ಧರ್ಮಸ್ಥಳ ಸರಣಿ ದಫನ ಪ್ರಕರಣ: ದಫನ ಸ್ಥಳ ಸಂಖ್ಯೆ 9ರಲ್ಲಿ ಶೋಧ ಕಾರ್ಯಾಚರಣೆ ಆರಂಭ

ಬೆಳ್ತಂಗಡಿ : ಧರ್ಮಸ್ಥಳ ನೂರಾರು ಮೃತದೇಹಗಳ ಸರಣಿ ಸಮಾಧಿ ಪ್ರಕರಣದ ತನಿಖೆಗೆ ಸಂಬಂಧಿಸಿ ಎಸ್ ಐ ಟಿ ಅಧಿಕಾರಿಗಳ ಮುಂದೆ ದೂರುದಾರ ಗುರುತಿಸಿದ ಸಮಾಧಿ ಸ್ಥಳ ಸಂಖ್ಯೆ 7 ಮತ್ತು 8ರಲ್ಲಿ ಶುಕ್ರವಾರ ಎಸ್ ಐ ಟಿ ಅಧಿಕಾರಿಗಳ ಸಮಕ್ಷಮ ದೂರುದಾರನ ಮುಂದೆ ಶೋಧ ಕಾರ್ಯಾಚರಣೆ ನಡೆದಿದ್ದು ಯಾವುದೇ ಅಸ್ಥಿಪಂಜರ ಕಳೇಬರಗಳು ಪತ್ತೆಯಾಗಿಲ್ಲ ಎಂದು ತಿಳಿದು ಬಂದಿದೆ.
ಗುರುವಾರ ಅಗೆಯಲಾಗಿದ್ದ 6ನೇ ಸಮಾಧಿಯಲ್ಲಿ ಕಳೇಬರ ಪತ್ತೆಯಾಗಿತ್ತು. ಶುಕ್ರವಾರ ಅಗೆದ ಸ್ಥಳ ಸಂಖ್ಯೆ 7ರಲ್ಲಿ ಮಧ್ಯಾಹ್ನವರೆಗೂ ಹುಡುಕಾಡಿದರೂ ಯಾವುದೇ ಅಸ್ಥಿಪಂಜರದ ಕುರುಹುಗಳು ಪತ್ತೆಯಾಗಿರಲಿಲ್ಲ. ಮಧ್ಯಾಹ್ನ ಬಳಿಕ ಸ್ಥಳ ಸಂಖ್ಯೆ 8ರಲ್ಲಿ ಕಳೇಬರ ಹುಡುಕಾಟ ನಡೆಸಿದಾಗ ಬಹಳ ನಿರೀಕ್ಷೆ ಇದ್ದರೂ ಅದರಲ್ಲೂ ಯಾವುದೇ ಸಮಾದಿಯ ಕುರುಹುಗಳು ಪತ್ತೆಯಾಗಿಲ್ಲ.
ಇದೀಗ ಶನಿವಾರ 9ನೇ ಸ್ಥಳಕ್ಕೆ ಎಸ್ ಐ ಟಿ ಅಧಿಕಾರಿಗಳು ದೂರುದಾರನನ್ನು ಕರೆದುಕೊಂಡು ಬಂದಿದ್ದು ಎಂದಿನಂತೆ ಇತರ ಇಲಾಖಾಧಿಕಾರಿಗಳು ಸಿಬ್ಬಂದಿಗಳ ಜೊತೆ ಆಗಮಿಸಿದ್ದು
ಕಾರ್ಯಾಚರಣೆ ಆರಂಭಗೊಂಡಿದೆ.
ಧರ್ಮಸ್ಥಳ ನೇತ್ರಾವತಿ ಸ್ನಾನಘಟ್ಟದಿಂದ ಸುಮಾರು 150 ಮೀಟರ್ ದೂರದಲ್ಲಿ ಹೆದ್ದಾರಿಯ ಬದಿಯಲ್ಲಿ ಸಾಲಾಗಿ ಗುರುತಿಸಲಾದ ಸ್ಥಳಗಳ ಪೈಕಿ ಸ್ಥಳ ಸಂಖ್ಯೆ 9ರಲ್ಲಿ ಅಗೆತ ಮತ್ತು ಶೋಧ ನಡೆಯುತ್ತಿದೆ. ಕಾರ್ಮಿಕರು ಶೋಧ ಕಾರ್ಯದಲ್ಲಿ ತೊಡಗಿದ್ದಾರೆ. ಸಕಲ ಭದ್ರತೆ, ಸುರಕ್ಷತಾ ಕ್ರಮಗಳನ್ನು ಕೈಗೊಳ್ಳಲಾಗಿದೆ.
ಪುತ್ತೂರು ವಿಭಾಗಾಧಿಕಾರಿ ಸ್ಟೆಲ್ಲಾ ವರ್ಗೀಸ್ ಮತ್ತು ಎಸ್ ಐ ಟಿ ಅಧಿಕಾರಿಗಳ ತಂಡ ಜೊತೆ ಎಂದಿನಂತೆ ತಜ್ಞ ವೈದ್ಯರು, ಕಂದಾಯ , ಅರಣ್ಯ ಇಲಾಖೆಗಳ ಅಧಿಕಾರಿಗಳು, ಸ್ಥಳೀಯ ಪಂಚಾಯತ್ ಅಧಿಕಾರಿಗಳು ಸ್ಥಳದಲ್ಲಿದ್ದಾರೆ.















Post Comment