ಧರ್ಮಸ್ಥಳ ಸಮೂಹ ಸಮಾಧಿ ಪ್ರಕರಣ : ಗೃಹಸಚಿವರ ಭೇಟಿಯಾದ ಎಸ್ಐಟಿ ಮುಖ್ಯಸ್ಥ ಪ್ರಣಬ್ ಮೊಹಂತಿ

ಬೆಂಗಳೂರು : ಧರ್ಮಸ್ಥಳ ಸಮೂಹ ಸಮಾಧಿ ಬುರುಡೆ ಪ್ರಕರಣದ ತನಿಖೆ ನಡೆಸುತ್ತಿರುವ ಎಸ್.ಐ.ಟಿ. ಅಧಿಕಾರಿ ಪ್ರಯಾಣಿಸುತ್ತಿದ್ದ ವಾಹನವು ಚಾರ್ಮಾಡಿಯಲ್ಲಿ ಭಯಾನಕವಾಗಿ
ಉರುಳಿ ಬಿದ್ದು ಅಧಿಕಾರಿಗಳು ಅಪಾಯದಿಂದ ಪವಾಡ ಸದೃಶ ಪಾರಾಗಿದ್ದು ಈ ಮೂಲಕ ಹಾದಿ ತಪ್ಪಿದ (?) ತನಿಖೆಯ ಬಗ್ಗೆ ಅಣ್ಣಪ್ಪ ಸ್ವಾಮಿ ಎಚ್ಚರಿದನೇ? ಎಂಬ ವ್ಯಾಪಕ ಚರ್ಚೆ ಸಾಮಾಜಿಕ ಮಾಧ್ಯಮಗಳಲ್ಲಿ ಒಂದೆಡೆ ನಡೆಯುತ್ತಿದೆ. ಇನ್ನೊಂದೆಡೆ
ಪ್ರಕರಣಕ್ಕೆ ಸಂಬಂಧಿಸಿದಂತೆ ನ್ಯಾಯಾಲಯವು ಎಸ್ ಐ ಟಿ ತನಿಖೆಯ ವರದಿ ಕೇಳಿರುವ ಬೆನ್ನಲ್ಲೇ ತನಿಖಾ ಪ್ರಕ್ರಿಯೆ ಇನ್ನಷ್ಟು ತೀವ್ರಗೊಳ್ಳುತ್ತಿದೆ.
ಈ ಮಹತ್ವದ ಬೆಳವಣಿಗೆಯ ಮಧ್ಯೆ ವಿಶೇಷ ತನಿಖಾ ದಳದ ಮುಖ್ಯಸ್ಥ ಡಾ. ಪ್ರಣಬ್ ಮೊಹಂತಿ ಅವರು ನೂತನ ಗೃಹ ಸಚಿವ ಪ್ರಿಯಾಂಕ್ ಖರ್ಗೆ ಅವರನ್ನು ಭೇಟಿಯಾಗಿ ತನಿಖೆಯ ಬಗ್ಗೆ ಸುದೀರ್ಘ ಚರ್ಚೆ ನಡೆಸಿರುವುದು ಇದೀಗ ತನಿಖಾ ವಲಯದಲ್ಲಿ ಭಾರಿ ಕುತೂಹಲ ಮತ್ತು ಹೋರಾಟಗಾರರಲ್ಲಿ ಭರವಸೆಯನ್ನು ಮೂಡಿಸಿದೆ.

ಬೆಂಗಳೂರಿನಲ್ಲಿ ನಡೆದ ಉನ್ನತ ಮಟ್ಟದ ಸಭೆಯಲ್ಲಿ ಎಸ್ಐಟಿ ಮುಖ್ಯಸ್ಥ ಪ್ರಣಬ್ ಮೊಹಂತಿ ಅವರು ಪ್ರಕರಣದ ಇದುವರೆಗಿನ ತನಿಖಾ ಪ್ರಗತಿಯ ಸಂಪೂರ್ಣ ವಿವರಗಳನ್ನು ಗೃಹ ಸಚಿವರ ಮುಂದಿಟ್ಟರು ಎಂದು ತಿಳಿದು ಬಂದಿದೆ.
ಸುಮಾರು 20 ನಿಮಿಷಗಳ ಕಾಲ ನಡೆದ ಸಭೆಯಲ್ಲಿ
ಪ್ರಮುಖವಾಗಿ ನ್ಯಾಯಾಲಯಕ್ಕೆ ಸಲ್ಲಿಸಬೇಕಾದ ಎಸ್ ಐ ಟಿ ವರದಿಯ ಸಿದ್ಧತೆಗಳ ಕುರಿತು ಸಚಿವರೊಂದಿಗೆ ಸಮಾಲೋಚನೆ ನಡೆಸಲಾಯಿತು. ವಿಶೇಷವೆಂದರೆ ಈ ಸಂದರ್ಭ ಎಸ್ಐಟಿ ಮುಖ್ಯಸ್ಥರು ಧರ್ಮಸ್ಥಳ ಪ್ರಕರಣದ ತನಿಖೆಯ ಬಗ್ಗೆ ಕೇವಲ ಮೌಖಿಕ ಮಾಹಿತಿ ನೀಡದೆ, ಪ್ರಕರಣಕ್ಕೆ ಸಂಬಂಧಿಸಿದ ಕೆಲವು ಅತ್ಯಂತ ಪ್ರಮುಖ ಹಾಗೂ ಗೌಪ್ಯ ದಾಖಲೆಗಳೊಂದಿಗೆ ಗೃಹ ಸಚಿವರನ್ನು ಭೇಟಿಯಾಗಿದ್ದು ತನಿಖಾ ವರದಿಯ ಮೇಲೆ ಆಶಾ ಭಾವನೆ ಮೂಡಲು ಕಾರಣವಾಗಿದೆ.
ಈ ದಾಖಲೆಗಳನ್ನು ಪರಿಶೀಲಿಸಿದ ಬಳಿಕ, ಪ್ರಕರಣದ ಮುಂದಿನ ತನಿಖೆಯು ಯಾವ ದಿಕ್ಕಿನಲ್ಲಿ ಸಾಗಬೇಕು ಮತ್ತು ಕಾನೂನು ಪ್ರಕ್ರಿಯೆಗಳನ್ನು ಹೇಗೆ ಮುನ್ನಡೆಸಬೇಕು ಎಂಬ ಬಗ್ಗೆ ಗೃಹ ಸಚಿವರು ಮತ್ತು ಎಸ್ ಐ ಟಿ ಮುಖ್ಯಸ್ಥ ಪ್ರಣಬ್ ಮೊಹಂತಿ ನಡುವೆ ಮಹತ್ವದ ಸಮಾಲೋಚನೆ ನಡೆದಿದೆ ಎಂದು ತಿಳಿದುಬಂದಿದೆ.















Post Comment