ಬಂಧಿತ ಗಣಿದಂಧೆಕೋರನ ಬಂಧನ ವಿರೋಧಿಸಿ ಪೊಲೀಸ್ ಠಾಣೆಯೊಳಗೆ ಪ್ರತಿಭಟನೆ: ಬೆಳ್ತಂಗಡಿ ಶಾಸಕ ಹರೀಶ್ ಪೂಂಜ ವಿರುದ್ಧ ಕರ್ತವ್ಯಕ್ಕೆ ಅಡ್ಡಿ ಕೇಸು ದಾಖಲು

ಬೆಳ್ತಂಗಡಿ : ಮೆಲಂತಬೆಟ್ಟು ಸಮೀಪ ಅಕ್ರಮ ಗಣಿಗಾರಿಕೆಯ ಕ್ವಾರೆಗೆ ದಾಳಿ ಮಾಡಿ ಗಣಿ ದಂಧೆಯ ಆರೋಪಿ ಶಶಿರಾಜ್ ಶೆಟ್ಟಿ ಎಂಬಾತನನ್ನು ಬೆಳ್ತಂಗಡಿ ಪೊಲೀಸರು ಬಂಧಿಸಿದ ಬಗ್ಗೆ ಬೆಂಬಲಿಗರೊಂದಿಗೆ ಪೊಲೀಸ್ ಠಾಣೆಗೆ ದಿಢೀರ್ ಬಂದು ಆರೋಪಿಯನ್ನು ಬಿಡುಗಡೆ ಮಾಡುವಂತೆ ಪಟ್ಟು ಹಿಡಿದು ಪೊಲೀಸರು ಒತ್ತಡಕ್ಕೆ ಮಣಿಯದಿದ್ದಾಗ ಪ್ರತಿಭಟಿಸಿದ ಶಾಸಕ ಹರೀಶ್ ಪೂಂಜ ಅವರು ಎಸ್ಐ ಗೆ ಬೆದರಿಕೆ ಹಾಕಿ ನಿಂದನೆ ಮಾಡಿರುವ ವಿಡಿಯೋ ಒಂದು ವೈರಲ್ ಆಗಿ ಚರ್ಚೆಗೆ ಕಾರಣವಾದ ಬೆನ್ನಲ್ಲೆ ಶಾಸಕ ಹರೀಶ್ ಪೂಂಜ ವಿರುದ್ಧ ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಬೆಳ್ತಂಗಡಿ ತಾಲೂಕು ಮೇಲಂತಬೆಟ್ಟು ಸಮೀಪ ನಡೆಯುತ್ತಿದ್ದ ಅಕ್ರಮ ಗಣಿಗಾರಿಕೆಗೆ ಬೆಳ್ತಂಗಡಿ ತಹಶೀಲ್ದಾರ್ ಪೃಥ್ವಿ ಸಾನಿಕಂ ಮತ್ತು ಬೆಳ್ತಂಗಡಿ ಪೊಲೀಸರು ಶನಿವಾರ ದಾಳಿ ನಡೆಸಿ ಕ್ವಾರೆಯಲ್ಲಿದ್ದ ಹಿಟಾಚಿ, ಕಂಪ್ರೆಷರ್, ಅಕ್ರಮ ಸ್ಫೋಟಕಗಳನ್ನು ವಶಕ್ಕೆ ಪಡೆದಿದ್ದರು.
ಬಳಿಕ ಈ ಬಗ್ಗೆ ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಉಜಿರೆಯ ಪ್ರಮೋದ್ ಗೌಡ ಮತ್ತು ಶಶಿರಾಜ್ ಶೆಟ್ಟಿ ವಿರುದ್ಧ ಪ್ರಕರಣ ದಾಖಲಿಸಿಕೊಂಡ ಪೊಲೀಸರು ಶಶಿರಾಜ್ ಶೆಟ್ಟಿ ಎಂಬಾತನನ್ನು ಬೆಳ್ತಂಗಡಿ ಪೊಲೀಸರು ಬಂಧಿಸಿದ್ದರು. ಶಶಿರಾಜ್ ಶೆಟ್ಟಿ ಬಂಧನದ ವಿಷಯ ತಿಳಿದ ಶಾಸಕ ಹರೀಶ್ ಪೂಂಜ ಮತ್ತು ಬೆಂಬಲಿಗರು, ಬಿಜೆಪಿ ಕಾರ್ಯಕರ್ತರು ಪೊಲೀಸ್ ಠಾಣೆಗೆ ನುಗ್ಗಿ ಬಂಧನ ವಿರೋಧಿಸಿ ಪ್ರತಿಭಟನೆ ನಡೆಸಿ ಬಂಧಿತ ಶಶಿರಾಜ್ ಶೆಟ್ಟಿಯನ್ನು ಕೂಡಲೇ ಬಿಡುಗಡೆ ಮಾಡುವಂತೆ ಪಟ್ಟು ಹಿಡಿದಿದ್ದರು.
ಈ ಸಂದರ್ಭ ಬೆಳ್ತಂಗಡಿ ಶಾಸಕ ಹರೀಶ್ ಪೂಂಜ ಹಾಗೂ ಬೆಳ್ತಂಗಡಿ ಎಸ್ ಐ ಮುರಳೀಧರ್ ನಾಯ್ಕ ಅವರ ಮಧ್ಯೆ ತೀವ್ರ ವಾಗ್ವಾದ ನಡೆಯಿತು. ಇದೇ ಸಂದರ್ಭ ಒತ್ತಡಕ್ಕಾಗಲಿ, ಪ್ರತಿಭಟನೆಗಾಗಲಿ ಪೊಲೀಸರು ಮಣಿಯದಿದ್ದಾಗ ಬೆದರಿಕೆ ಹಾಕಿ ಪೊಲೀಸರನ್ನು ನಿಂದಿಸಿದ್ದು ಇದರ ವಿಡಿಯೋ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದ್ದು ಇದು ನೀತಿ ಸಂಹಿತಿ ಜಾರಿಯಲ್ಲಿರುವ ಕಾರಣ ವ್ಯಾಪಕ ಚರ್ಚೆಗೆ ಕಾರಣವಾಗಿತ್ತು. ನೀತಿ ಸಂಹಿತೆ ಜಾರಿಯಲ್ಲಿರುವ ಸಮಯದಲ್ಲಿ ಶಾಸಕರು ಪೊಲೀಸ್ ಠಾಣೆಯಲ್ಲಿ ಈ ರೀತಿ ವರ್ತಿಸಿದ ರೀತಿಯನ್ನು ಗಂಭೀರವಾಗಿ ಪರಿಗಣಿಸಿದ ಪೊಲೀಸ್ ಇಲಾಖೆಯ ಹಿರಿಯ ಅಧಿಕಾರಿಗಳು ನೀಡಿದ ಸೂಚನೆಯಂತೆ ಬೆಳ್ತಂಗಡಿ ಎಸ್ ಐ ಮುರಳೀಧರ್ ನಾಯ್ಕ ಅವರು ನೀಡಿದ ಲಿಖಿತ ದೂರಿನಂತೆ ಮೇ19ರ ಭಾನುವಾರ ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಶಾಸಕ ಹರೀಶ್ ಪೂಂಜ ವಿರುದ್ಧ ಕರ್ತವ್ಯಕ್ಕೆ ಅಡ್ಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.
Post Comment