ತಾಲೂಕಿನ ವಿವಿಧೆಡೆ ಮಳೆಹಾನಿ ಪ್ರಕರಣ : ಮನೆ,ರಸ್ತೆಗೆ ಹಾನಿ

ಬೆಳ್ತಂಗಡಿ : ಭಾರೀ ಮಳೆಗೆ ತಾಲೂಕಿನ ವಿವಿಧ ಗ್ರಾಮಗಳಲ್ಲಿ ಬೇರೆ ಬೇರೆ ರೀತಿ ಅನೇಕ ಮಳೆ ಹಾನಿ ಪ್ರಕರಣಗಳು ದಾಖಲಾಗಿದ್ದು ಇನ್ನಷ್ಟು ಗ್ರಾಮಗಳಲ್ಲಿ ಸಂಭವಿಸಿದ ಸಣ್ಣ ಪುಟ್ಟ ಮಳೆ ಹಾನಿ ಘಟನೆಗಳ ವರದಿಗಳ ಸಂಖೆ ಏರುತ್ತಲೇ ಇದೆ.
ಬೆಳ್ತಂಗಡಿ ತಾಲೂಕಿನ ಮೊಗ್ರು, ಬಂದಾರು, ಇಳಂತಿಲ, ನಡ, ಲಾಯಿಲಾ, ಬಾರ್ಯ, ಕಳಿಯ ಗ್ರಾಮಗಳಲ್ಲಿ ಗುಡ್ಡ ಕುಸಿತದಿಂದ ಮನೆಗೆ ಹಾನಿ, ತೋಟಗಳಿಗೆ ಹಾನಿ, ರಸ್ತೆ ಸಂಪರ್ಕ ಕಡಿತ ಮುಂತಾದ ಪ್ರಕೃತಿ ವಿಕೋಪ ಘಟನೆಗಳು ವರದಿಯಾಗಿದೆ.
ಬಂದಾರು ಗ್ರಾಮಪಂಚಾಯತ್ ವ್ಯಾಪ್ತಿಯ ಬಂದಾರು ಗ್ರಾಮದ
ಶಿವನಗರ – ಬೈಪಾಡಿ ರಸ್ತೆಯ ಬೋಲೋಡಿ ಸೇತುವೆ ಬಳಿ ಹಾಗೂ ಕುಂಟಾಲಪಲಿಕೆ ಬಳಿ ರಸ್ತೆಗೆ ಸಣ್ಣ ಮಟ್ಟಿನ ಗುಡ್ಡ ಕುಸಿದಿದೆ.
ಬೊಲೋಡಿ ಮತ್ತು ಕುಂಟಾಲಪಲಿಕೆ ಸೇತುವೆಯ ಬಳಿ ಬೃಹತ್ ಗುಡ್ಡ ಕುಸಿದು ವಾಹನ ಸಂಚಾರಕ್ಕೆ ಅಡಚಣೆ ಉಂಟಾಗಿತ್ತು. ಕುಂಟಾಲಪಲಿಕೆ ಮತ್ತು ಬೊಲೋಡಿ ಸೇತುವೆಗಳ ಬಳಿ ಎತ್ತರದ ಗುಡ್ಡವಿದ್ದು ಇನ್ನಷ್ಟು ಕುಸಿಯುವ ಅಪಾಯವಿದೆ ಎಂದು ಸ್ಥಳೀಯರು ತಿಳಿಸಿದ್ದಾರೆ.
ಬಂದಾರು ಗ್ರಾಮದ ಮುರ್ತಾಜೆ ಸೇಸಪ್ಪ ಪೂಜಾರಿ ಯವರ ಕೋಳಿ ಶೆಡ್ ಬಳಿ ಗುಡ್ಡೆ ಕುಸಿತ ಹಾಗೂ ಮುರ್ತಾಜೆ ಎಂಬಲ್ಲಿ ರಸ್ತೆ ಕುಸಿತದಿಂದ ಸಂಪರ್ಕ ಕಡಿತ ಉಂಟಾಗಿದೆ.
ಲಾಯ್ಲಾ ಗ್ರಾಮದ ಅಂಕಾಜೆ ಎಂಬಲ್ಲಿ ಗುಡ್ಡ ಕುಸಿದು ಬಿದ್ದು ರಸ್ತೆ ಸಂಪರ್ಕ ಕಡಿತಗೊಂಡಿದೆ. ಇಳಂತಿಲ ಗ್ರಾಮದ ಬನ್ನೆಂಗಳ ಎಂಬಲ್ಲಿಯ ಸುಲೈಮಾನ್ ಎಂಬುವವರ ಮನೆಯ ಪಕ್ಕದ ಗುಡ್ಡ ಕುಸಿದು ಬಿದ್ದು ಮನೆಗೆ ಹಾನಿಯಾಗಿರುತ್ತದೆ.
ಇನ್ನಷ್ಟು ಗುಡ್ಡ ಕುಸಿಯುವ ಸಂಭವವಿರುವುದರಿಂದ ಸದ್ರಿ ಮನೆಯವರನ್ನು ಸ್ಥಳಾಂತರ ಮಾಡಲಾಗಿದೆ.
ಕಳಿಯ ಗ್ರಾಮ ಪಂಚಾಯತ್ ವ್ಯಾಪ್ತಿಯ ನ್ಯಾಯತರ್ಪು ಗ್ರಾಮದ ತಿಮ್ಮಪ್ಪ ಗೌಡರ ಮನೆಯ ಹತ್ತಿರ ವಿಪರೀತ ಮಳೆಗೆ ಗುಡ್ಡ ಜರಿದು ಬಿದ್ದಿದೆ. ಬಾರ್ಯಾ ಗ್ರಾಮದ ಸೋಕಿಲ ಎಂಬಲ್ಲಿ ಜಿ. ಪಂ. ರಸ್ತೆಗೆ ಗುಡ್ಡ ಕುಸಿದು ಹಾಗೂ ಮರ ಬಿದ್ದ ಪರಿಣಾಮ ಸಂಪರ್ಕ ರಸ್ತೆ ಕಡಿತ ಆಗಿದೆ.
ನಡ ಗ್ರಾಮದ ಸುರ್ಯ ಕುಮೇರು ರಸ್ತೆ ಬದಿಯ ಗುಡ್ಡ ಕುಸಿದಿದೆ. ಇದೇ ಗ್ರಾಮದ ನೆಕ್ಕರೆ ಎಂಬಲ್ಲಿ ವಿಶ್ವನಾಥ ಗೌಡ ಎಂಬವರ ಮನೆ ಪಕ್ಕದ ಎತ್ತರದ ಗುಡ್ಡ ಕುಸಿದು ಹಾನಿಯಾಗಿರುತ್ತದೆ.
ಕೊಯಾಗುಡ್ಡೆ- ಸುರಂಟೆ ಹೋಗುವ ದಾರಿಯಲ್ಲಿ ಮೋರಿ ಕುಸಿದಿದೆ
ಇಳಂತಿಲ ಗ್ರಾಮದ ಸಿದ್ದಿಕ್ ಎಂಬವರ ಮನೆಯ ಹಿಂದಿನ ಗುಡ್ಡ ಕುಸಿದು ಬಿದ್ದು ಮನೆಗೆ ನೀರು ನುಗ್ಗಿದ್ದುಪ ಮನೆಯವರನ್ನು ಸ್ಥಳಾಂತರ ಮಾಡಲಾಗಿದೆ.
ಬಾರ್ಯ ಗ್ರಾಮದ ಅಶ್ರಫ್ ಎಂಬವರ ವಾಸದ ಮನೆಗೆ ಹಾನಿಯಾಗಿದೆ.
Post Comment