ಸವಣಾಲು ದೇವಳದ ಅರ್ಚಕ ಆತ್ಮಹತ್ಯೆ : ಕಾರಣ ನಿಗೂಢ!

ಬೆಳ್ತಂಗಡಿ : ದೇವಸ್ಥಾನದ ಅರ್ಚಕರೊಬ್ಬರು ದೇವಸ್ಥಾನದ ಸಮೀಪದ ಮನೆಯಲ್ಲಿ ಪಕ್ಕಾಸಿಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಸವಣಾಲು ಗ್ರಾಮದಲ್ಲಿ ಶನಿವಾರ ನಡೆದಿದೆ.
ಬೆಳ್ತಂಗಡಿ ತಾಲೂಕಿನ ಸವಣಾಲು ಗ್ರಾಮದ ಶ್ರೀ ದುರ್ಗಾ ಕಾಳಿಕಾಂಬ ದೇವಸ್ಥಾನದ ಅರ್ಚಕ ಶಿರಸಿ ಮೂಲದ ವಿಜಯ್ ಭಟ್ (29ವ) ಎಂಬವರು ದೇವಸ್ಥಾನದ ಹಿಂದೆ ಸಮೀಪವಿರುವ ತಾನು ವಾಸವಾಗಿದ್ದ ಮನೆಯ ಪಕ್ಕಾಸಿಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದು ಗ್ರಾಮಸ್ಥರ ಅಚ್ಚರಿಗೆ ಕಾರಣವಾಗಿದೆ.
ಅರ್ಚಕ ವಿಜಯ ಭಟ್ ವರ್ಷದ ಹಿಂದೆಯಷ್ಟೆ ಮದುವೆಯಾಗಿದ್ದು ದಂಪತಿಗೆ ಮೂರು ತಿಂಗಳ ಗಂಡು ಮಗು ಕೂಡ ಇದೆ. ದೇವಸ್ಥಾನದ ಹಿಂಭಾಗದ ಕೊಠಡಿಯಲ್ಲಿ ಒಬ್ಬರೇ ವಾಸವಿದ್ದರು. ದೇವಸ್ಥಾನಕ್ಕೆ ಶನಿವಾರ ಬೆಳಿಗ್ಗೆ ಎಂದಿನಂತೆ ಭಕ್ತರು ಪೂಜೆಗಾಗಿ ಬಂದಾಗ ಅರ್ಚಕ ವಿಜಯ ಭಟ್ ಬಂದಿರಲಿಲ್ಲ. ಇದನ್ನು ಗಮನಿಸಿದ ಭಕ್ತರು ಅರ್ಚಕರನ್ನು ಕರೆಯಲು ರೂಮಿನ ಬಳಿ ಹೋಗಿ ನೋಡಿದಾಗ ಅವರು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬೆಳಕಿಗೆ ಬಂದಿದೆ. ಅರ್ಚಕ ವಿಜಯ ಭಟ್ ಎಂಟು ವರ್ಷಗಳಿಂದ ದೇವಸ್ಥಾನದಲ್ಲಿ ನಿಷ್ಠೆಯಿಂದ ಸೇವೆ ಮಾಡಿಕೊಂಡಿದ್ದು ನಯ ವಿನಯದ ವ್ಯಕ್ತಿತ್ವದಿಂದ ಊರವರ ಮೆಚ್ಚುಗೆ ಗಳಿಸಿದ್ದರು. ಹತ್ತಿರದಿಂದ ಬಲ್ಲ ಸ್ಥಳೀಯರ ಪ್ರಕಾರ ಮೇಲ್ನೋಟಕ್ಕೆ ಅವರಿಗೆ ಆತ್ಮಹತ್ಯೆ ಮಾಡಿಕೊಳ್ಳುವಂಥ ಯಾವುದೇ ಚಿಂತೆಯಾಗಲಿ ಒತ್ತಡಗಳಾಗಲಿ ಇರಲಿಲ್ಲ.
ಆತ್ಮಹತ್ಯೆಗೆ ಯಾವುದೇ ನಿಖರ ಕಾರಣ ತಿಳಿದು ಬಂದಿಲ್ಲ. ಘಟನಾ ಸ್ಥಳಕ್ಕಾಗಮಿಸಿದ ಬೆಳ್ತಂಗಡಿ ಪೊಲೀಸರು ಸ್ಥಳ ಪರಿಶೀಲನೆ ನಡೆಸುತ್ತಿದ್ದು ಕೃತ್ಯಕ್ಕೆ ಕಾರಣವೇನೆಂಬುದು ತನಿಖೆಯಿಂದಷ್ಟೆ ತಿಳಿದು ಬರಬೇಕಾಗಿದೆ.
Post Comment