ಇತಿಹಾಸ ಪ್ರಸಿದ್ಧ ಕಾಜೂರು ಉರೂಸ್ ಸಮಾರೋಪ; ಧಾರ್ಮಿಕ ನಂಬಿಕೆಗಳು ನಮ್ಮ ಮಣ್ಣಿನ ಶಕ್ತಿ : ಸ್ಪೀಕರ್ ಯು.ಟಿ. ಖಾದರ್

ಬೆಳ್ತಂಗಡಿ : ತಾಳ್ಮೆಯ ಮೂಲಕ ನಾವು ಪಡೆಯುವ ಯಶಸ್ಸನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ. ಹಿರಿಯರು ಸಹಿಸಿದ ತ್ಯಾಗ ಮತ್ತು ತಾಳ್ಮೆಯನ್ನು ಯುವಜನತೆ ಅರಿತು ಬಾಳಬೇಕು, ಧಾರ್ಮಿಕ ನಂಬಿಕೆಗಳು ದೌರ್ಬಲ್ಯ ಅಲ್ಲ, ಅದು ನಮ್ಮ ಮಣ್ಣಿನ ಶಕ್ತಿ ಎಂದು ವಿಧಾನಸಭಾ ಸಭಾಪತಿ ಯು.ಟಿ ಖಾದರ್ ಹೇಳಿದರು.
ಜ.25 ರಂದು ನಡೆದ ಕಾಜೂರು ಮಖಾಂ ಶರೀಫ್ ಉರೂಸ್ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡುತ್ತಿದ್ದರು.
ಪ್ರತಿಯೊಬ್ಬರ ಧರ್ಮವೂ ಇನ್ನೊಬ್ಬರಿಗೆ ನೋವು ತರುವ, ಗಾಯ ಮಾಡುವ ಕತ್ತಿಯಾಗಬಾರದು. ನೋವನ್ನು ಗುಣಪಡಿಸುವ ಮುಲಾಮು ಆಗಬೇಕು ಎಂದರು.
ರಾಜ್ಯ ವಕ್ಫ್ ಕೌನ್ಸಿಲ್ ಉಪಾಧ್ಯಕ್ಷ ಎನ್ಕೆಎಂ ಶಾಫಿ ಸಅದಿ ಮಾತನಾಡಿ ಧಾರ್ಮಿಕತೆ ಮತ್ತು ಆಧ್ಯಾತ್ಮಿಕತೆ ನಮ್ಮ ಶಕ್ತಿಯಾಬೇಕು. ಕೇವಲ ಭೌತಿಕ ವಿಚಾರಗಳ ಚೌಕಟ್ಟಿನಲ್ಲಿರುವ ನಮ್ಮ ನಡೆಯಿಂದಾಗಿ ಸಮುದಾಯದ ಸಮಸ್ಯೆಗಳು ಸಮಸ್ಯೆಗಳಾಗಿಯೇ ಉಳಿದಿದೆ ಎಂದರು.
ಎಸ್ಡಿಪಿಐ ರಾಜ್ಯಾಧ್ಯಕ್ಷ ಅಬ್ದುಲ್ ಮಜೀದ್ ಕೊಡ್ಲಿಪೇಟೆ ಮಾತನಾಡಿ, ಕಾಜೂರು ವಿದ್ಯಾಭ್ಯಾಸದ ವಿಚಾರದಲ್ಲಿ ಮುಂದೆ ಬರುತ್ತಿದ್ದು, ಸರಕಾರದ ಮೂಲಕ ಇರುವ ವಸತಿ ಶಾಲೆಗಳು, ಉನ್ನತ ವಿದ್ಯಾಭ್ಯಾಸ ಪ್ರೋತ್ಸಾಹಗಳು, ಅಂತಾರಾಷ್ಟ್ರೀಯ ಮಟ್ಟದ ಶಿಕ್ಷಣಕ್ಕೆ ಇರುವ ಬೆಂಬಲಗಳು, ಸ್ಕಾಲರ್ ಶಿಪ್ ಗಳನ್ನು ನಾವು ಬಳಸಿಕೊಳ್ಳುವಲ್ಲಿ ಎಡವಬಾರದು. ಇಸ್ಲಾಂ ಅನ್ನು ತಪ್ಪು ವ್ಯಾಖ್ಯಾನ ಮಾಡುವ ಪ್ರವೃತ್ತಿ ನಾಡಿನಲ್ಲಿ 2014ರಿಂದ ಹೆಚ್ಚು ಪ್ರವರ್ಧಮಾನಕ್ಕೆ ಬಂದಿದ್ದು ಕಾನೂನು ಮತ್ತು ಸಂವಿಧಾನದ ಮೂಲಕ ಅದನ್ನು ಮೀರಿನಿಲ್ಲುವ ಶಕ್ತಿ ಪಡೆದುಕೊಳ್ಳಬೇಕು. ದೌರ್ಜನ್ಯ, ನ್ಯಾಯ ನಿರಾಕರಣೆ ಇದು ಪ್ರವಾದಿಯವರ ಕಾಲಘಟ್ಟದಿಂದಲೂ ನಮ್ಮ ಮೇಲೆ ಪರೀಕ್ಷೆಗಾಳಾಗಿದ್ದು ಅದನ್ನು ಮೀರಿ ಬೆಳೆದ ಸಮುದಾಯ ಈ ಮುಸ್ಲಿಂ ಸಮುದಾಯವಾಗಿದೆ ಎಂದರು.
ಶಿಕ್ಷಣ ತಜ್ಞ ಡಾ. ಎಂಎಸ್ಎಂ ಅಬ್ದುರ್ರಶೀದ್ ಝೈನಿ ಸಖಾಫಿ ಮಾತನಾಡಿ, ಅರಿವು ಎಂದರೆ ಬರೀ ಅಕ್ಷರಾಭ್ಯಾಸ, ಸಾಕ್ಷರತೆ ಅಲ್ಲ. ನಮಗೆ ಇಂದು ಎಜ್ಯುಕೇಶನ್ ಇಲ್ಲ. ಆದರೆ ನಾಲೆಡ್ಜ್ ಇದೆ. ಉನ್ನತ ಶಿಕ್ಷಣ ಪಡೆದವರು ಆತ್ಮಹತ್ಯೆಯ ಹಾದಿ ಹಿಡಿಯುತ್ತಿರುವಾಗ ಮುಂದುವರಿದ ತಂತ್ರಜ್ಞಾನದಿಂದ ಮಾಹಿತಿ ದೊರೆತು ಏನೂ ಪ್ರಯೋಜನವಿಲ್ಲ. ನೈತಿಕ ಪ್ರಗತಿ ಬಹುಮುಖ್ಯವಾದುದು ಎಂದರು.
ವಿದ್ವಾಂಸ ಅಬ್ದುಲ್ ಅಝೀಝ್ ದಾರಿಮಿ ಚೊಕ್ಕಬೆಟ್ಟು ಮಾತನಾಡಿ, ಮತೀಯತೆ ಮತ್ತು ಮಾದಕತೆ ಬಹುಬೇಗ ಪಸರಿಸುತ್ತಿದೆ. ಈ ಬಗ್ಗೆ
ಎಚ್ಚರವಹಿಸಿ ಎಲ್ಲರನ್ನೂ ಪ್ರೀತಿಸುವ ಹೃದಯ ವೈಶಾಲ್ಯತೆ ಬೆಳೆಸಿಕೊಳ್ಳಬೇಕು. ಮನಸ್ಸು ಅರಳಿಸಿಕೊಳ್ಳಬೇಕು ಎಂದರು.
ಕಾರ್ಯಕ್ರಮವನ್ನು ವಕ್ಫ್ ನಿಕಟ ಪೂರ್ವಾಧ್ಯಕ್ಷ ಅಬ್ದುಲ್ ನಾಸಿರ್ ಲಕ್ಕಿ ಸ್ಟಾರ್ ನೆರವೇರಿಸಿದರು. ಮಾಜಿ ಸಚಿವ ಬಿ ರಾಮಾನಾಥ ರೈ, ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಎಂ.ಎ ಗಫೂರ್, ಮಾಜಿ ಶಾಸಕ ಮೊಯಿದಿನ್ ಬಾವಾ, ಎಕ್ಸೆಲ್ ಸಮೂಹ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಸುಮಂತ್ ಕುಮಾರ್ ಜೈನ್, ಕೆಪಿಸಿಸಿ ವಕ್ತಾರ ಮುನೀರ್ ಜನ್ಸಾಲೆ ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿದರು.
ಸಯ್ಯಿದ್ ಕಾಜೂರು ತಂಙಳ್ ನೇತೃತ್ವ ವಹಿಸಿ ವಿಶೇಷ ದುಆ ಪ್ರಾರ್ಥನೆ ನಡೆಸಿಕೊಟ್ಟರು.
ವೇದಿಕೆಯಲ್ಲಿ ಅಬ್ದುಲ್ ಕರೀಂ ಗೇರುಕಟ್ಟೆ, ಯು.ಕೆ ಮುಹಮ್ಮದ್ ಹನೀಫ್, ಸುಲ್ತಾನ್ ಗೋಲ್ಡ್ನ ಅಬ್ದುಲ್ ರವೂಫ್ ಹಾಜಿ, ಇಸ್ಮಾಯಿಲ್ ಶಾಫಿ ಮುಳಪಟ್ಣ, ಅಕ್ಬರ್ ಬೆಳ್ತಂಗಡಿ, ಅಶ್ರಫ್ ಕಿನಾರ, ನೂರುದ್ದೀನ್ ಸಾಲ್ಮರ, ಅಬ್ದುಲ್ ರಝಾಕ್ ಮಂಚಿ, ಬದ್ರುದ್ದೀನ್ ಹರೇಕಳ, ಮೋನು ಉಳ್ಳಾಲ, ಅಬ್ದುಲ್ ಖಾದರ್ ಬಿಜೂರು, ಮುಸ್ತಫ ರೂಬಿ, ಮುಕುಂದ ಸುವರ್ಣ, ಅಬೂಬಕ್ಕರ್ ಹಾಜಿ ನೇಜಾರು, ಡಾ. ಉಮರ್ ಬೀಜದಕಟ್ಟೆ, ಕೆ.ಎಂ ಅಬ್ಬಾಸ್, ಶಮೀಮ್ ಯೂಸುಫ್ ಹಾಜಿ ಮದ್ದಡ್ಕ, ಹೆಚ್ ಮುಹಮ್ಮದ್ ವೇಣೂರು, ಕೆ.ಯು ಉಮರ್ ಸಖಾಫಿ, ಅಬ್ದುರ್ರಹ್ಮಾನ್ ಬಾಖವಿ , ಕೆ ಶೇಖಬ್ಬ , ಯೂಸುಫ್ ಶರೀಫ್, ಕೆ.ಯು ಮುಹಮ್ಮದ್ ಸಖಾಫಿ, ಇಬ್ರಾಹಿಂ ಮದನಿ, ಅಬ್ದುಶ್ಶುಕೂರ್ ಉಜಿರೆ, ವಝೀರ್ ಬಂಗಾಡಿ, ಮೊದಲಾದವರು ಉಪಸ್ಥಿತರಿದ್ದರು.
ಉರೂಸ್ ಸಮಿತಿ ಉಪಾಧ್ಯಕ್ಷ ಅಬ್ದುಲ್ ಅಝೀಝ್ ಝುಹುರಿ, ಕೋಶಾಧಿಕಾರಿ ಡಿ.ವೈ ಉಮರ್, ಜೊತೆ ಕಾರ್ಯದರ್ಶಿ ಅಶ್ರಫ್ ಕಿಲ್ಲೂರು, ಹಿರಿಯ ಸದಸ್ಯರಾದ ಅಬೂಬಕ್ಕರ್ ಮಲ್ಲಿಗೆಮನೆ ಮತ್ತು ಬದ್ರುದ್ದೀನ್ ಕಾಜೂರು, ಬಶೀರ್ ಅಹ್ಸನಿ ಮೊದಲಾದವರು ವೇದಿಕೆಯಲ್ಲಿದ್ದರು.
ಕಾಜೂರು ಉರೂಸ್ ಸಮಿತಿ ಅಧ್ಯಕ್ಷ ಕೆ.ಯು ಇಬ್ರಾಹಿಂ ಸ್ವಾಗತಿಸಿದರು. ಹಿರಿಯ ಪತ್ರಕರ್ತ ಅಶ್ರಫ್ ಆಲಿಕುಂಞಿ ಮುಂಡಾಜೆ ಕಾರ್ಯಕ್ರಮ ನಿರೂಪಿಸಿ ಪ್ರಧಾನ ಕಾರ್ಯದರ್ಶಿ ಜೆ.ಹೆಚ್ ಅಬೂಬಕ್ಕರ್ ಸಿದ್ದೀಕ್ ವಂದಿಸಿದರು.
-ಅಯಾನ್ ರಝಾ ಖಾದ್ರಿ ಅರಸಿಕೆ ತಂಡದಿಂದ ನಅತ್ ಶರೀಫ್ ಆಲಾಪನೆ ನಡೆಯಿತು. ಮಂಕೂಸ್ ಮತ್ತು ಕಾಜೂರು ಮೌಲೀದ್ ಪಾರಾಯಣ ನಡೆದು ಅನ್ನದಾನಕ್ಕೆ ಚಾಲನೆ ನೀಡಲಾಯಿತು.
ಕರಾವಳಿ ಜಿಲ್ಲೆಗಳಿಂದಲ್ಲದೆ ರಾಜ್ಯ ಹಾಗೂ ಅಂತಾರಾಜ್ಯ ಮಟ್ಟದಿಂದಲೂ ಜನ ಹರಿದು ಬಂದಿದ್ದರು.















Post Comment