ಸೌಜನ್ಯ ಹೋರಾಟಗಾರ ಗಿರೀಶ್ ಮಟ್ಟೆಣ್ಣವರ ವಿರುದ್ಧ ಧರ್ಮಸ್ಥಳ ಠಾಣೆಯಲ್ಲಿ ದಾಖಲಾಗಿದ್ದ ಎಫ್ ಐ ಆರ್ ರದ್ದುಗೊಳಿಸಿ ಹೈಕೋರ್ಟ್ ಆದೇಶ

ಬೆಳ್ತಂಗಡಿ : ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ಸೌಜನ್ಯ ಹೋರಾಟಗಾರ ಗಿರೀಶ್ ಮಟ್ಟೆಣ್ಣವರ ಅವರ ವಿರುದ್ಧ ದಾಖಲಾಗಿದ್ದ ಎಫ್ ಐ ಆರ್ ದೂರನ್ನು ಇದೀಗ ಮಾನ್ಯ
ಹೈಕೋರ್ಟ್ ರದ್ದು ಗೊಳಿಸಿ ಪ್ರಕರಣ ಮುಕ್ತಾಯ ಗೊಳಿಸಿ ಆದೇಶ ಹೊರಡಿಸಿದೆ.
ವ್ಯಕ್ತಿ ವಿರುದ್ಧ Mud ಸ್ಲಾಗಿಂಗ್ , ವ್ಯಂಗ್ಯ ಮಾಡುವುದು ಸರಿಯಲ್ಲ. ಪ್ರಜಾಪ್ರಭುತ್ವ ರೀತಿಯಲ್ಲಿ ಅರೋಗ್ಯಕರ ಟೀಕೆ ಮಾಡುವುದು ಒಳ್ಳೆಯದು. ವ್ಯಕ್ತಿಗಳ ವಿರುದ್ದ ಅರೋಗ್ಯಕರ ಟೀಕೆಗಳಿಗೆ ಅಭ್ಯಂತರ ಇಲ್ಲ ಎಂದು ಮಾನ್ಯ ನ್ಯಾಯಾಲಯ ಬುದ್ಧಿವಾದ ಹೇಳಿದೆ.
ಮಾನ್ಯ ನ್ಯಾಯಾಲಯದ ಸೂಚನೆಗೆ ಗೌರವ ನೀಡಿ ಅರ್ಜಿದಾರ ಮತ್ತು ಹೋರಾಟಗಾರ ಗಿರೀಶ್ ಮಟ್ಟೆಣ್ಣವರ ಒಪ್ಪಿಕೊಂಡಿದ್ದಾರೆ.
ತಮ್ಮ ಸ್ವಯಂ ಪ್ರೇರಿತ ಪ್ರಮಾಣ ಪತ್ರದಲ್ಲಿ ತಾವು ಸ್ವತಃ ಶ್ರೀ ಕ್ಷೇತ್ರ ಧರ್ಮಸ್ಥಳ ಭಕ್ತರಾಗಿದ್ದು ಕ್ಷೇತ್ರದ ಕುರಿತು ಅಪಾರ ನಂಬಿಕೆ ಶ್ರದ್ಧೆ ಹೊಂದಿದ್ದು ಈ ಹಿಂದೆ ಯಾವತ್ತೂ ಕ್ಷೇತ್ರದ ಕುರಿತು ಅಪಚಾರ ಮಾಡಿಲ್ಲ. ತಮ್ಮ ಧ್ವನಿ ಸೌಜನ್ಯ ಮತ್ತು ಇತರ ಭೀಕರ ಪ್ರಕರಣಗಳ ಕುರಿತು ನ್ಯಾಯದ ಅನ್ವೇಷಣೆ ಮಾತ್ರ ಆಗಿರುತ್ತದೆ ಹೊರತು ದೇವಸ್ಥಾನದ ಅಥವಾ ದೇವರ ವಿರುದ್ಧ ಅಲ್ಲ. ಇನ್ನು ಮುಂದೆಯೂ ಅತ್ಯಾಚಾರ- ಕೊಲೆ ಕಾಣೆಯಾದ ಪ್ರಕರಣ ಹಾಗೂ ಶೋಷಣೆ ವಿರುದ್ಧ ಕಾನೂನು ರೀತಿಯಲ್ಲಿ, ಅಪವಾದ- ವಿವಾದಗಳಿಗೆ ಅವಕಾಶ ಕೊಡದೆ ಸಂತ್ರಸ್ತರು ಮತ್ತು ನೊಂದವರ, ಶೋಷಿತರ ಪರ ಧ್ವನಿ ಎತ್ತುವುದಾಗಿ ತಿಳಿಸಿದ್ದಾರೆ.

ಈ ಪ್ರಮಾಣಪತ್ರದಿಂದ ಅನ್ಯಾಯದ ವಿರುದ್ಧ ಧ್ವನಿ ಎತ್ತಲು ತಮ್ಮ ಸಾಂವಿಧಾನಿಕ ವಾಕ್ ಸ್ವಾತಂತ್ರಕ್ಕೆ ಧಕ್ಕೆ ಬರಬಾರದು ಎಂದು ನ್ಯಾಯಾಲಯಕ್ಕೆ ವಿನಮ್ರ ಪೂರಕ ಮನವಿ ಮಾಡಿಕೊಂಡಿದ್ದಾರೆ.
ಇದಕ್ಕೆ ಸ್ಪಂದಿಸಿದ ಮಾನ್ಯ ಉಚ್ಚ ನ್ಯಾಯಾಲಯವು ಅರ್ಜಿದಾರರ ಗಿರೀಶ್ ಮಟ್ಟೆಣ್ಣವರ ವಾಕ್ ಸ್ವತಂತ್ರ (Freedom of Speech) ತಡೆಯುವ ಹಾಗಿಲ್ಲ ಎಂದು ಅಭಯ ನೀಡಿ ಆರೋಗ್ಯಕರ ಟೀಕೆ ಪ್ರಶ್ನೆಗಳಿಗೆ ಅವಕಾಶ ಇದೆ ಎಂದು ಸೂಚನೆ ನೀಡಿದೆ.
ಅರ್ಜಿದಾರರ ಪರವಾಗಿ ಸಾಮಾಜಿಕ ಕಾಳಜಿ ಹೊಂದಿದ ಯುವ
ಹೈಕೋರ್ಟ್ ಮತ್ತು ಸುಪ್ರೀಂ ಕೋರ್ಟ್ ಯುವ ನ್ಯಾಯವಾದಿ ರಂಗನಾಥ ರೆಡ್ಡಿ ಅವರು ” ನಮ್ಮ ಅರ್ಜಿದಾರರು ಸೌಜನ್ಯ ನ್ಯಾಯಪರ ಹೋರಾಟದಲ್ಲಿ ತೊಡಗಿಸಿಕೊಂಡಿದ್ದರಿಂದ ಈ ರೀತಿ ಆಪಾದನೆಗಳು ಬರುತ್ತಿವೆ. ಅವರು ಯಾವತ್ತೂ ದೇವಸ್ಥಾನ ಅಥವಾ ದೇವರ ವಿರುದ್ಧ ಅಪಚಾರ ಮಾಡಿಲ್ಲ. ಅವರು ಸ್ವತಃ ದೇವಸ್ಥಾನದ ಭಕ್ತರಾಗಿದ್ದು ದೇವಸ್ಥಾನದ ಕುರಿತು ಅಪಾರ ನಂಬಿಕೆ ಭಕ್ತಿ ಶ್ರದ್ಧೆ ಹೊಂದಿರುತ್ತಾರೆ. ಅವರು ಮಾನ್ಯ ನ್ಯಾಯಾಲಯದ ಆದೇಶಗಳನ್ನು ಗೌರವಯುತವಾಗಿ ಪಾಲಿಸುತ್ತಾರೆ ಎಂದು ವಾದ ಮಂಡಿಸಿದರು.

ನ್ಯಾಯವಾದಿ ರಾಜವರ್ಧನ್ ರೆಡ್ಡಿ ಹಾಗೂ ಗೌರವ್ ಜೊತೆಗಿದ್ದರು.
ಮಾನ್ಯ ಕರ್ನಾಟಕ ಉಚ್ಚ ನ್ಯಾಯಾಲಯ ನೀಡಿರುವ ಈ ಆದೇಶದಿಂದ ನ್ಯಾಯಪರ ಹೋರಾಟಕ್ಕೆ ಹೆಚ್ಚಿನ ನೈತಿಕ ಬಲ ಬಂದಿದೆ. ಸೌಜನ್ಯ ನ್ಯಾಯಪರ ಹೋರಾಟಗಾರ ಅರ್ಜಿದಾರ ಗಿರೀಶ ಮಟ್ಟೆಣ್ಣವರ ಪರ ನ್ಯಾಯಾವಾದಿ ರಂಗನಾಥ ರೆಡ್ಡಿ ಮತ್ತು ತಂಡ ವಾದ ಮಂಡಿಸಿ ಪ್ರಕರಣ ಖುಲಾಸೆಗೊಳಿಸುವಲ್ಲಿ ಯಶಸ್ವಿಯಾದರು.














Post Comment