ಬೆಳಗ್ಗಿನ ಜಾವ ಬೆಳ್ತಂಗಡಿ ತಲುಪಲಿರುವ ವಸಂತ ಬಂಗೇರ ಪಾರ್ಥೀವ ಶರೀರ: ಅಗಲಿದ ನಾಯಕನ ಗೌರವಪೂರ್ವಕ ಅಂತಿಮ ದರ್ಶನಕ್ಕಾಗಿ ತಾಲೂಕು ಕ್ರೀಡಾಂಗಣದಲ್ಲಿ ಸಿದ್ಧತೆ: ಪೂರ್ವಾಹ್ನ ಗಂಟೆ 10.30ಕ್ಕೆ ಸಾರ್ವಜನಿಕರಿಂದ ಅಂತಿಮ ದರ್ಶನ
ಬೆಳ್ತಂಗಡಿ : ಬೆಂಗಳೂರಿನ ಖಾಸಗಿ ಆಸ್ಪತ್ರೆಯಿಂದ ಹೊರಟ ಮಾಜಿ ಶಾಸಕ ಕೆ. ವಸಂತ ಬಂಗೇರ ಆವರ ಪ್ರಾರ್ಥಿವ ಶರೀರವು ಅವರ ಕರ್ಮ ಭೂಮಿಯಾದ ಬೆಳ್ತಂಗಡಿ ನಗರಕ್ಕೆ ಬೆಳಗ್ಗಿನ ಜಾವ ಸುಮಾರು 3ರಿಂದ 4ಗಂಟೆಯ ಮಧ್ಯೆ ತಲುಪುವ ನಿರೀಕ್ಷೆ ಇದ್ದು ತಾಲೂಕು ಕ್ರೀಡಾಂಗಣದಲ್ಲಿ ಅಂತಿಮ ದರ್ಶನಕ್ಕೆ ಅಗತ್ಯ ಸಿದ್ಧತೆಗಳು ನಡೆಯುತ್ತಿದೆ.
ಇನ್ನೊಂದೆಡೆ ಕೇದೆ ಮನೆತನದ ಕುಟುಂಬಸ್ಥರು, ಆಪ್ತ ಅಭಿಮಾನಿಗಳು ಗೌರವ ಸಲ್ಲಿಸಲು ಕಾಯುತ್ತಿದ್ದಾರೆ. ಚಾರ್ಮಾಡಿ ಮೂಲಕ ಬರಲಿರುವ ಪಾರ್ಥೀವ ಶರೀರವು ಗುರುವಾರ ಬೆಳಿಗ್ಗೆ ಸುಮಾರು 4 ಗಂಟೆಯ ಹೊತ್ತಿಗೆ ಬೆಳ್ತಂಗಡಿಗೆ ತಲುಪಲಿದೆ. ಪಾರ್ಥೀವ ಶರೀರದ ಗೌರವ ಪೂರ್ವಕ ಅಂತಿಮ ದರ್ಶನಕ್ಕಾಗಿ ಅಗತ್ಯ ಪೂರ್ವ ತಯಾರಿ ನಗರದ ತಾಲೂಕು ಕ್ರೀಡಾಂಗಣದಲ್ಲಿ ನಡೆಯುತ್ತಿದೆ.
ಪ್ರಾರ್ಥಿವ ಶರೀರವನ್ನು ಕುಟುಂಬದ ಸಾಂಪ್ರದಾಯಿಕ ವಿಧಿ ವಿಧಾನಗಳು ಅವರ ಹಳೇಕೋಟೆ ನಿವಾಸದಲ್ಲಿ ನೆರವೇರಿಸಿ ಪೂರ್ವಾಹ್ನ 10.30ಕ್ಕೆ ಕುಟುಂಬದ ಸದಸ್ಯರು ಸಾರ್ವಜನಿಕ ದರ್ಶನಕ್ಕೆ ಬಿಟ್ಟುಕೊಟ್ಟ ಬಳಿಕ ನೇರವಾಗಿ ಬೆಳ್ತಂಗಡಿ ತಾಲೂಕು ಕ್ರೀಡಾಂಗಣದಲ್ಲಿ ಅಂತಿಮ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದೆ. ಇಂದು ಅಪರಾಹ್ನ 3.00ಗಂಟೆಗೆ ಬೆಳ್ತಂಗಡಿ ನಗರ ಮೂಲಕ ಅಂತಿಮ ಯಾತ್ರೆಯು ಜರಗಲಿದೆ.
ಈ ಮಧ್ಯೆ ಕೆ.ವಸಂತ ಬಂಗೇರ ಅವರ ಅಭಿಮಾನಿಗಳಿಂದ ಅಂತಿಮ ಯಾತ್ರೆ ಮತ್ತು ಸಂಸ್ಕಾರದ ತಯಾರಿಗಳ ಬಗ್ಗೆ ತುರ್ತು ಸಭೆಯು ಗುರುನಾರಾಯಣ ಸಭಾ ಭವನದಲ್ಲಿ ನಡೆಯಿತು. ಬೆಳಿಗ್ಗೆ 10.30 ಗಂಟೆಗೆ ಹಳೇಕೋಟೆ ಅವರ ಮನೆಯಿಂದ ತಾಲೂಕು ಕ್ರೀಡಾಂಗಣಕ್ಕೆ ಪಾರ್ಥಿವ ಶರೀರವನ್ನು ತಂದು ಸಾರ್ವಜನಿಕರಿಗೆ ತಾಲೂಕು ಕ್ರೀಡಾಂಗಣದಲ್ಲಿ ಅಂತಿಮ ದರ್ಶನಕ್ಕೆ ವ್ಯವಸ್ಥೆ ಕಲ್ಪಿಸಲಾಗುತ್ತದೆ.
ಬಳಿಕ ಅಪರಾಹ್ನ ಬೆಳ್ತಂಗಡಿ ನಗರದಲ್ಲಿ ಪಾರ್ಥಿವ ಶರೀರದ ಅಂತಿಮ ಯಾತ್ರೆಯ ಮೆರವಣಿಗೆಯು ನಡೆಸಿ ಅವರಿಗೆ ಗೌರವ ಸಲ್ಲಿಸಲಾಗುತ್ತದೆ. ನಂತರ ಅಂತ್ಯ ಸಂಸ್ಕಾರ ಕ್ರಿಯೆ ಸಕಲ ಸರ್ಕಾರಿ ಗೌರವಗಳೊಂದಿಗೆ ನಡೆಯಲಿದೆ . ಮೃತರ ಗೌರವಾರ್ಥ ನಗರದ ಬಹುತೇಕ ಹೋಟೆಲ್ ಅಂಗಡಿ ಮುಂಗಟ್ಟುಗಳು ಸ್ವಯಂ ಪ್ರೇರಿತವಾಗಿ ಬಂದ್ ಮಾಡಿ ಅವರಿಗೆ ಗೌರವ ಸಲ್ಲಿಸುವ ನಿರೀಕ್ಷೆ ಇದೆ. ಮೃತರ ಅಂತಿಮ ದರ್ಶನಕ್ಕೆ ಮುಖ್ಯ ಮಂತ್ರಿ ಉಪ ಮುಖ್ಯ ಮಂತ್ರಿ ಸೇರಿದಂತೆ ಸಚಿವರು ಗಣ್ಯರು ಭಾಗವಹಿಸುವ ನಿರೀಕ್ಷೆ ಇದೆ. ಸಾರ್ವಜನಿಕರು, ಅಭಿಮಾನಿಗಳು, ರಾಜ್ಯ, ಜಿಲ್ಲೆಗಳ ವಿವಿಧ ಕ್ಷೇತ್ರದ ಗಣ್ಯರು, ತಾಲೂಕು ಕ್ರೀಡಾಂಗಣದಲ್ಲಿ ನಡೆಯಲಿರುವ ಅಂತಿಮ ದರ್ಶನದಲ್ಲಿ ಪಾಲ್ಗೋಳ್ಳುವ ನಿರೀಕ್ಷೆ ಇದೆ.
ಮಾಜಿ ಶಾಸಕ ಕೆ.ವಸಂತ ಬಂಗೇರ ಅವರ ನಿಧನಕ್ಕೆ ಜಗದ್ಗುರು ಡಾ ಸ್ವಸ್ತಿಶ್ರೀ ಚಾರುಕೀರ್ತಿ ಭಟ್ಟಾರಕ ಪಂಡಿತಾಚಾರ್ಯ ಪಟ್ಟಾಚಾರ್ಯ ವರ್ಯ ಮಹಾ ಸ್ವಾಮೀಜಿ ಶ್ರೀ ದಿಗಂಬರ ಜೈನ ಮಠ ಮೂಡಬಿದಿರೆ, ರಾಜ್ಯಸಭಾ ಸದಸ್ಯ ಧರ್ಮಸ್ಥಳದ ಡಾ. ಡಿ.ವೀರೇಂದ್ರ ಹೆಗ್ಗಡೆ, ಶಾಸಕ ಹರೀಶ್ ಪೂಂಜ, ಉದ್ಯಮಿ ಶಶಿಧರ್ ಶೆಟ್ಟಿ ಬರೋಡಾ ಮುಂತಾದವರು ಸಂತಾಪ ವ್ಯಕ್ತಪಡಿಸಿದ್ದಾರೆ. ಜೊತೆಗೆ ವಿವಿಧ ಧರ್ಮಗುರುಗಳು, ವಿವಿಧ ಕ್ಷೇತ್ರದ ಗಣ್ಯರು ಸಂತಾಪ ಸೂಚಿಸಿದ್ದಾರೆ.
Post Comment