ಉಜಿರೆ ‘ಬೆನಕ ಹೆಲ್ತ್ ಸೆಂಟರ್’ ನಲ್ಲಿ ಗರ್ಭಿಣಿ ಸ್ತ್ರೀಯರಿಗೆ ಆರೋಗ್ಯ ಮಾರ್ಗದರ್ಶನ ಕಾರ್ಯಾಗಾರ

ಬೆಳ್ತಂಗಡಿ : ಉಜಿರೆಬೆನಕ ಹೆಲ್ತ್ ಸೆಂಟರ್ ಉಜಿರೆಯಲ್ಲಿ ಗರ್ಭಿಣಿ ಸ್ತ್ರೀಯರು ಅನುಸರಿಸಬೇಕಾದ ಮುಂಜಾಗ್ರತಾ ಕ್ರಮಗಳ ಬಗ್ಗೆ ಮಾರ್ಗದರ್ಶನ ಕಾರ್ಯಾಗಾರವು ಫೆ: 15ರಂದು ನಡೆಯಿತು.
ಕಾರ್ಯಾಗಾರ ಉದ್ಘಾಟಿಸಿದ ಡಾ. ಭಾರತಿ ಅವರು ಮಾತನಾಡಿ ಇತ್ತೀಚಿನ ದಿನಗಳಲ್ಲಿ ಗರ್ಭಿಣಿ ಸ್ತ್ರೀಯರಿಗೆ ಗರ್ಭಾವಸ್ಥೆಯಲ್ಲಿ ತಮ್ಮ ಶರೀರದಲ್ಲಾಗುವ ಬದಲಾವಣೆ ಕುರಿತು ಅನೇಕ ಪ್ರಶ್ನೆಗಳು ಮತ್ತು ಸಂಶಯಗಳು ಬರುತ್ತಿದ್ದು ಪ್ರತಿಯೊಬ್ಬರಿಗೂ ಪ್ರತ್ಯೇಕವಾಗಿ ವಿವರ ನೀಡುವ ಬದಲು ಪ್ರಾಯೋಗಿಕವಾಗಿ ಒಟ್ಟಿಗೆ ಸೇರಿಸಿ ಮಾಹಿತಿ ನೀಡುವುದರಿಂದ ಎಲ್ಲರಿಗೂ ಪ್ರಯೋಜನವಾದೀತು ಮತ್ತು ಅವರಲ್ಲಿ ಆತ್ಮವಿಶ್ವಾಸ ಹೆಚ್ಚಾದೀತು ಎಂಬ ಉದ್ದೇಶಿಸಿ ಕಾರ್ಯಾಗಾರವನ್ನು ಆಯೋಜಿಸಲಾಗಿದೆ, ಇದರ ಪ್ರಯೋಜನವನ್ನು ಮುತುವರ್ಜಿಯಿಂದ ಪಡೆದುಕೊಳ್ಳುವಂತೆ ಮನವಿ ಮಾಡಿದರು.
ಪ್ರಾರಂಭದಲ್ಲಿ ಆಸ್ಪತ್ರೆಯ ಸ್ತ್ರೀರೋಗ ಮತ್ತು ಪ್ರಸೂತಿ ತಜ್ಞೆ ಹಾಗೂ ಐವಿಎಫ್ ತಜ್ಞೆಯಾದ ಡಾ. ನವ್ಯ ಭಟ್ ಅವರು ಗರ್ಭಧಾರಣೆಯಿಂದ ಹೆರಿಗೆ ಆಗುವವರೆಗೆ ಯಾವ ರೀತಿ ಭ್ರೂಣದ ಬೆಳವಣಿಗೆಯಾಗುತ್ತದೆ ಮತ್ತು ತಿಂಗಳವಾರು ವಹಿಸಬೇಕಾದ ಜಾಗ್ರತೆಗಳ ಬಗ್ಗೆ ಪಿಪಿಟಿ ಮೂಲಕ ವಿಸ್ತಾರವಾದ ಮಾಹಿತಿ ಮತ್ತು ಪೌಷ್ಟಿಕ ಆಹಾರಗಳ ಸೇವನೆ ಕುರಿತು ಅವರ ಪ್ರಶ್ನೆಗಳಿಗೆ ಮತ್ತು ಸಂಶಯಗಳಿಗೆ ಸೂಕ್ತ ಸಲಹೆ ಸೂಚನೆ ನೀಡಿದರು.
ಆಸ್ಪತ್ರೆಯ ಇನ್ನೋರ್ವ ಸ್ತ್ರೀರೋಗ ಮತ್ತು ಪ್ರಸೂತಿ ತಜ್ಞೆ ಡಾ. ಅಂಕಿತ ಜಿ ಭಟ್ ಅವರು ಸಾಮಾನ್ಯ ಹೆರಿಗೆ ಮತ್ತು ಶಸ್ತ್ರಚಿಕಿತ್ಸೆ (ಸಿಸೇರಿಯನ್) ಮೂಲಕ ಹೆರಿಗೆ ಯಾಕೆ ಮತ್ತು ಯಾವಾಗ ಆಗುತ್ತದೆ ಹಾಗೂ ಹೆರಿಗೆಯ ಸಮಯದಲ್ಲಿ ಕೈಗೊಳ್ಳಬೇಕಾದ ಮುಂಜಾಗ್ರತೆಗಳ ಬಗ್ಗೆ ಸಚಿತ್ರಗಳ ಮೂಲಕ ಮನವರಿಕೆ ಮಾಡಿಕೊಟ್ಟರು.
ಆಸ್ಪತ್ರೆಯ ಮಕ್ಕಳ ತಜ್ಞರಾದ ಡಾ. ಸೂರಜ್ ಎಸ್ ಶೆಟ್ಟಿ ಅವರು ನವಜಾತ ಶಿಶುವಿನ ಆರೈಕೆ, ಪಾಲನೆ ಪೋಷಣೆ ಬಗ್ಗೆ ಮಾಹಿತಿ ನೀಡಿದರು. ಫಿಸಿಯೋಥೆರಪಿಸ್ಟ್ ಡಾ.ನಯನ ಭಟ್ ಅವರು ಗರ್ಭಾವಸ್ಥೆಯಲ್ಲಿ ಗರ್ಭಿಣಿ ಸ್ತ್ರೀಯರು ಅನುಸರಿಸಬೇಕಾದ ವ್ಯಾಯಾಮಗಳು, ಶಾರೀರಿಕ ಚಟುವಟಿಕೆಗಳ ಬಗ್ಗೆ ಪ್ರಾತ್ಯಕ್ಷಿಕವಾಗಿ ವಿವರಣೆ ನೀಡಿದರು.
ಕಾರ್ಯಾಗಾರದಲ್ಲಿ ಪಾಲ್ಗೊಂಡ ಗರ್ಭಿಣಿ ಸ್ತ್ರೀಯರು
ಈ ರೀತಿ ಮಾಹಿತಿ ವಿನಿಮಯದ ಕಾರ್ಯಕ್ರಮವನ್ನು ಪ್ರತಿ ತಿಂಗಳು ನಡೆಸಿದರೆ ನಮ್ಮಲ್ಲಿ ಆತ್ಮವಿಶ್ವಾಸ ಹೆಚ್ಚುತ್ತದೆ ಮತ್ತು ಹೆರಿಗೆಯೆಂದರೆ ಅದೊಂದು ಪ್ರಕೃತಿ ದತ್ತವಾದ ಕೊಡುಗೆ ಎಂಬುವುದು ನಮ್ಮ ಮನಸ್ಸಿನಲ್ಲಿ ಮೂಡುತ್ತದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು. ಆಸ್ಪತ್ರೆಯ ಪಿ.ಆರ್.ಒ. ಎಸ್ ಜಿ .ಭಟ್.ಸ್ವಾಗತಿಸಿ ವಂದಿಸಿದರು.















Post Comment