ಪಟ್ಟೂರು ಗೋವಧೆ ಹೆಸರಲ್ಲಿ ಕಾನೂನು ಬಾಹಿರ ಮನೆ ಜಪ್ತಿ ಪ್ರಕರಣ : ಮುಸ್ಲಿಂ ಮುಖಂಡರ ನಿಯೋಗ ನೂತನ ಡಿವೈಎಸ್ಪಿ ಭೇಟಿ

ತಪ್ಪಿತಸ್ಥ ಅಧಿಕಾರಿ ವಿರುದ್ಧ ಕ್ರಮಕ್ಕೆ
ಬೆಳ್ತಂಗಡಿ ಮುಸ್ಲಿಂ ಒಕ್ಕೂಟ ಆಗ್ರಹ
ಬೆಳ್ತಂಗಡಿ : ಪಟ್ರಮೆ ಗ್ರಾಮದ ಪಟ್ಟೂರು ನಿವಾಸಿ ಸಾರಮ್ಮ ಎಂಬವರ ಮನೆಯನ್ನು ಗೋವಧೆ ಪ್ರಕರಣದ ಹೆಸರಿನಲ್ಲಿ ಕಾನೂನುಬಾಹಿರವಾಗಿ ತರಾತುರಿಯಲ್ಲಿ ಜಪ್ತಿ ಮಾಡಿ ಮಕ್ಕಳು, ಮಹಿಳೆ ಸಹಿತ ಮನೆಯವರನ್ನು ಹೊರಹಾಕಿದ ಘಟನೆಯಲ್ಲಿ ತಪ್ಪಿತಸ್ಥ ಅಧಿಕಾರಿಯ ಮೇಲೆ ಶಿಸ್ತು ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿ ಮುಸ್ಲಿಂ ಮುಖಂಡರ ನಿಯೋಗ ಸೋಮವಾರ ಬೆಳ್ತಂಗಡಿ ಡಿವೈಎಸ್ಪಿ ಅವರನ್ನು ಭೇಟಿ ಮಾಡಿ ಒತ್ತಾಯಿಸಿದರು.
ಸೋಮವಾರದಂದು ರಂದು ಬೆಳ್ತಂಗಡಿ ಕಚೇರಿಯಲ್ಲಿ ತಾಲೂಕು ಮುಸ್ಲಿಂ ಒಕ್ಕೂಟದ ನೇತೃತ್ವದಲ್ಲಿ ಡಿವೈಎಸ್ಪಿ ಸಿ.ಕೆ ರೋಹಿಣಿ ಜೊತೆ ನಡೆದ ಮಾತುಕತೆಯಲ್ಲಿ ಕೆಲವು ವಿಚಾರಗಳನ್ನು ಅವರ ಗಮನಕ್ಕೆ ತಂದು ಮುಕ್ತವಾಗಿ ಚರ್ಚಿಸಲಾಯಿತು.
ಗೋವಧೆ ಕಾನೂನು ಉಲ್ಲಂಘನೆ ಹೆಸರಲ್ಲಿ ಒಂದು ಸಮುದಾಯವನ್ನು ಗುರಿಯಾಗಿಸಿ ಪೊಲೀಸರನ್ನು ಶುಕ್ರವಾರದ ಮಸೀದಿಯ ಪ್ರಾರ್ಥನೆಯ ಸಂದರ್ಭ ಕಳುಹಿಸಿ ಮಾಹಿತಿಯ ನೆಪದಲ್ಲಿ ಬೆದರಿಸುವಂತಹ ಕೃತ್ಯವನ್ನು ಸಹಿಸಲು ಸಾಧ್ಯವಿಲ್ಲ.
ಈ ಬಗ್ಗೆ ಸಮುದಾಯಕ್ಕೆ ಇರುವ ಆಕ್ರೋಶವನ್ನು ನೂತನ ಡಿವೈಎಸ್ಪಿ ಅವರ ಗಮನಕ್ಕೆ ತಂದರು. ಇಡೀ ಜಿಲ್ಲೆಯಲ್ಲಿ ಅಧಿಕೃತ ಪರವಾನಿಗೆ ಸಹಿತದ ಕಸಾಯಿ ಖಾನೆಗಳು ಇಲ್ಲದೇ ಇರುವುದರಿಂದ ಅಲ್ಲಲ್ಲಿ ಇಂಥ ಅಕ್ರಮಗಳಿಗೆ ಎಡೆ ಮಾಡಿಕೊಟ್ಟಿದೆ.
ಈ ಬಗ್ಗೆ ಸರಕಾರ ಸೂಕ್ತ ಕ್ರಮ ಕೈಗೊಂಡು ತಾಲೂಕಿಗೊಂದು ಸಕ್ರಮ ಕಸಾಯಿಖಾನೆ ಮಂಜೂರುಗೊಳಿಸಬೇಕು. ನಿಯಮದ ವ್ಯಾಪ್ತಿಯಲ್ಲಿ ವ್ಯವಹಾರ ನಡೆದರೆ ಯಾವುದೇ ಗೊಂದಲಗಳಿಗೆ ಅವಕಾಶವೇ ಇರುವುದಿಲ್ಲ ಎಂದು ಅಧಿಕಾರಿಗಳ ಗಮನಸೆಳೆಯಲಾಯಿತು.
ನಿಯೋಗದ ಒಟ್ಟು ವಿಚಾರಗಳ ಬಗ್ಗೆ ಪ್ರತಿಕ್ರಿಯಿಸಿದ ಡಿವೈಎಸ್ಪಿ ಸಿ.ಕೆ. ರೋಹಿಣಿ ಅವರು, ಈ ರೀತಿಯ ಪರಸ್ಪರ ಸಂವಹನ ಮಾರ್ಗದಿಂದ ಅನೇಕ ಸಮಸ್ಯೆಗಳು ಸಣ್ಣ ಮಟ್ಟದಲ್ಲೇ ಪರಿಹಾರವಾಗುತ್ತದೆ.
ಈ ಬಗ್ಗೆ ಪರಿಶೀಲಿಸಿ ಕ್ರಮವಹಿಸಲಾಗುವುದು.
ಕಾನೂನು ಸುವ್ಯವಸ್ಥೆಯ ದೃಷ್ಟಿಯಲ್ಲಿ ಒಳ್ಳೆಯ ಕೆಲಸಮಾಡಬೇಕು ಎಂಬ ಇರಾದೆಯಿಂದಲೇ ನಾನು ಇಲ್ಲಿಗೆ ಬಂದಿದ್ದೇನೆ. ಎಲ್ಲರ ಸಹಕಾರ ಪಡೆದುಕೊಂಡು ಮುಂದುವರಿಯಲಾಗುವುದು ಎಂದರು.
ತಾಲೂಕು ಮುಸ್ಲಿಂ ಒಕ್ಕೂಟದ ಅಧ್ಯಕ್ಷ ಬಿ.ಎ ನಝೀರ್ ಅವರ ನೇತೃತ್ವದಲ್ಲಿ ನಡೆದ ಈ ಮಾತುಕತೆಯಲ್ಲಿ ಪ್ರಮುಖರಾದ ಅಬ್ದುಲ್ ರಝಾಕ್ ಕನ್ನಡಿಕಟ್ಟೆ, ಅಕ್ಬರ್ ಬೆಳ್ತಂಗಡಿ, ಅಶ್ರಫ್ ಆಲಿಕುಂಞಿ ಮುಂಡಾಜೆ, ಖಾಲಿದ್ ಪುಲಾಬೆ, ಅಬ್ದುಲ್ ರಹಿಮಾನ್ ಪಡ್ಪು, ನಿಸಾರ್ ಕುದ್ರಡ್ಕ, ನವಾಝ್ ಶರೀಫ್ ಪೆರಾಲ್ದರಕಟ್ಟೆ, ಅಝರ್ ನಾವೂರು, ಅಬ್ಬೋನು ಮದ್ದಡ್ಕ, ಕೆ.ಎಸ್ ಅಬ್ದುಲ್ಲ ಕರಾಯ, ಶಮೀಮ್ ಯೂಸುಫ್ ಮದ್ದಡ್ಕ, ಅಶ್ರಫ್ ಕಟ್ಟೆ, ಸಾಲಿಹ್ ಮದ್ದಡ್ಕ ಮುಂತಾದವರು ಭಾಗವಹಿಸಿದ್ದರು.

















Post Comment