ಸುಮಂತ್ ಕೊಲೆ ಪ್ರಕರಣದಲ್ಲಿ ‘ಅಣ್ಣ’ನ ಮೇಲೆ ಅನುಮಾನಿಸಿ ವಿಶ್ಲೇಷಣೆ: ಯೂಟ್ಯೂಬರ್ ಮೋಹನ್ ಬೋಳಂಗಡಿ ಬೆಳ್ತಂಗಡಿ ಠಾಣೆಗೆ ಹಾಜರು

ಬೆಳ್ತಂಗಡಿ : ಗೇರುಕಟ್ಟೆ ಸಮೀಪ ಮೂರು ತಿಂಗಳ ಹಿಂದೆ ನಡೆದ ವಿದ್ಯಾರ್ಥಿ ಸುಮಂತ್ ಸಂಭೋಳ್ಯ ಕೊಲೆ ಪ್ರಕರಣಕ್ಕೆ ಸಂಬಂಧಿಸಿದ ವರದಿಯಲ್ಲಿ ಸುಮಂತ್ ಸಹೋದರನ ಮೇಲೆ ಅನುಮಾನ ಮೂಡಿಸುವ ರೀತಿಯಲ್ಲಿ ವರದಿ ಮಾಡಿದ ಆರೋಪಕ್ಕೆ ಸಂಬಂಧಿಸಿ ಹಿರಿಯ ಪತ್ರಕರ್ತ , ಯೂಟ್ಯೂಬರ್ ಮೋಹನ್ ಬೋಳಂಗಡಿ ಬೆಳ್ತಂಗಡಿ ಪೊಲೀಸ್ ಠಾಣೆಗೆ ವಿಚಾರಣೆಗೆ ಹಾಜರಾಗಿದ್ದಾರೆ.
ಬೆಳ್ತಂಗಡಿ ತಾಲೂಕು ಓಡಿಲ್ನಾಳ ಗ್ರಾಮದ ಸಂಭೋಳ್ಯ ನಿವಾಸಿ, ಒಂಭತ್ತನೇ ತರಗತಿ ವಿದ್ಯಾರ್ಥಿ ಸುಮಂತ್ ಕಳೆದ ಜನವರಿ 14ರಂದು ಧನುಪೂಜೆಗೆ ಹೋಗಿ ಕೆರೆಯಲ್ಲಿ ಶವವಾಗಿ ಪತ್ತೆಯಾಗಿದ್ದ.
ಈ ಬಗ್ಗೆ ಪೊಲೀಸರು ಕೊಲೆ ಪ್ರಕರಣ ದಾಖಲಿಸಿಕೊಂಡಿದ್ದರು. ದ.ಕ. ಎಸ್.ಪಿ. ಅವರ ಮಾರ್ಗದರ್ಶನದಂತೆ ನಾಲ್ಕು ತಂಡಗಳನ್ನು ರಚಿಸಿ ಸುಮಂತ್ ಕೊಲೆ ಪ್ರಕರಣವನ್ನು ತನಿಖೆ ನಡೆಸುತ್ತಿದ್ದು ಇದುವರೆಗೆ ಆರೋಪಿಗಳು ಪತ್ತೆಯಾಗಿಲ್ಲ.. ಈ ಮಧ್ಯೆ ಮೋಹನ್ ಬೋಳಂಗಡಿ ಅವರು ಸುಮಂತ್ ಕೊಲೆ ಪ್ರಕರಣದ ಬಗ್ಗೆ ವಿಶ್ಲೇಷಣೆ ಮಾಡುತ್ತಾ
“ಸುಮಂತ್ ನಿಗೂಢ ಹತ್ಯೆ ಅಣ್ಣನ ಮೇಲೆ ಸಂಶಯದ ನೆರಳು..?” ಎಂಬ ಶೀರ್ಷಿಕೆಯಲ್ಲಿ ತಮ್ಮ ಯೂಟ್ಯೂಬ್ ನಲ್ಲಿ ಸುಮಂತ್ ಹತ್ಯೆಯಲ್ಲಿ ಸುಮಂತ್ ಸಹೋದರ ಭಾಗಿಯಾಗಿದ್ದಾನೆ ಎಂಬ ಅರ್ಥ ಬರುವ ರೀತಿಯಲ್ಲಿ ಹೇಳಿಕೆ ನೀಡಿದ್ದು ಈ ಬಗ್ಗೆ ಸುಮಂತ್ ಮನೆಯವರು ಪೊಲೀಸರಿಗೆ ದೂರು ನೀಡಿದ ಹಿನ್ನೆಲೆಯಲ್ಲಿ ಮೋಹನ್ ಬೋಳಂಗಡಿ ವಿರುದ್ಧ ಪ್ರಕರಣ ದಾಖಲಾಗಿತ್ತು.
ಇದೀಗ ಈ ಪ್ರಕರಣಕ್ಕೆ ಸಂಬಂಧಿಸಿ ಯೂಟ್ಯೂಬರ್ ಮೋಹನ್ ಬೋಳಂಗಡಿ ಸೋಮವಾರ ಬೆಳ್ತಂಗಡಿ ಠಾಣೆಗೆ ಹಾಜರಾಗಿ ಹೇಳಿಕೆ ದಾಖಲಿಸಿ ತೆರಳಿದ್ದಾರೆ.













Post Comment