟ್ಟಿದ್ದರು.

ಕಳೆದ ಮೇ ತಿಂಗಳಿನಲ್ಲಿ ಗ್ರಾಮ ಪಂಚಾಯತ್ ನಡ, ತಹಶೀಲ್ದಾರರ ಕಛೇರಿಗೆ ಇಲ್ಲಿನ ನಿವಾಸಿಗಳು ಮನವಿ ಸಲ್ಲಿಸಿದರಾದರೂ ಅದು ಏನೂ ಪ್ರಯೋಜನವಾಗಿರಲಿಲ್ಲ ಎನ್ನಲಾಗಿದೆ. ಜನಪ್ರತಿನಿಧಿಗಳು, ಪೋಲೀಸ್ ಇಲಾಖೆಗೆ ಸಲ್ಲಿಸಿದ ಮನವಿಗೂ ಸ್ಪಂದನೆ ಸಿಗದೆ ಇದೀಗ ಪ್ರಕರಣ ಮಾನ್ಯ ಉಚ್ಚನ್ಯಾಯಾಲಯದ ಮೆಟ್ಟಲೇರಿದೆ.
ಘಟಕ ಪ್ರದೇಶದಲ್ಲಿ ಹೆಚ್ಚಾಗಿ ಪರಿಶಿಷ್ಟ ಜಾತಿ ಮತ್ತು ಪಂಗಡದ ಬಡ ಕುಟುಂಬಗಳು ವಾಸಿಸುತ್ತಿದ್ದು ಸಾಮಾನ್ಯ ಕೂಲಿ ಕಾರ್ಮಿಕರಿರುವ ಈ ಜನವಸತಿ ಪ್ರದೇಶದಲ್ಲಿ ಭಾರೀ ಪ್ರಮಾಣದ ಕೈಗಾರಿಕೆ ಪ್ರಶ್ನಿಸಿ ಇಲ್ಲಿನ ನಿವಾಸಿಗಳು ಕರ್ನಾಟಕದ ಮಾನ್ಯ ಉಚ್ಚ ನ್ಯಾಯಾಲಯದಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದಾರೆ.
ಸಾಮಾಜಿಕ ಕಳಕಳಿಯ ಅರ್ಜಿಯನ್ನು ಗಂಭೀರವಾಗಿ ಪರಿಗಣಿಸಿ ಕೈಗೆತ್ತಿಕೊಂಡಿರುವ ನ್ಯಾಯಾಲಯವು ಮುಗ್ರೋಡಿ ಹಾಟ್ ಮಿಕ್ಸ್ ಘಟಕ, ಸರ್ಕಾರದ ಮುಖ್ಯ ಕಾರ್ಯದರ್ಶಿ, ಬೆಳ್ತಂಗಡಿ ತಹಶೀಲ್ದಾರ್ , ಜಿಲ್ಲಾಧಿಕಾರಿ ದ.ಕ, ಮಾಲಿನ್ಯ ನಿಯಂತ್ರಣ ಮಂಡಳಿ, ಪಂಚಾಯತ್ ಅಭಿವೃದ್ಧಿ ಅಧಿಕಾರಿ ನಡ ಇವರಿಗೂ ನೋಟೀಸ್ ನೀಡಿದೆ‌.
ಪರಿಶಿಷ್ಟ ಪಂಗಡದ ಪ್ರಮುಖರಾದ ತಿಮ್ಮಯ್ಯ ನಾಯ್ಕ ಮಲೆಯಡ್ಕ, ನಾರಾಯಣ ನಾಯ್ಕ ಮಲೆಯಡ್ಕ, ದಯಾನಂದ ನಾಯ್ಕ ಇಚ್ಚಾವು, ಮುನೀಶ್ ಇಚ್ಚಾವು ಈ ಅನ್ಯಾಯ ಪ್ರಶ್ನಿಸಿ ಮಾನ್ಯ ಹೈಕೋರ್ಟ್ ಕದ ತಟ್ಟಿದ್ದು ಶೋಷಿತರ ಧ್ವನಿಯಾಗಿ ಕೆಲಸ ಮಾಡುವ ಹೋರಾಟಗಾರ ಹಾಗೂ ಖ್ಯಾತ ಅಡ್ವೊಕೇಟ್ ಸೋಮಶೇಖರ್ ರಾಜವಂಶಿ ಅರ್ಜಿದಾರರ ಪರವಾಗಿ ಹೈಕೋರ್ಟ್ ನಲ್ಲಿ ವಾದ ಮಂಡಿಸಿದರು.
ಭೂ ಒತ್ತುವರಿ, ರಾತ್ರಿಹಗಲು ನಿರಂತರ ಕಾರ್ಯನಿರ್ವಹಣೆ, ಶಬ್ದಮಾಲಿನ್ಯ, ಪ್ರಾಕೃತಿಕ ಅಸಮತೋಲನ, ಜಲಚರಗಳಿಗೆ ಹಾನಿ, ಜಲಮಾಲಿನ್ಯ, ಅಸಮರ್ಪಕ ದಾಖಲಾತಿಗಳು ಪರಿಶಿಷ್ಟರ ಹಕ್ಕುಗಳಿಗೆ ಧಕ್ಕೆಯಾಗುತ್ತಿರುವ ಹಿನ್ನಲೆಯಲ್ಲಿ ದೂರು ನೀಡಲಾಗಿದೆ.
ಅರ್ಜಿಗೆ ಸಂಬಂಧಿಸಿದಂತೆ ಮುಗ್ರೋಡಿ ಕನ್ ಸ್ಟ್ರಕ್ಷನ್
ಸಂಸ್ಥೆ ಗೆ ಹೈಕೋರ್ಟ್ ನೋಟಿಸ್ ಜಾರಿ ಮಾಡಿದೆ.

Post Comment

ಟ್ರೆಂಡಿಂಗ್‌

error: Content is protected !!