ಗೇರುಕಟ್ಟೆ ವಿದ್ಯಾರ್ಥಿ ಸುಮಂತ್ ಕೊಲೆ ಪ್ರಕರಣ: ಆರೋಪಿಗಳ ಬಂಧನಕ್ಕೆ ಒತ್ತಾಯಿಸಿ ಫೆ4ರಂದು ಬೆಳ್ತಂಗಡಿಯಲ್ಲಿ ಸಿಪಿಐ(ಎಂ) ನೇತೃತ್ವದಲ್ಲಿ ಪ್ರತಿಭಟನೆ

ಬೆಳ್ತಂಗಡಿ : ಗೇರುಕಟ್ಟೆ ಸಮೀಪ ಕಳಿಯ ಗ್ರಾಮದ ಬಾಲಕ ಸುಮಂತ್ ಕೊಲೆಯಾಗಿ ವಾರಗಳೇ ಕಳೆದರೂ ಕೊಲೆಗಾರರ ಪತ್ತೆಯಾಗದಿರುವುದು ವಿಷಾದನೀಯ ಸಂಗತಿ ಎಂದು ಸಿಪಿಐಎಂ ತಾಲೂಕು ಕಾರ್ಯದರ್ಶಿ ಬಿ.ಎಂ.ಭಟ್ ಕಳವಳ ವ್ಯಕ್ತಪಡಿಸಿದ್ದಾರೆ.
ಬೆಳ್ತಂಗಡಿ ತಾಲೂಕಿನಲ್ಲಿ ಅತ್ಯಾಚಾರ, ಕೊಲೆಯಾದರೆ ಬಹುತೇಕ ಪ್ರಕರಣಗಳಲ್ಲಿ ಅಪರಾಧಿಗಳು ಪತ್ತೆ ಆಗುತ್ತಿಲ್ಲ ಎಂಬುದು ಆಘಾತಕಾರಿಯಾದ ವಿಚಾರ. ಈಗಿನ ದ.ಕ. ಎಸ್.ಪಿ. ದಕ್ಷ ಅಧಿಕಾರಿ ಎಂದು ಹೆಸರು ಗಳಿಸಿದ್ದು ಬೆಳ್ತಂಗಡಿಗೆ ಅನ್ವಯವಾಗುವುದಿಲ್ಲವೇ ಎಂದು ಅವರು ಪ್ರಶ್ನಿಸಿದ್ದಾರೆ.
ಇದೀಗ ಸುಮಂತ್ ಕೊಲೆ ಪ್ರಕರಣದಲ್ಲಾದರೂ ಪೋಲೀಸ್ ಇಲಾಖೆ ತನ್ನ ಮೇಲಿನ ಆರೋಪದಿಂದ ಹೊರಬರುವಂತಾಗಬೇಕು. ಈ ಬಗ್ಗೆ ಸುಮಂತ್ ನ ಮನೆಯವರಿಗೆ ನ್ಯಾಯ ಒದಗಿಸಲು ಸಿಪಿಐಎಂ ಒಂದು ರಾಜಕೀಯ ಪಕ್ಷವಾಗಿ ಧ್ವನಿ ಎತ್ತಲು ನಿರ್ಧರಿಸಿದೆ ಎಂದವರು ತಿಳಿಸಿದರು.
ಫೆ: 4ರಂದು ಬೆಳಿಗ್ಗೆ 10ಗಂಟೆಗೆ ಸುಮಂತ್ ಹಂತಕರ ಬಂಧನಕ್ಕಾಗಿ ಬೆಳ್ತಂಗಡಿ ತಾಲೂಕು ಕಚೇರಿ ಎದುರು ಪ್ರತಿಭಟನೆ ನಡೆಸಿ ಸರಕಾರವನ್ನು ಒತ್ತಾಯಿಸಲಿದ್ದೇವೆ ಎಂದು ತಿಳಿಸಿದ್ದಾರೆ.
ಸುಮಂತ್ ಕೊಲೆಗಾರರನ್ನು ಪತ್ತೆಹಚ್ಚಿ ಆತನ ಕುಟುಂಬಕ್ಕೆ ನ್ಯಾಯ ಸಿಗಬೇಕು ಎಂದು ಬಯಸುವ ಪ್ರಜ್ಞಾವಂತ ನಾಗರಿಕರು ಹೋರಾಟದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡ ನ್ಯಾಯಕ್ಕಾಗಿ ಧ್ವನಿ ಎತ್ತಬೇಕಾಗಿ ಬಿ.ಎಂ. ಭಟ್ ಕರೆನೀಡಿದ್ದಾರೆ.













Post Comment