ಅಳದಂಗಡಿ ಸರಕಾರಿ ಆಸ್ಪತ್ರೆಗೆ ಕಾದಿರಿಸಿದ ಜಾಗಕ್ಕೆ ಒತ್ತುವರಿ ಕಾಟ!

ಬೆಳ್ತಂಗಡಿ : ಭಜನಾ ಮಂದಿರೋದ್ಧಾರಕ್ಕಾಗಿ ದಲಿತೋದ್ಧಾರ ವಿರೋಧಿಯಾಗಿ ಅಳದಂಗಡಿ ಅಂಬೇಡ್ಕರ್ ಭವನವನ್ನು ರಾತ್ರೋ ರಾತ್ರಿ ಕೆಡವಿ ಮರುದಿನ ಕೆಲವು ದಲಿತ ಮುಖಂಡರನ್ನು ಬೆಳ್ತಂಗಡಿಗೆ ಕರೆದು ರಹಸ್ಯ ಮಾತುಕತೆ ನಡೆಸಿ ಆ ಮುಖಂಡರ ಕಿವಿಗಳಿಗೆ ದಾಸವಾಳವಿಟ್ಟು ಅಂಬೇಡ್ಕರ್ ಭವನವನ್ನು ಸಂಪೂರ್ಣ ಕಬಳಿಸುವಲ್ಲಿ ಯಶಸ್ವಿಯಾಗಿರುವ ಪ್ರಭಾವಿ ವ್ಯಕ್ತಿ, ನಿವೃತ್ತ ಪಿಡಿಒ ಒಬ್ಬರು ಇದೀಗ ಸ್ಥಳೀಯ ಸರಕಾರಿ ಆಸ್ಪತ್ರೆಗೆ ಕಾದಿರಿಸಿದ ಸರಕಾರಿ ಜಾಗವನ್ನು ಅಕ್ರಮವಾಗಿ ಒತ್ತುವರಿ ಮಾಡಿಕೊಂಡು ಕೃಷಿ ಚಟುವಟಿಕೆ ಮಾಡಲು ಮುಂದಾಗಿರುವ ಸಂಗತಿಯೊಂದು ಬೆಳಕಿಗೆ ಬಂದಿದ್ದು ಸ್ಥಳೀಯವಾಗಿ ವ್ಯಾಪಕ ಚರ್ಚೆಗೆ ಕಾರಣವಾಗಿದೆ.

ಬೆಳ್ತಂಗಡಿ ತಾಲೂಕು ಬಡಗಕಾರಂದೂರು ಗ್ರಾಮದಲ್ಲಿ ನಿವೃತ್ತ ಪಿಡಿಒ, ಭೂಮಾಲೀಕ ರಾಜಶೇಖರ್ ಜೈನ್ ಎಂಬವರು
ಅಳದಂಗಡಿ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಸಂಬಂಧಪಟ್ಟ
ಸಿಬ್ಬಂದಿಗಳ ವಸತಿಗೃಹಗಳು ಮತ್ತಿತರ ಕಟ್ಟಡಗಳಿಗಾಗಿ ಕಾದಿರಿಸಿದ ಸರ್ವೆ ನಂಬರ್ 120/2 ಪಿ1 ರಲ್ಲಿ ವಿಸ್ತೀರ್ಣ 1.62 ಎಕ್ರೆ ಮತ್ತು ಸರ್ವೆ ನಂಬರ್ 197/ಡಿ.ಎಪಿ ರಲ್ಲಿ 0.45 ಎಕ್ರೆ ಜಾಗವನ್ನು ಅಕ್ರಮವಾಗಿ ಒತ್ತುವರಿ ಮಾಡಿಕೊಂಡು ಕೃಷಿ ಚಟುವಟಿಕೆ ಮಾಡಲು ತಯಾರಿ ಮಾಡಿಕೊಳ್ಳುತ್ತಿರುವ ಸಂಗತಿ ಇದೀಗ ನಾಗರೀಕರ ಆಕ್ರೋಶಕ್ಕೆ ಕಾರಣವಾಗಿದೆ.
ಈ ಬಗ್ಗೆ ಊರವರು ಇದೀಗ ಜಿಪಿಎಸ್ ಫೋಟೋಗಳ ಸಹಿತ ಪುತ್ತೂರು ಸಹಾಯಕ ಆಯುಕ್ತರು ಜಿಲ್ಲಾ ಆರೋಗ್ಯಾಧಿಕಾರಿ,
ವೇಣೂರು ಪೊಲೀಸರು, ಬೆಳ್ತಂಗಡಿ ತಹಶಿಲ್ದಾರ್, ತಾಲೂಕು ಆರೋಗ್ಯಾಧಿಕಾರಿ ಮುಂತಾದ ಅಧಿಕಾರಿಗಳಿಗೆ ದೂರು ನೀಡಿದ್ದಾರೆ.
ದಾಖಲೆ ಸಮೇತ ನೀಡಲಾಗಿರುವ ದೂರಿನಲ್ಲಿ ಪ್ರಭಾವಿ ಖಾಸಗಿ ವ್ಯಕ್ತಿ ಒತ್ತುವರಿ ಮಾಡಿಕೊಂಡಿರುವ ಜಾಗವು ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಕಾಯ್ದುರಿಸಿದ ಜಾಗವಾಗಿದ್ದು ಮುಂದಿನ ದಿನಗಳಲ್ಲಿ ಆಸ್ಪತ್ರೆ ಸಿಬ್ಬಂದಿಯ ವಸತಿಗೃಹ ಹಾಗೂ ಇನ್ನಿತರ ಕಟ್ಟಡಗಳಿಗೆ ಅವಶ್ಯಕತೆ ಇರುತ್ತದೆ, ಈ ಜಾಗದಲ್ಲಿ
ಕಳೆದ 20 ವರ್ಷಗಳಿಂದ ಯಾವುದೇ ಕೃಷಿ ಚಟುವಟಿಕೆಗಳು ಇರಲಿಲ್ಲ ಎಂದು ವಿವರಿಸಲಾಗಿದ್ದು 2011ರಿಂದ 2024ರವರೆಗಿನ ಸ್ಯಾಟ್ಲೈಟ್ ಇಮೇಜ್ ಕೂಡ ದೂರಿನೊಂದಿಗೆ ಲಗತ್ತಿಸಿ ದೂರು ನೀಡಿದ್ದಾರೆ.
ಖಾಸಗಿ ವ್ಯಕ್ತಿ ಸರ್ಕಾರಿ ಆಸ್ಪತ್ರೆಯ ಜಾಗವನ್ನು ಕಬಳಿಸುವ ದುರುದ್ದೇಶದಿಂದ ಒತ್ತುವರಿ ಮಾಡಿಕೊಂಡಿದ್ದು ಈ ಬಗ್ಗೆ ಸೂಕ್ತ ಕಾನೂನು ಕ್ರಮ ಕೈಗೊಂಡು ಆಸ್ಪತ್ರೆಯ ಜಾಗವನ್ನು ರಕ್ಷಿಸಬೇಕು ಎಂದು ದೂರಿನಲ್ಲಿ ಒತ್ತಾಯಿಸಲಾಗಿದೆ.
















Post Comment