ಕಳಿಯ;ಅನಧಿಕೃತ ಬೋರ್ವೆಲ್ ಪರಿಶೀಲನೆಗೆ ಹೋದ ದಲಿತ ಪಿಡಿಓ ಮತ್ತು ಸಿಬ್ಬಂದಿ ಕರ್ತವ್ಯಕ್ಕೆ ಅಡ್ಡಿ!

ಬೆಳ್ತಂಗಡಿ : ಜನತಾ ಕಾಲೋನಿಯಲ್ಲಿ ಸರಕಾರಿ ಬೋರ್ ವೆಲ್ ಮತ್ತು ಪಂಪ್ ಹೌಸ್ ಸಮೀಪ ಮೆಸ್ಕಾಂನ ಹೈಟೆನ್ಸನ್ ವಿದ್ಯುತ್ ಲೈನ್ ಹಾದು ಹೋಗುವ ಪರಿಸರದಲ್ಲಿ ಅನಧಿಕೃತವಾಗಿ ಕೊರೆಯಲಾಗುತ್ತಿದ್ದ ಖಾಸಗಿ ಬೋರ್ ವೆಲ್ ಪರಿಶೀಲನೆಗೆ ಸ್ಥಳಕ್ಕಾಗಮಿಸಿ ವಿಚಾರಿಸಿದಾಗ ಗ್ರಾಮಪಂಚಾಯತ್ ಪಿ.ಡಿ.ಒ. ಮತ್ತು ಸಿಬ್ಬಂದಿಗೆ ಖಾಸಗಿ ವ್ಯಕ್ತಿಗಳು ದಿಗ್ಭಂಧನ ವಿಧಿಸಿ ಅವಮಾನಿಸಿ ಗದರಿಸಿ ಬೆದರಿಸಿದ ಘಟನೆ ತಡವಾಗಿ ಬೆಳಕಿಗೆ ಬಂದಿದೆ.
ಬೆಳ್ತಂಗಡಿ ತಾಲೂಕು ಕಳಿಯ ಗ್ರಾಮ ಪಂಚಾಯತ್ ವ್ಯಾಪ್ತಿಯ ಬಟ್ಟೆಮಾರು ಜನತಾ ಕಾಲೋನಿಯಲ್ಲಿ ಇತ್ತೀಚೆಗೆ ವಂಜಾರೆಗೆ ಹೋಗುವ ರಸ್ತೆಯ ಬದಿಯಲ್ಲೇ, ಜನವಸತಿ ಪ್ರದೇಶ, ಮೆಸ್ಕಾಮ್ ಹೈಟೆನ್ಸನ್ ವಿದ್ಯುತ್ ಲೈನ್ ಗಳು, ಪಂಚಾಯತ್ ಕೊಳವೆ ಬಾವಿ- ಪಂಪ್ ಶೆಡ್ ಪರಿಸರದಲ್ಲಿ ಸ್ಥಳೀಯರೋರ್ವರು ಗ್ರಾಮ ಪಂಚಾಯತ್ ಆಡಳಿತ ಮತ್ತು ಗಣಿ ಮತ್ತು ಭೂವಿಜ್ಞಾನ ಇಲಾಖೆಯಿಂದ ಯಾವುದೇ ಅನುಮತಿಯನ್ನು ಪಡೆಯದೇ ಅನಧಿಕೃತವಾಗಿ ಕೊಳವೆ ಬಾವಿ ಕೊರೆಯುತ್ತಿರುವ ಬಗ್ಗೆ ಗ್ರಾಮಪಂಚಾಯತ್ ಗೆ ಮಾಹಿತಿ ಬಂದಿತ್ತು.

ಗ್ರಾಮಪಂಚಾಯತ್ ಬೋರ್ ವೆಲ್ ಪರಿಸರದಲ್ಲಿ ಖಾಸಗಿ ವ್ಯಕ್ತಿ ಅನಧಿಕೃತವಾಗಿ ಬೋರ್ ವೆಲ್ ಕೊಳೆಯುತ್ತಿರುವ ಬಗ್ಗೆ
ಮಾಹಿತಿ ತಿಳಿದು ಕಳಿಯ ಗ್ರಾಮಪಂಚಾಯತ್ ಪ್ರಭಾರ ಅಭಿವೃದ್ಧಿ ಅಧಿಕಾರಿ ಕುಂಞ ಕೆ ಅವರು ಸಿಬ್ಬಂದಿಗಳೊಂದಿಗೆ
ಸ್ಥಳ ಪರಿಶೀಲನೆಗೆ ಹೋಗಿದ್ದು ಕೊಳವೆ ಬಾವಿ ಕೊರೆಯಿಸಿದ ಮನೆಯವರ ಗುಂಪು ದಲಿತ ಸಮುದಾಯದ ಪಿ. ಡಿ.ಓ ಕುಂಞ ಕೆ ಮತ್ತು ವರ್ಗದ ಸಿಬ್ಬಂದಿ ರವಿ ಎಂಬವರ ಕರ್ತವ್ಯಕ್ಕೆ ಅಡ್ಡಿಪಡಿಸಿ,ದಿಗ್ಬಂದನ ವಿಧಿಸಿ, ಗದರಿಸಿ, ಬೆದರಿಸಿ ಅವಮಾನಿಸಿದ ಘಟನೆ ನಡೆದಿದೆ.
ಈ ಬಗ್ಗೆ ಪೊಲೀಸರು ಮತ್ತು ಸಂಬಂಧಪಟ್ಟ ಅಧಿಕಾರಿಗಳು ತನಿಖೆ ನಡೆಸಿ ಕರ್ತವ್ಯನಿರತ ಅಧಿಕಾರಿ ಮತ್ತು ಸಿಬ್ಬಂದಿಗೆ ಕರ್ತವ್ಯಕ್ಕೆ ಅಡ್ಡಿಪಡಿಸಿ ಸಾರ್ವಜನಿಕವಾಗಿ ಅವಮಾನಿಸಿದ ವ್ಯಕ್ತಿಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ಸ್ಥಳೀಯ ನಾಗರಿಕರು ಒತ್ತಾಯಿಸುತ್ತಿದ್ದಾರೆ.















Post Comment